ADVERTISEMENT

ಟ್ಯಾಗೋರ್‌ ಕಡಲತೀರದಲ್ಲಿ ಕಸದ ರಾಶಿ: ನಾಗರಿಕರ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 7 ಅಕ್ಟೋಬರ್ 2015, 6:55 IST
Last Updated 7 ಅಕ್ಟೋಬರ್ 2015, 6:55 IST

ಕಾರವಾರ: ಇಲ್ಲಿನ ರವೀಂದ್ರನಾಥ ಟ್ಯಾಗೋರ್‌ ಕಡಲತೀರದಲ್ಲಿ ಸಂಗ್ರಹಿಸಿದ ಕಸ ವಿಲೇವಾರಿಯಾಗದ ಕಾರಣ ಸುತ್ತಮುತ್ತಲಿನ ವಾತಾವರಣ ಗಬ್ಬು ನಾರುತ್ತಿದೆ. ಅಲ್ಲದೇ ನೀರಿನ ಉಬ್ಬರಕ್ಕೆ ಅವುಗಳು ಸಮುದ್ರ ಸೇರುವ ಅಪಾಯ ಇದೆ.

ಗಾಂಧಿ ಜಯಂತಿ ನಿಮಿತ್ತ ನಗರದಲ್ಲಿ ಸ್ವಚ್ಛತಾ ಸಪ್ತಾಹ ನಡೆಯುತ್ತಿದೆ. ಇಲ್ಲಿನ ರವೀಂದ್ರನಾಥ ಟ್ಯಾಗೋರ್‌ ಕಡಲತೀರದಲ್ಲಿ ಕಳೆದೆರಡು ದಿನಗಳಿಂದ ಎನ್‌ಸಿಸಿ ಕೆಡೆಟ್‌ಗಳು, ಇತರೆ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಕಸವನ್ನು ಸಂಗ್ರಹಿಸಿ ಒಂದೆಡೆ ರಾಶಿ ಮಾಡಿದ್ದಾರೆ. ಹೀಗೆ ರಾಶಿ ಮಾಡಿದ ಕಸ ವಿಲೇವಾರಿಯಾಗದೆ ಅಲ್ಲೇ ಬಿದ್ದಿದೆ. ಹಸಿ ತ್ಯಾಜ್ಯ ಕೊಳೆಯಲಾರಂಭಿಸಿದೆ. ಅಲ್ಲದೇ ಕಾಗೆ, ಹದ್ದು ಹಾಗೂ ನಾಯಿ ಕಸವನ್ನು ಎಳೆದಾಡುತ್ತಿದೆ. ಇದರಿಂದ ಸುತ್ತಲಿನ ಪರಿಸರ ಕಲುಷಿತವಾಗುತ್ತಿದೆ.

‘ಗಾಂಧಿ ಜಯಂತಿ ಅಂಗವಾಗಿ ನಡೆದ ಸ್ವಚ್ಛತಾ ಆಂದೋಲನ ಕೇವಲ ಪ್ರಚಾರಕ್ಕೋಸ್ಕರ ಎಂಬಂತಾಗಿದೆ. ಇಲ್ಲಿನ ಕಡಲತೀರದಲ್ಲಿ ಅಧಿಕಾರಿಗಳು, ವಿದ್ಯಾರ್ಥಿಗಳು, ವಿವಿಧ ಸಂಘಟನೆಗಳು ಸೇರಿ ಸ್ವಚ್ಛ ಮಾಡಿದ ಕಸದ ರಾಶಿ ವಿಲೇವಾರಿಯಾಗದೇ ಇಲ್ಲೇ ಉಳಿದಿದೆ. ಹಾಗಾಗಿ ಸ್ವಚ್ಛತಾ ಅಭಿಯಾನ ಕೇವಲ ಬೂಟಾಟಿಕೆಯಾಗಿದೆ’ ಎನ್ನುತ್ತಾರೆ ವಾಯುವಿಹಾರಿ ಗಣಪತಿ ನಾಯ್ಕ.

‘ಇಲ್ಲಿನ ಕಡಲತೀರದಲ್ಲಿ ಬಿದ್ದಿದ್ದ ಕಸ ಕಡ್ಡಿ, ಕಳೆ, ಪ್ಲಾಸ್ಟಿಕ್‌ ಸೇರಿದಂತೆ ಇನ್ನಿತರ ತ್ಯಾಜ್ಯವನ್ನು ಆರಿಸಿ ಒಂದೆಡೆ ರಾಶಿ ಹಾಕಲಾಗಿದ್ದು, ಕೆಲವಷ್ಟನ್ನು ಪ್ಲಾಸ್ಟಿಕ್‌ ಕವರ್‌ನಲ್ಲಿ ತುಂಬಿ ಇಡಲಾಗಿದೆ. ಇದನ್ನು ವಿಲೇವಾರಿ ಮಾಡಬೇಕಾದ ನಗರಸಭೆ ಮೌನವಹಿಸಿರುವ ಕಾರಣ ಕಳೆದ ನಾಲ್ಕು ದಿನಗಳಿಂದ ಕಡಲತೀರದುದ್ದಕ್ಕೂ ಬಿದ್ದಿರುವ ಕಸ ಕೊಳೆಯುತ್ತಿದೆ’ ಎಂದು ಆಕ್ರೋಶಪಡಿಸುತ್ತಾರೆ ಸ್ಥಳೀಯ ರಾಮದಾಸ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.