ADVERTISEMENT

ಸಿಐಟಿಯು ಕಾರ್ಯಕರ್ತರ ಪ್ರತಿಭಟನೆ

ಕೇಂದ್ರದ ಕಾರ್ಮಿಕ ಹಾಗೂ ಜನವಿರೋಧಿ ನೀತಿಗಳಿಗೆ ವಿರೋಧ

​ಪ್ರಜಾವಾಣಿ ವಾರ್ತೆ
Published 27 ಮೇ 2015, 5:04 IST
Last Updated 27 ಮೇ 2015, 5:04 IST
ಕೇಂದ್ರ ಸರ್ಕಾರ ಕಾರ್ಮಿಕ ಮತ್ತು ಜನವಿರೋಧಿ ನೀತಿ ಅನುಸರಿಸುತ್ತಿದೆ ಎಂದು ಆರೋಪಿಸಿ  ನಗರದ ಸರ್ವೀಸ್‌ ಬಸ್‌ ನಿಲ್ದಾಣದ ಎದುರು ಮಂಗಳವಾರ ಪ್ರತಿಭಟನೆ ನಡೆಸಿದ ಸಿಐಟಿಯು ಸಂಘಟನೆಯ ಸದಸ್ಯರು ಕೇಂದ್ರ ಸರ್ಕಾರದ ಭೂತ ದಹನ ಮಾಡಿ ಆಕ್ರೋಶ ವ್ಯಕ್ತಪಡಿಸಿದರು.
ಕೇಂದ್ರ ಸರ್ಕಾರ ಕಾರ್ಮಿಕ ಮತ್ತು ಜನವಿರೋಧಿ ನೀತಿ ಅನುಸರಿಸುತ್ತಿದೆ ಎಂದು ಆರೋಪಿಸಿ ನಗರದ ಸರ್ವೀಸ್‌ ಬಸ್‌ ನಿಲ್ದಾಣದ ಎದುರು ಮಂಗಳವಾರ ಪ್ರತಿಭಟನೆ ನಡೆಸಿದ ಸಿಐಟಿಯು ಸಂಘಟನೆಯ ಸದಸ್ಯರು ಕೇಂದ್ರ ಸರ್ಕಾರದ ಭೂತ ದಹನ ಮಾಡಿ ಆಕ್ರೋಶ ವ್ಯಕ್ತಪಡಿಸಿದರು.   

ಉಡುಪಿ: ಕೇಂದ್ರ ಸರ್ಕಾರದ ಕಾರ್ಮಿಕ ಮತ್ತು ಜನವಿರೋಧಿ ನೀತಿಯನ್ನು ವಿರೋಧಿಸಿ ಸಿಐಟಿಯು ಸಂಘಟನೆಯ ಸದಸ್ಯರು ನಗರದ ಸರ್ವೀಸ್‌ ಬಸ್‌ ನಿಲ್ದಾ ಣದ ಎದುರು ಮಂಗಳವಾರ ಪ್ರತಿಭಟನೆ ನಡೆಸಿದರು.

ಕೇಂದ್ರ ಸರ್ಕಾರ ದೇಶದ ಮತ್ತು ವಿದೇಶಗಳ ದೊಡ್ಡ ಬಂಡವಾಳಗಾರರಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಿಂದ 44 ಕಾರ್ಮಿಕ ಕಾನೂನುಗಳ ಬದಲಾಗಿ ಕೇವಲ ನಾಲ್ಕು ಕಾನೂನನ್ನು ಮಾತ್ರ ಅನುಷ್ಠಾನಗೊಳಿಸಲು ಹೊರಟಿದೆ. ಕನಿಷ್ಠ ವೇತನ ಕಾಯ್ದೆ, ವೇತನ ಪಾವತಿ ಕಾಯಿದೆ, ಬೋನಸ್‌ ಕಾಯ್ದೆ ಮತ್ತು ಸಮಾನ ವೇತನ ಕಾಯ್ದೆಗಳನ್ನು ರದ್ದು ಗೊಳಿಸುವ ಉದ್ದೇಶದಿಂದ ‘ಲೇಬರ್‌ ಕೋಡ್‌ ಆನ್‌ ವೇಜಸ್‌’ (ವೇತನಗಳಿಗೆ ಸಂಬಂಧಿಸಿದ ಸಂಹಿತೆ) ಮಸೂದೆಯನ್ನು ಜಾರಿಗೊಳಿಸಿದೆ.

ಅದರಲ್ಲಿ ಕಾರ್ಮಿಕರ ತುಟ್ಟಿ ಭತ್ಯೆ, ಪಿಎಫ್‌, ಪಿಂಚಣಿ ಹಾಗೂ ಇಎಸ್‌ಐ ಸೌಲಭ್ಯವನ್ನು ರದ್ದುಗೊಳಿಸಲು ಪ್ರಯತ್ನಿಸುತ್ತಿದೆ. ಹಾಗೆಯೇ ಕನಿಷ್ಠ ವೇತನ ನಿಗದಿಗೊಳಿಸಲು ಅವಕಾಶ ನೀಡಲಾಗಿದೆ ಎಂದು ಆರೋಪಿಸಿದರು. ಕೇಂದ್ರ ಸರ್ಕಾರವು ಅಂಗನವಾಡಿ, ಬಿಸಿಯೂಟ, ಗ್ರಾಮೀಣ ಆರೋಗ್ಯ ಮಿಷನ್‌, ಉದ್ಯೋಗ ಖಾತ್ರಿ ಮತ್ತು ಕಲ್ಯಾಣ ಯೋಜನೆಗಳಿಗೆ ಅನುದಾನ ವನ್ನು ಕಡಿತಗೊಳಿಸಿದೆ.ಭೂ ಸ್ವಾಧೀನ ಕಾಯ್ದೆಯನ್ನು ಜಾರಿಗೆ ತರುವ ಮೂಲಕ ರೈತರ ಒಪ್ಪಿಗೆ ಇಲ್ಲದೇ ಭೂಮಿ ಯನ್ನು ವಶಪಡಿಸಿಕೊಳ್ಳಲು ಅವಕಾಶ ಕಲ್ಪಿಸಿದೆ ಎಂದರು.

ಸಿಐಟಿಯು ಸಂಘಟನೆಯ ಉಪಾ ಧ್ಯಕ್ಷ ವಿಶ್ವನಾಥ ರೈ ಮಾತನಾಡಿ, ಹಿಂದೆ ಭೂ ಮಾಲೀಕರು ಕಾರ್ಮಿಕರನ್ನು ತಮ್ಮ ಗುಲಾಮರಂತೆ ನೋಡುತ್ತಿದ್ದರು. ಅದೇ ರೀತಿ ಇಂದಿನ ಕೇಂದ್ರ ಸರ್ಕಾರ ಜನರನ್ನು ನಡೆಸಿಕೊಳ್ಳುತ್ತಿದೆ. ಜನ ವಿರೋಧಿ ನೀತಿಗಳ ಮೂಲಕ ಬಡಜನರ ಬದು ಕನ್ನು ಕಸಿದುಕೊಳ್ಳುತ್ತಿದೆ. ಕಾರ್ಮಿ ಕರ ಕಾನೂನುಗಳನ್ನು ರದ್ದುಗೊಳಿಸಿ, ಕಾರ್ಮಿ ಕರ ಸೌಲಭ್ಯಗಳನ್ನು ಕಿತ್ತುಕೊಳ್ಳಲು ಪ್ರಯತ್ನಿಸುತ್ತಿದೆ ಎಂದು ದೂರಿದರು.

ಸಿಐಟಿಯು ಸಂಘಟನೆಯ ಪ್ರಧಾನ ಕಾರ್ಯದರ್ಶಿ ಬಾಲಕೃಷ್ಣ ಶೆಟ್ಟಿ ಮಾತ ನಾಡಿ, ಹತ್ತು ದಿನಗಳ ಹಿಂದೆ ಅಂತರ ರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಏರಿಕೆಯಾಗಿದೆಂಬ ನೆಪ ಹೇಳಿ ಪೆಟ್ರೋಲ್‌ ಮತ್ತು ಡಿಸೇಲ್‌ನ ಬೆಲೆ ಏರಿಕೆ ಮಾಡಿದೆ. ಆದರೆ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ  ಶೇಕಡಾ 34ರಷ್ಟು ಇಳಿಕೆಯಾಗಿದ್ದರೂ, ಪೆಟ್ರೋಲ್‌ ಬೆಲೆ ಶೇ 7 ಮತ್ತು ಡಿಸೇಲ್‌ನ ಬೆಲೆ ಶೇ. 6ರಷ್ಟು ಮಾತ್ರ ಇಳಿಕೆ ಮಾಡಿದೆ.

ಆದರೂ  ಇಂಧನ ಬೆಲೆ ಕಡಿಮೆ ಮಾಡಿ ದ್ದೇವೆ ಎಂದು ಪ್ರಚಾರ ಮಾಡುತ್ತಾ ಸಾಮಾನ್ಯ ಜನರ ಜೇಬಿಗೆ ಕತ್ತರಿ ಹಾಕುವ ಕೆಲಸವನ್ನು ಕೇಂದ್ರ ಸರ್ಕಾರ ಮಾಡುತ್ತಿದೆ ಎಂದು ಆರೋಪಿಸಿದರು. ಈ ಸರ್ಕಾರಕ್ಕೆ ನಿಜವಾಗಿಯೂ ಜನರ ಹಾಗೂ ರೈತರ ಬಗ್ಗೆ ಕಾಳಜಿ ಇಲ್ಲ. ಜನರನ್ನು ಆರ್ಥಿಕವಾಗಿ ಹೇಗೆ ಸಬಲ ರನ್ನಾಗಿ ಮಾಡಬೇಕು.

ದೇಶದ ಕೃಷಿ ಯನ್ನು ಉಳಿಸಿ ರೈತರನ್ನು ಹೇಗೆ ಕಾಪಾಡಿ ಕೊಳ್ಳಬೇಕು ಎಂಬುದರ ಬಗ್ಗೆ ಚಿಂತಿ ಸದೇ ಕೇವಲ ಘೋಷಣಾ ವ್ಯಾಕ್ಯಗಳ ಮೂಲಕ ಜನರನ್ನು ಮರಳು ಮಾಡುವ ಕೆಲಸ ಮಾಡುತ್ತಿದೆ ಎಂದರು.

ಕೆ. ಲಕ್ಷ್ಮಣ, ಉಮೇಶ್‌ ಕುಂದರ್‌, ನಳಿನಿ, ಸುಗಂಧಿ, ಸುಜಾತ ಶೆಟ್ಟಿ, ಸುರೇಂದ್ರ ಸುರೇಶ್‌ ಅಮೀನ್‌, ರಾಮ ಕಾರ್ಕಳ, ಕವಿರಾಜ್‌, ವಿದ್ಯಾರಾಜ್‌ ಸೇರಿದಂತೆ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.