ಶಿರಸಿ: ತಾಲ್ಲೂಕಿನ ಭೈರುಂಬೆ ಅರಣ್ಯ ಪ್ರದೇಶದಲ್ಲಿ ಬೆಳೆದಿದ್ದ ಬಿದಿರನ್ನು ಅವ್ಯಾಹತವಾಗಿ ಕಟಾವು ಮಾಡಿರುವ ಬಗ್ಗೆ ಗ್ರಾಮ ಅರಣ್ಯ ಸಮಿತಿ ಪದಾಧಿಕಾರಿಗಳು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಗುತ್ತಿಗೆದಾರರು ಸರ್ಕಾರದ ಪರವಾನಗ ಪತ್ರ ಪಡೆದಿದ್ದಲ್ಲಿ ಅದನ್ನು ಹಾಜರುಪಡಿಸಬೇಕು. ಇಲ್ಲವಾದಲ್ಲಿ ಕಟಾವು ಮಾಡಿರುವ ಬಿದಿರನ್ನು ತೆಗೆದುಕೊಂಡು ಹೋಗಲು ಬಿಡುವುದಿಲ್ಲ ಎಂದು ಎಚ್ಚರಿಸಿದ್ದಾರೆ.
ಭೈರುಂಬೆ ಪಂಚಾಯ್ತಿ ವ್ಯಾಪ್ತಿಯ ಬೆಳಲೆ, ಭೈರುಂಬೆ ಹಾಗೂ ಸದಾಶಿವಳ್ಳಿ ಅರಣ್ಯ ಭಾಗದಲ್ಲಿ ಸುಮಾರು 200 ಎಕರೆ ಅರಣ್ಯ ಪ್ರದೇಶದಲ್ಲಿ ಹೇರಳವಾಗಿ ಬಿದಿರು ಬೆಳೆದಿದೆ.
ಕಳೆದ 20 ದಿನಗಳಿಂದ ಅವೈಜ್ಞಾನಿಕವಾಗಿ ಇಲ್ಲಿ ಬಿದಿರು ಕಟಾವು ನಡೆಯುತ್ತಿದೆ. ಈ ಬಗ್ಗೆ ಗ್ರಾಮಸ್ಥರು ಪ್ರಶ್ನಿಸಿದರೆ ಗುತ್ತಿಗೆದಾರರು ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳು ಸರ್ಕಾರದಿಂದ ಪಡೆದಿರುವ ಅನುಮತಿ ಪತ್ರವನ್ನು ನೀಡುತ್ತಿಲ್ಲ ಎಂದು ಅರಣ್ಯ ಸಮಿತಿ ಸದಸ್ಯರು, ಸ್ಥಳೀಯರು ಆಕ್ಷೇಪಿಸಿದ್ದಾರೆ.
2006ರ ಅರಣ್ಯ ಕಾಯ್ದೆ ಪ್ರಕಾರ ಅರಣ್ಯ ಪ್ರದೇಶದ ಕಿರುಅರಣ್ಯ ಉತ್ಪನ್ನದಲ್ಲಿ ಸ್ಥಳೀಯ ಗ್ರಾಮ ಅರಣ್ಯ ಸಮಿತಿಗೆ ಶೇ 90ರಷ್ಟು ಪಾಲು ನೀಡಬೇಕೆಂದು ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ. ಆದರೆ ಗ್ರಾಮ ಅರಣ್ಯ ಸಮಿತಿಗೆ ಯಾವುದೇ ದಾಖಲೆಗಳನ್ನು ಒದಗಿಸದೇ, ಯಾವುದೇ ಸೂಚನೆ ನೀಡದೇ ಬಿದಿರು ಕಟಾವು ಮಾಡಲಾಗುತ್ತಿದೆ ಎನ್ನುತ್ತಾರೆ ಸ್ಥಳೀಯ ಪ್ರಗತಿಪರ ಕೃಷಿಕ ಕೆ.ಎಂ.ಹೆಗಡೆ.
ಬಿದಿರು ಕಟಾವು ಸಂಬಂಧ ಗ್ರಾಮ ಅರಣ್ಯ ಸಮಿತಿಗೆ ಯಾವುದೇ ಮಾಹಿತಿ ನೀಡದಿರುವುದನ್ನು ಗಮನಿಸಿದರೆ ಅರಣ್ಯ ಇಲಾಖೆ ಹಗಲು ದರೋಡೆಗೆ ಇಳಿದಿದೆಯೇ ಎಂಬ ಸಂಶಯ ಜನರಲ್ಲಿ ಮೂಡುತ್ತಿದೆ ಎಂದು ಹೇಳಿದರು.
ಸ್ಥಳೀಯ ಅರಣ್ಯ ಸಮಿತಿಗೆ ಯಾವ ದಾಖಲೆಗಳನ್ನು ನೀಡುತ್ತಿಲ್ಲ. ಸ್ಥಳೀಯ ಅರಣ್ಯ ಪಾಲಕರನ್ನು ಕೇಳಿದರೆ ದಾಖಲೆ ಒದಗಿಸುವುದಾಗಿ ಹೇಳಿ ನುಣುಚಿಕೊಳ್ಳುತ್ತಿದ್ದಾರೆ. ಅರಣ್ಯ ರಕ್ಷಣೆ ಮಾಡುವವರೇ ಭಕ್ಷಣೆ ಮಾಡುತ್ತಿರುವುದು ಬೇಸರವಾಗಿದೆ. ಅರಣ್ಯ ಸಂಪತ್ತನ್ನು ರಕ್ಷಿಸಿ ಕಾಪಾಡುವ ಹೊಣೆ ಸ್ಥಳೀಯರದ್ದಾಗಿದೆ.
ಪಾಲಿಸದರೆ ಪಾಲು ಎನ್ನುವ ಅರಣ್ಯ ಇಲಾಖೆ ಹೀಗೆ ಸ್ಥಳೀಯರಿಗೆ ಮಾಹಿತಿ ನೀಡದೆ ಮನಬಂದಂತೆ ಬಿದಿರು ಕಟಾವು ಮಾಡುತ್ತಿದೆ. ದಾಖಲೆಗಳನ್ನು ತಕ್ಷಣ ಒದಗಿಸಿದಿದ್ದಲ್ಲಿ ಬಿದಿರು ಸಾಗಾಟಕ್ಕೆ ತಡೆಯೊಡ್ಡಲಾಗುವುದು ಎಂದು ಗ್ರಾಮ ಪಂಚಾಯ್ತಿ ಮಾಜಿ ಅಧ್ಯಕ್ಷ ಶ್ರೀಪಾದ ಭಟ್ಟ ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.