ಕುಮಟಾ: ಕಳೆದ ವರ್ಷದ ಬೇಸಿಗೆಯಲ್ಲಿ ಕುಮಟಾ–ಹೊನ್ನಾವರ ಪಟ್ಟಣಕ್ಕೆ ಕುಡಿಯುವ ನೀರು ಪೂರೈಕೆ ಮಾಡಲು ಸ್ಥಳೀಯ ಪುರಸಭೆ ನಡೆಸಿದ ಪ್ರಯತ್ನದ ಜೊತೆಗೆ ತುರ್ತಾಗಿ ಕೈಕೊಂಡ ಮುನ್ನೆಚ್ಚರಿಕೆ ಕ್ರಮದಿಂದ ಈ ವರ್ಷ ಕುಡಿಯುವ ನೀರಿನ ಸಮಸ್ಯೆ ಇಲ್ಲದಂತಾಗಿದೆ.ಕಳೆದ ವರ್ಷ ಏಪ್ರಿಲ್ ತಿಂಗಳಲ್ಲಿಯೇ ಮರಾಕಲ್ ಕುಡಿಯುವ ನೀರಿನ ಯೋಜನೆಯ ಅಘನಾಶಿನಿ ನದಿ ಪ್ರದೇಶದಲ್ಲಿ ನೀರು ಸಂಪೂರ್ಣ ಬತ್ತಿ ಹೋಗಿತ್ತು. ಪುರಸಭೆ ಅಧಿಕಾರಿಗಳು, ಅಧ್ಯಕ್ಷರು, ಸದಸ್ಯರು ಸೇರಿ ಸಮೀಕ್ಷೆ ನಡೆಸಿದಾಗ ನದಿಗೆ ಅನಧಿಕೃತವಾಗಿ ನೂರಾರು ರೈತರು ಪಂಪ್ ಸೆಟ್ ಹಾಕಿ ಹಗಲು–ರಾತ್ರಿ ನೀರು ಬಳಕೆ ಮಾಡುತ್ತಿರುವುದು ಗೊತ್ತಾಯಿತು. ಜಿಲ್ಲಾಧಿಕಾರಿ ಆದೇಶದಂತೆ ನದಿಯಂಚಿನ ಪ್ರದೇಶದ ಎಲ್ಲ ಗ್ರಾಮಗಳ ತ್ರಿಫೇಸ್ ವಿದ್ಯುತ್ ಪೂರೈಕೆ ಅವಧಿಯನ್ನು ಕಡಿತಗೊಳಿಸಿ ಅನಧಿಕೃತ ಪಂಪ್ಸೆಟ್ಗಳನ್ನು ಕಿತ್ತು ಹಾಕಲಾಗಿತ್ತು.
ಮರಾಕಲ್ ಯೋಜನೆಯ ಜಾಕ್ವೆಲ್ ಪ್ರದೇಶದ ನದಿಯ ಭಾಗದಲ್ಲಿ ಜೆಸಿಬಿಯಿಂದ ಉಸುಕಿನ ದಿಬ್ಬಗಳನ್ನು ಸೀಳಿ ಮೇಲ್ಭಾಗದ ನೀರು ಜಾಕ್ವೆಲ್ ಪ್ರದೇಶಕ್ಕೆ ಹರಿದು ಬರುವಂತೆ ಮಾಡಲಾಗಿತ್ತು. ಈ ನಡುವೆ ಕುಮಟಾ–ಹೊನ್ನಾವರ ಪಟ್ಟಣಕ್ಕೆ 15 ದಿನಗಳ ಕಾಲ ನೀರು ಪೂರೈಕೆ ಇಲ್ಲದೆ ಹಾಹಾಕಾರ ಉಂಟಾಗಿತ್ತು. ಅದೇ ಸಮಯದಲ್ಲಿ ಒಣಗಿ ಹೋಗಿದ್ದ ನದಿ ಮಧ್ಯೆ ಸುಮಾರು 70 ಮೀಟರ್ ಉದ್ದ, 5 ಅಡಿ ಅಗಲ, 5 ಅಡಿ ಎತ್ತರದ ಭದ್ರವಾದ ಸಿಮೆಂಟ್ ಒಡ್ಡು ನಿರ್ಮಿಸಿ ಹೊಸ ಪ್ರಯೋಗ ನಡೆಸಲಾಗಿತ್ತು. ಈ ಕಾರ್ಯದಿಂದಾಗಿ ವರ್ಷ ಕುಮಟಾ–ಹೊನ್ನಾವರ ಪಟ್ಟಣಗಳಿಗೆ ಬೇಸಿಗೆಯಲ್ಲಿ ಪೂರೈಕೆ ಸಾಧ್ಯವಾಗುವಷ್ಟು ನೀರು ಸಂಗ್ರಹಗೊಂಡಿದೆ.
‘ಕಳೆದ ಬೇಸಿಗೆಯಲ್ಲಿ ನದಿಯಲ್ಲಿ ನೀರು ಕಡಿಮೆಯಾಗಿದ್ದರಿಂದ ಮರಾಕಲ್ ಯೋಜನೆಯ ವಿದ್ಯುತ್ ಮೋಟಾರ್ ಮುಂತಾದ ಯಂತ್ರೋಪಕರಣಗಳು ಕೈಕೊಟ್ಟಿದ್ದವು. ಈ ವರ್ಷ ಸುಸ್ಥಿಯಲ್ಲಿರುವ ಮೂರು ನೀರೆತ್ತುವ ಯಂತ್ರ ಅಳವಡಿಸಲಾಗಿದ್ದು, ಪ್ರತಿ 15 ದಿನಕ್ಕೊಮ್ಮೆ ಯಂತ್ರ ಬದಲಾಯಿಸಲಾಗುತ್ತದೆ. ಇದರಿಂದ ಯಂತ್ರ ಕೆಡುವ ಸಾಧ್ಯತೆ ತೀರಾ ಕಡಿಮೆ’ ಎಂದು ಪುರಸಭೆ ಅಧ್ಯಕ್ಷ ಸಂತೋಷ ನಾಯ್ಕ ತಿಳಿಸಿದರು.
ಮುಖ್ಯಾಧಿಕಾರಿ ಎಂ.ಕೆ. ಸುರೇಶ, ‘ ನದಿಗೆ ಅನಧಿಕೃತವಾಗಿ ಅಳವಡಿಸಿರುವ ಪಂಪ್ಸೆಟ್ ತೆರವುಗೊಳಿಸುವ ಕಾರ್ಯ ಕೈಕೊಳ್ಳಲಾಗುವುದು. ನೀರೆತ್ತಲು ತೊಂದರೆಯಾಗದಂತೆ ಹೆಚ್ಚುವರಿ ವಿದ್ಯುತ್ ಟ್ರಾನ್ಸ್ಫಾರ್ಮರ್ ಕೂಡ ಅಳವಡಿಸಲಾಗಿದೆ. ಯೋಜನೆ ಪ್ರದೇಶದಲ್ಲಿ ಸಿಬ್ಬಂದಿ ಕಾರ್ಯನಿರ್ವಹಣೆ ವೀಕ್ಷಣೆ ಹಾಗೂ ಸುರಕ್ಷತೆಯ ದೃಷ್ಟಿಯಿಂದ ಸಿ.ಸಿ.ಟಿವಿ ಕ್ಯಾಮೆರಾ ಅಳವಡಿಸಲಾಗಿದೆ’ ಎಂದರು. ಸದಸ್ಯರಾದ ಪ್ರಶಾಂತ ನಾಯ್ಕ, ಪ್ರಶಾಂತ ರೇವಣಕರ್, ಹೇಮಚಂದ್ರ ನಾಯ್ಕ ಉಪಸ್ಥಿತರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.