ಕುಮಟಾ: ‘ಕ್ರೀಡೆ ಕೇವಲ ಮನರಂಜನೆಗಾಗಿ ಎಂದು ಭಾವಿಸದೆ ಅದನ್ನು ಬದುಕು ರೂಪಿಸುವ ಮಾರ್ಗ ಎಂದು ಪರಿಗಣಿಸಿದಾಗ ಅಂತರರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಲು ಸಾಧ್ಯ’ ಎಂದು ಜಿಲ್ಲಾ ಪಂಚಾಯ್ತಿ ಸದಸ್ಯ ಪ್ರದೀಪ ನಾಯಕ ಅವರು ಹೇಳಿದರು.
ಜಿಲ್ಲಾ ಮಟ್ಟದ ದಸರಾ ಕ್ರೀಡಾಕೂಟದಲ್ಲಿ ಪ್ರಥಮ ಸ್ಥಾನ ಗಳಿಸಿ ರಾಜ್ಯ ಮಟ್ಟಕ್ಕೆ ಆಯ್ಕೆಯಾದ ಕ್ರೀಡಾಪಟುಗಳಿಗೆ ಜಿಲ್ಲಾ ಪಂಚಾಯ್ತಿ ಕಚೇರಿಯಿಂದ ಟ್ರ್ಯಾಕ್ ಸೂಟ್ ವಿತರಣಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಕ್ರೀಡೆಯಲ್ಲಿ ಯಶಸ್ಸು ಕಾಣಬೇಕಾದರೆ ಶಿಸ್ತು, ಪರಿಶ್ರಮ, ಸಮಯ ಪ್ರಜ್ಞೆ ಅಗತ್ಯ. ಇಲ್ಲದಿದ್ದರೆ ನಿರೀಕ್ಷಿತ ಸಾಧನೆ ಸಾಧ್ಯವಿಲ್ಲ. ಗ್ರಾಮೀಣ ಭಾಗದಲ್ಲಿ ಯಾವುದೇ ಕ್ರೀಡಾ ವಿಭಾಗದಲ್ಲಿ ವಿದ್ಯಾರ್ಥಿಗಳು ಸಾಧನೆ ಮಾಡಿದರೂ ಅಂಥವರಿಗೆ ಪ್ರೋತ್ಸಾಹ ನೀಡಲು ಸಮಾಜವೇ ಮುಂದೆ ಬರುತ್ತದೆ’ ಎಂದರು.
ಜಿಲ್ಲಾ ಪಂಚಾಯ್ತಿ ಸದಸ್ಯೆ ವೀಣಾ ಸೂರಜ್ ನಾಯ್ಕ ಮಾತನಾಡಿ, ‘ರಾಜ್ಯ, ರಾಷ್ಟ್ರ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಕ್ರೀಡಾ ಸಾಧನೆ ಮಾಡುವವರಿಗೆ ಏಕಾಗೃತೆ, ದೈಹಿಕ ಕ್ಷಮತೆ ಹಾಗೂ ಮೂಲ ಸೌಲಭ್ಯಗಳ ಅಗತ್ಯವಿದೆ.
ಜಿಲ್ಲಾ ಪಂಚಾಯ್ತಿ ಕಚೇರಿ ಕ್ರೀಡಾ ಸಾಧಕರನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಟ್ರ್ಯಾಕ್ ಸೂಟ್ ನೀಡುತ್ತಿದೆ’ ಎಂದರು. ಚಕ್ರ, ಶಾಟ್ಪಟ್ ಹಾಗೂ ಈಟಿ ಎಸೆತದಲ್ಲಿ ರಾಜ್ಯವನ್ನು ಪ್ರತಿನಿಧಿಸುತ್ತಿರುವ ವೈಭವಿ ಭಂಡಾರಿ, ವಾಲಿಬಾಲ್ನಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆಯಾದ ತಾಲ್ಲೂಕಿನ ಹೆಗಡೆ ತಂಡದ ಪ್ರಮೋದ ಹೆಗಡೆ, ಮಂಜುನಾಥ ನಾಯ್ಕ, ದಿನೇಶ ನಾಯ್ಕ, ವಿನಯ ಪಟಗಾರ, ರಾಘವೇಂದ್ರ ಹೆಗಡೇಕರ್, ಪ್ರವೀಣ ಶೆಟ್ಟಿ, ಅಖಿಲ್ ಶೆಟ್ಟಿ, ಪ್ರಥ್ವಿ ಆಚಾರ್, ನಾಗೇಂದ್ರ ಗೌಡ, ಸಂದೇಶ ಪಟಗಾರ ಹಾಗೂ ನಿಶಾಂತ ನಾಯ್ಕ
ಅವರಿಗೆ ಉಚಿತ ಟ್ರ್ಯಾಕ್ ಸೂಟ್ ನೀಡಲಾಯಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.