ADVERTISEMENT

ರಂಗಭೂಮಿಯಿಂದ ಚಿಂತನೆಗೆ ಪ್ರೇರಣೆ

ವಿಶ್ವ ರಂಗಭೂಮಿ ದಿನಾಚರಣೆಯಲ್ಲಿ ನಿರ್ದೇಶಕ ಪ್ರೊ.ರಾಮ್‌ದಾಸ್‌

​ಪ್ರಜಾವಾಣಿ ವಾರ್ತೆ
Published 28 ಮಾರ್ಚ್ 2016, 4:41 IST
Last Updated 28 ಮಾರ್ಚ್ 2016, 4:41 IST
ಉಡುಪಿಯ ಡಾ. ಎ.ವಿ. ಬಾಳಿಗಾ ಆಸ್ಪತ್ರೆಯಲ್ಲಿ ನಡೆದ ವಿಶ್ವ ರಂಗಭೂಮಿ ದಿನಾಚರಣೆ ಕಾರ್ಯಕ್ರಮದಲ್ಲಿ ರಂಗ ನಿರ್ದೇಶಕ ಪ್ರೊ. ರಾಮದಾಸ್‌  ಮಾತನಾಡಿದರು.ಪ್ರಜಾವಾಣಿ ಚಿತ್ರ
ಉಡುಪಿಯ ಡಾ. ಎ.ವಿ. ಬಾಳಿಗಾ ಆಸ್ಪತ್ರೆಯಲ್ಲಿ ನಡೆದ ವಿಶ್ವ ರಂಗಭೂಮಿ ದಿನಾಚರಣೆ ಕಾರ್ಯಕ್ರಮದಲ್ಲಿ ರಂಗ ನಿರ್ದೇಶಕ ಪ್ರೊ. ರಾಮದಾಸ್‌ ಮಾತನಾಡಿದರು.ಪ್ರಜಾವಾಣಿ ಚಿತ್ರ   

ಉಡುಪಿ: ಜನರನ್ನು ಚಿಂತನೆಗೆ ಹಚ್ಚುವುದು ರಂಗಭೂಮಿಯ ಉದ್ದೇಶವೇ ಹೊರತು ಕೇವಲ ಮನರಂಜನೆ ಅಲ್ಲ ಎಂದು ರಂಗ ನಿರ್ದೇಶಕ ಪ್ರೊ. ರಾಮದಾಸ್‌ ಅಭಿಪ್ರಾಯಪಟ್ಟರು.

ಡಾ. ಎ.ವಿ. ಬಾಳಿಗಾ ಆಸ್ಪತ್ರೆ ಹಾಗೂ ಕರ್ನಾಟಕ ನಾಟಕ ಅಕಾಡೆಮಿ ಬಾಳಿಗಾ ಆಸ್ಪತ್ರೆಯ ಕಮಲ್‌ ಬಾಳಿಗಾ ಸಭಾಂಗಣದಲ್ಲಿ ಭಾನುವಾರ ಏರ್ಪಡಿಸಿದ್ದ ವಿಶ್ವ ರಂಗಭೂಮಿ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಪ್ರಸ್ತುತ ನಾಟಕಗಳು ಕೇವಲ ಯಶಸ್ವಿ ಪ್ರದರ್ಶನ ಕಾಣುತ್ತಿವೆ. ನಾವು ಇಷ್ಟಕ್ಕೆ ತೃಪ್ತಿಪಟ್ಟುಕೊಳ್ಳದೆ ಅಂದುಕೊಂಡ ಉದ್ದೇಶವನ್ನು ಸಾಧಿಸಬೇಕು ಎಂದರು.
ಅಲ್ಲದೇ ರಂಗದ ಮೇಲೆ ಬಂದು ಹೋಗುವ ಪ್ರತಿ ಪಾತ್ರವೂ ಜನರನ್ನು ಭಿನ್ನ ರೀತಿಯ ಚಿಂತನೆಗೆ ಹಚ್ಚಬೇಕು ಎಂದರು.

ಕಲಾವಿದನೊಬ್ಬ ತನ್ನ ಅದ್ಭುತ ಅಭಿನಯ ಹಾಗೂ ಮಾತಿನ ಮೂಲಕ ಪ್ರೇಕ್ಷಕನನ್ನು ಸೆಳೆಯುತ್ತಿದ್ದ. ಆದರೆ ಈಗ ಮಾತು ಮತ್ತು ಅಭಿನಯಕ್ಕಿಂತ ತಾಂತ್ರಿಕತೆಗೆ ಹೆಚ್ಚಿನ ಪ್ರಾಧಾನ್ಯ ಸಿಗುತ್ತಿದೆ. ಈ ರೀತಿ ಮಾಡುವುದರಿಂದ ಸೀಮಿತವಾದ ದೃಶ್ಯವನ್ನು ಕಟ್ಟಿಕೊಡಬಹುದು ಎಂದು ಹೇಳಿದರು.

ಈಗಿನ ರಂಗಭೂಮಿ ಬದಲಾವಣೆಗಳಿಗೆ ಒಗ್ಗಿಕೊಂಡು ಮುಂದುವರೆಯುತ್ತಿದೆ. ಬಿ.ವಿ. ಕಾರಂತರು ನಿರ್ದೇಶಿಸುತ್ತಿದ್ದ ನಾಟಕಗಳಲ್ಲಿ ಕಡಿಮೆ ಕಲಾವಿದರು ಇರುತ್ತಿದ್ದರು. ಆದರೆ ಪ್ರತಿ ಕಲಾವಿದನಿಗೆ ಒಂದೇ ನಾಟಕದಲ್ಲಿ ಐದಾರು ಪಾತ್ರಗಳಿರುತ್ತಿದ್ದವು.

ಅಂತಹ ಪ್ರಯೋಗದಿಂದ ಪ್ರೇಕ್ಷಕ ಒಬ್ಬ ಕಲಾವಿದನನ್ನು ಒಂದೇ ಒಂದು ಪಾತ್ರಕ್ಕೆ ಸೀಮಿತಗೊಳಿಸಿ ನೋಡುವುದು ತಪ್ಪುತ್ತಿತ್ತು. ಆತನ ಒಳಗಿರುವ ಸುಪ್ತ ಪ್ರತಿಭೆಯ ಹಲವು ಮುಖಗಳು ಅನಾವರಣವಾಗುತ್ತಿತ್ತು. ಸಿನಿಮಾದಲ್ಲಿ ವ್ಯಕ್ತಿ ಪೂಜೆಗೆ ಅವಕಾಶ ಇದೆ, ಆದರೆ ರಂಗಭೂಮಿಯಲ್ಲಿ ಇಲ್ಲ ಎಂದು ಹೇಳಿದರು. 
ಸಭಾ ಕಾರ್ಯಕ್ರಮಕ್ಕೂ ಮೊದಲು ಗಣೇಶ್‌ ಎಂ. ನೀನಾಸಂ ಅವರ ಸಂಗಮ ತಂಡ ರಂಗಗೀತೆಗಳನ್ನು ಹಾಡಿತು. 

ಡಾ. ಎ.ವಿ. ಬಾಳಿಗಾ ಸಮೂಹ ಸಂಸ್ಥೆಯ ನಿರ್ದೇಶಕ ಡಾ. ಪಿ.ವಿ. ಭಂಡಾರಿ, ರಂಗಕರ್ಮಿ ಬಿ.ಎಸ್‌. ಲವಕುಮಾರ್‌, ರಂಗನಟಿ ಶಿಲ್ಪಾ ಜೋಶಿ, ಡಾ. ಕೆ.ಪಿ. ರಾವ್‌, ಕುಗೋ, ಮುರಳೀಧರ ಉಪಾಧ್ಯಾಯ  ಮತ್ತಿತರರು ಉಪಸ್ಥಿತರಿದ್ದರು.  ಡಾ. ವಿರೂಪಾಕ್ಷ ದೇವರುಮನೆ ಸ್ವಾಗತಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.