ADVERTISEMENT

ಶುಲ್ಕ ರಹಿತ ಡಿಜಿಟಲ್ ವ್ಯವಹಾರ ಪೋತ್ಸಾಹಿಸಿ

​ಪ್ರಜಾವಾಣಿ ವಾರ್ತೆ
Published 5 ಜುಲೈ 2017, 9:50 IST
Last Updated 5 ಜುಲೈ 2017, 9:50 IST

ಉಡುಪಿ: ಜಿಲ್ಲೆಯ 158 ಗ್ರಾಮ ಪಂಚಾ ಯಿತಿಗಳಲ್ಲಿ 41 ಪಂಚಾಯಿತಿಗಳಲ್ಲಿ ಪಿಒಎಸ್‌ ಸಾಧನದ ಮೂಲಕ ನಗದು ರಹಿತ ವ್ಯವಹಾರಕ್ಕೆ ಚಾಲನೆ ನೀಡ ಲಾಗಿತ್ತು. ಆದರೆ, ವ್ಯವಹಾರಕ್ಕೆ ವಿಧಿಸುವ ಶುಲ್ಕ ಹೊರೆಯಾಗಿರುವುದರಿಂದ ಸ್ಥಗಿತಗೊಂಡಿದೆ ಎಂದು ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ತಿಳಿಸಿದರು. ಉಡುಪಿ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ನಡೆದ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ ಸಭೆಯಲ್ಲಿ ಮಾತನಾಡಿದರು.

ಇದಕ್ಕೆ ಪ್ರತಿಕ್ರಿಯಿಸಿದ ಲೀಡ್ ಬ್ಯಾಂಕ್ ವ್ಯವಸ್ಥಾಪಕ ಫ್ರಾನ್ಸಿಸ್ ಬೋರ್ಜಿಯಾ, ‘ಬ್ಯಾಂಕ್‌ಗಳು ಈ ಶುಲ್ಕ ವಿಧಿಸುತ್ತವೆ. ಬ್ಯಾಂಕ್‌ನಿಂದ ಬ್ಯಾಂಕ್‌ಗೆ ಶುಲ್ಕದ ಪ್ರಮಾಣದಲ್ಲಿ ವ್ಯತ್ಯಾಸವಿದೆ’ ಎಂದರು. ‘ಗ್ರಾಮ ಪಂಚಾಯಿತಿಗಳಲ್ಲಿ ಸಾಧ್ಯವಾದಷ್ಟು ಶುಲ್ಕ ರಹಿತ ಡಿಜಿಟಲ್ ವ್ಯವಹಾರಕ್ಕೆ ಪೋತ್ಸಾಹಿಸಿ. ಮೊಬೈಲ್ ಬ್ಯಾಂಕಿಂಗ್, ಕ್ಯೂ.ಆರ್ ಕೋಡ್ ಮೂಲಕ ವ್ಯವಹರಿಸಲು ಅನುಕೂಲ ವಾಗುವಂತೆ ತರಬೇತಿ ನೀಡಿ. ತಮ್ಮ ವ್ಯಾಪ್ತಿಯ ಗ್ರಾಮ ಪಂಚಾಯಿತಿಯನ್ನು ಪ್ರತಿಯೊಂದು ಬ್ಯಾಂಕ್‌ಗಳು ದತ್ತು ತೆಗೆದುಕೊಂಡರೆ ಅನುಕೂಲ’ ಎಂದು ಶೋಭಾ ಹೇಳಿದರು.

ಉಡುಪಿ ತಾಲ್ಲೂಕಿನಿಂದ 11 ಸಾವಿರ, ಕಾರ್ಕಳ ಮತ್ತು ಕುಂದಾಪುರ ತಾಲ್ಲೂಕಿನಿಂದ ಕ್ರಮವಾಗಿ 7,749 ಹಾಗೂ 7,618 ಅರ್ಜಿ ಸೇರಿ ಒಟ್ಟು 26,367 ಅರ್ಜಿಗಳು ನಿವೇಶನಕ್ಕಾಗಿ ಬಂದಿವೆ. ಬಸವ ವಸತಿ ಯೋಜನೆಯಡಿ ಯಲ್ಲಿ 3 ಸಾವಿರ ಮನೆಗಳನ್ನು ನಿವೇಶನ ರಹಿತರಿಗೆ ನೀಡಲಾಗುವುದು ಎಂದು ಜಿಲ್ಲಾ ಯೋಜನಾಧಿಕಾರಿ ನಯನಾ ತಿಳಿಸಿದರು.

ADVERTISEMENT

ಬಿಎಸ್‌ಎನ್‌ಎಲ್ ನೆಟ್‌ವರ್ಕ್ ಆಗಾಗ್ಗೆ ಕೈಕೊಡುತ್ತಿರುವ ಬಗ್ಗೆ ಸಾಕಷ್ಟು ದೂರುಗಳು ಬಂದಿವೆ. ಜನರೇಟರ್‌ಗೆ ಸಾಕಷ್ಟು ಪ್ರಮಾಣದಲ್ಲಿ ಡೀಸೆಲ್ ನೀಡುತ್ತಿದ್ದರೂ ಏಕೆ ಈ ಸಮಸ್ಯೆ ಎಂದು ಅಧಿಕಾರಿಗಳನ್ನು ಸಂಸದೆ ಪ್ರಶ್ನಿಸಿದರು. ಗುಡುಗು, ಮಿಂಚು ಅಧಿಕ ಇರುವ ಸಮಯದಲ್ಲಿ ತೊಂದರೆ ಆಗುತ್ತಿದೆ. ಅಗತ್ಯ ಇರುವಷ್ಟು ಡೀಸೆಲ್ ಸಹ ಪೂರೈಕೆ ಆಗುತ್ತಿಲ್ಲ ಎಂದು ಅಧಿಕಾರಿ ಗಳು ತಿಳಿಸಿದರು. ಜಿಲ್ಲೆಯಲ್ಲಿ ಈಗಾಗಲೇ 119 2ಜಿ ಹಾಗೂ 3ಜಿ ಟವರ್‌ಗಳನ್ನು ಅಳವಡಿಸಲಾಗಿದೆ. ಜಿಲ್ಲೆಗೆ ಇನ್ನೂ 100 ಟವರ್‌ಗಳ ಅಗತ್ಯವಿದೆ ಎಂದರು.

ಆಧಾರ ಜೋಡಣೆಯಾಗದ ರೇಷನ್ ಕಾರ್ಡ್‌ಗಳನ್ನು ರದ್ದು ಮಾಡ ಲಾಗಿದೆ. ಹೊಸ ಕಾರ್ಡ್‌ಗಳನ್ನು ಸಹ ನೀಡುತ್ತಿಲ್ಲ, ಈ ಬಗ್ಗೆ ಮಾಹಿತಿ ಅಧಿಕಾರಿ ಗಳು ನೀಡುತ್ತಿಲ್ಲ ಎಂದು ಸಮನ್ವಯ ಸಮಿತಿ ಸದಸ್ಯರು ಆರೋಪಿಸಿದರು.

ಆಧಾರ್ ಜೋಡಣೆಯಾಗದ 1.20 ಲಕ್ಷ ಹೆಸರುಗಳನ್ನು ಕಾರ್ಡ್‌ನಿಂದ ರದ್ದುಪಡಿಸಲಾಗಿದೆ ಹಾಗೂ ಆಹಾರ ಪದಾರ್ಥವನ್ನೂ ನೀಡುತ್ತಿಲ್ಲ. 300 ನ್ಯಾಯಬೆಲೆ ಅಂಗಡಿಗಳಿಗೆ 40 ಪಿಒಎಸ್ ಸಾಧನ ನೀಡಲಾಗಿದ್ದು, ಇದನ್ನು ಬಳಸುತ್ತಿರುವವರಿಗೆ ಅಧಿಕ ಕಮಿಷನ್‌ ನೀಡಲಾಗುತ್ತಿದೆ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯ ಉಪ ನಿರ್ದೇಶಕ ಸದಾಶಿವಪ್ಪ ಮಾಹಿತಿ ನೀಡಿದರು. ಹೆಚ್ಚುವರಿ ಜಿಲ್ಲಾಧಿಕಾರಿ ಜಿ. ಅನುರಾಧ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.