ADVERTISEMENT

ಸೇವೆಗೆ ಪೇಜಾವರ ಶ್ರೀ ಪ್ರೇರಣೆ: ಹೆಗ್ಗಡೆ

​ಪ್ರಜಾವಾಣಿ ವಾರ್ತೆ
Published 3 ಜನವರಿ 2018, 7:16 IST
Last Updated 3 ಜನವರಿ 2018, 7:16 IST
ಉಡುಪಿಯಲ್ಲಿ ಮಂಗಳವಾರ ನಡೆದ ಕಾರ್ಯಕ್ರಮದಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆ ಅವರನ್ನು ಪರ್ಯಾಯ ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ ಸನ್ಮಾನಿಸಿದರು. –ಪ್ರಜಾವಾಣಿ ಚಿತ್ರ
ಉಡುಪಿಯಲ್ಲಿ ಮಂಗಳವಾರ ನಡೆದ ಕಾರ್ಯಕ್ರಮದಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆ ಅವರನ್ನು ಪರ್ಯಾಯ ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ ಸನ್ಮಾನಿಸಿದರು. –ಪ್ರಜಾವಾಣಿ ಚಿತ್ರ   

ಉಡುಪಿ: ‘ನನ್ನ ಎಲ್ಲ ಕಾರ್ಯಕ್ರಮಗಳಿಗೆ, ಸೇವೆಗೆ ಪರ್ಯಾಯ ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ ಅವರೇ ಪ್ರೇರಣೆ’ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆ ಹೇಳಿದರು.

ಧರ್ಮಾಧಿಕಾರಿಯಾಗಿ 50 ವರ್ಷ ಪೂರೈಸಿರುವ ಅಂಗವಾಗಿ ಉಡುಪಿಯ ನಾಗರಿಕರು, ಭಕ್ತರ ಸಹಯೋಗದಲ್ಲಿ ಪರ್ಯಾಯ ಪೇಜಾವರ ಮಠ ಮಂಗಳವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ‘ರಾಷ್ಟ್ರ ರತ್ನ’ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದರು.

‘ಸ್ಥಿತಿವಂತರ ಕುಟುಂಬದಲ್ಲಿ ಹುಟ್ಟಿದ ನಾನು ಬಡತನವನ್ನು ಕಣ್ಣಾರೆ ನೋಡಿರಲಿಲ್ಲ. ಆದರೆ, ಕಲಬುರ್ಗಿಯಲ್ಲಿ 1969ರಲ್ಲಿ ತೀವ್ರ ಬರಗಾಲ ಬಂದು ಜನರು ಸಂಕಷ್ಟಕ್ಕೆ ಒಳಗಾಗಿದ್ದರು. ಅಲ್ಲಿನ ಜನರಿಗೆ ಸಹಾಯ ಮಾಡಲು ಪೇಜಾವರ ಸ್ವಾಮೀಜಿ ಅವರೊಂದಿಗೆ ನಾನು ಸಹ ಹೋಗಿದ್ದೆ. ಬರಗಾಲ, ಬಡತನ ಹಾಗೂ ಜನರ ಬವಣೆಯನ್ನು ನೋಡಿದ ನನ್ನಲ್ಲಿ ಬದಲಾವಣೆ ಬಂತು. ಮನಸ್ಸು ಪರಿವರ್ತನೆ ಆಯಿತು’ ಎಂದು ಅವರು ಹಳೆಯ ಸನ್ನಿವೇಶವನ್ನು ನೆನಪು ಮಾಡಿಕೊಂಡರು.

ADVERTISEMENT

ಈಶಾನ್ಯ ರಾಜ್ಯಗಳಿಗೆ ಕೊಡುಗೆ ನೀಡಿ

ಸ್ವಾತಂತ್ರ್ಯ ಬಂದು 70 ವರ್ಷಗಳಾದರೂ ಈಶಾನ್ಯದ 8 ರಾಜ್ಯಗಳ ಜನರ ಸ್ಥಿತಿ ಇನ್ನೂ ಉತ್ತಮವಾಗಿಲ್ಲ. ದೇಶದ ಸಮಗ್ರತೆಗೆ ಆ ಭಾಗದಲ್ಲಿ ಇನ್ನೂ ಅಪಾಯ ಇದೆ ಎಂದು ನಾಗಾಲ್ಯಾಂಡ್ ರಾಜ್ಯಪಾಲ ಪಿ.ಬಿ. ಆಚಾರ್ಯ ಹೇಳಿದರು.

200ಕ್ಕೂ ಅಧಿಕ ತೀವ್ರಗಾಮಿ ಗುಂಪುಗಳು ಅಲ್ಲಿ ಸಕ್ರಿಯವಾಗಿವೆ. ಅರುಣಾಚಲ ಪ್ರದೇಶ ಭಾರತದ ಭಾಗ ಎಂದು ಚೀನಾ ಈಗಲೂ ಒಪ್ಪುತ್ತಿಲ್ಲ. ನಾಗಾಲ್ಯಾಂಡ್‌ನಲ್ಲಿ 5 ವಿಶ್ವವಿದ್ಯಾಲಯ ಇದ್ದರೆ ಅದರಲ್ಲಿ 2 ಕ್ರಿಶ್ಚಿಯನ್ ವಿ.ವಿಗಳಾಗಿವೆ. ಅಲ್ಲಿನ ಜನರ ಸೇವೆಯನ್ನು ಅವರು ಮಾಡುತ್ತಿದ್ದಾರೆ ಎಂದರು.

ದಕ್ಷಿಣ ಕನ್ನಡ, ಉಡುಪಿಯ ಜನರು ಸಹ ಆ ರಾಜ್ಯಗಳ ಪ್ರಗತಿಗೆ ಕೊಡುಗೆ ನೀಡಬೇಕು. ವೀರೇಂದ್ರ ಹೆಗ್ಗಡೆ ಅವರೂ ಸಹ ಅಲ್ಲಿಗೆ ಬಂದು ಸೇವೆ ಮಾಡಬೇಕು ಎಂದು ಆಹ್ವಾನ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.