ADVERTISEMENT

ತಹಶೀಲ್ದಾರ್ ಕಚೇರಿ ಆವರಣ ಶುಚಿಗೊಳಿಸಿದ ಬಿಜೆಪಿ ಕಾರ್ಯಕರ್ತರು

​ಪ್ರಜಾವಾಣಿ ವಾರ್ತೆ
Published 15 ಜುಲೈ 2017, 9:56 IST
Last Updated 15 ಜುಲೈ 2017, 9:56 IST

ಕುಮಟಾ: ಬಿ.ಜೆ.ಪಿ ಕಾರ್ಯಕರ್ತರು ಹಾಗೂ ಮುಖಂಡರು ಶುಕ್ರವಾರ ಇಲ್ಲಿಯ ತಹಶೀಲ್ದಾರ್ ಕಚೇರಿ ಎದುರು ಸ್ವಚ್ಛತಾ ಕಾರ್ಯ ಕೈಗೊಂಡು ಸ್ಥಳೀಯರಿಗೆ ಮಾದರಿಯಾದರು. ಕಾರ್ಯಕರ್ತರು ತಹಶೀಲ್ದಾರ್ ಕಚೇರಿ ಎದುರಿನ ಗಿಡ–ಗಂಟಿಗಳನ್ನು ಕಿತ್ತು ಒಂದೆಡೆ ಸಂಗ್ರಹಿಸಿದರೆ ಕಾರ್ಯಕರ್ತರಿಗೆ ಪ್ರೇರಣೆ ನೀಡಿದ ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ಕತ್ತಿ ಹಿಡಿದು ತಹಶೀಲ್ದಾರ್ ಕಚೇರಿ ಎದುರಿನ ಮುಳ್ಳಿನ ಗಿಡ ಕಡಿದರು.

ಮಾಜಿ ಶಾಸಕರುಗಳಾದ ಜೆ.ಡಿ. ನಾಯ್ಕ, ದಿನಕರ ಶೆಟ್ಟಿ ತಹಶೀಲ್ದಾರ್ ಕಚೇರಿಗೆ ಬರುವ ಸಾರ್ವಜನಿಕರು ತಿಂದು ಎಸೆದ ಗುಟ್ಕಾ, ಪಾನ್ ಮಸಾಲಾ ಪ್ಯಾಕೇಟಿನ ಪ್ಲಾಸ್ಟಿಕ್ ತ್ಯಾಜ್ಯ ಆರಿಸಿ ಒಟ್ಟುಗೂಡಿಸಿದರು. ಬಿಜೆಪಿ ತಾಲ್ಲೂಕು ಘಟಕ ಅಧ್ಯಕ್ಷ ಕುಮಾರ ಮಾರ್ಕಾಂಡೆ, ಯುವ ಘಟಕ ಅಧ್ಯಕ್ಷ ಹೇಮಂತ ಗಾಂವ್ಕರ್ ರಸ್ತೆ ಬದಿ ಸಂಗ್ರಹಗೊಂಡಿದ್ದ ಕಸ, ಕೆಸರನ್ನು ಗುದ್ದಲಿಯಲ್ಲಿ  ಗುಡ್ಡೆ ಹಾಕಿ ಪುರಸಭೆ ವಾಹನಕ್ಕೆ ತುಂಬುವ ವ್ಯವಸ್ಥೆ ಮಾಡಿಸಿದರು.

ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ, ‘ಪ್ರಧಾನಿ ನರೇಂದ್ರ ಮೋದಿ ಅವರ ಘೋಷಣೆಯಂತೆ ಬಿಜೆಪಿ ಸ್ವಚ್ಛತಾ ಕಾರ್ಯಕ್ರಮವನ್ನು ಮಹತ್ವಾಕಾಂಕ್ಷಿ ಕಾರ್ಯಕ್ರಮವಾಗಿ ಅನುಷ್ಠಾನಕ್ಕೆ ತರುತ್ತಿದೆ.

ADVERTISEMENT

ತಹಶೀಲ್ದಾರ್ ಕಚೇರಿ ಆವರಣ ಶುಚಿಯಾಗಿಡುವುದು ಇಲ್ಲಿಯ ಸಿಬ್ಬಂದಿ ಹಾಗೂ ಇಲ್ಲಿಗೆ ತಮ್ಮ ಕೆಲಸ ಕಾರ್ಯಗಳಿಗಾಗಿ ಬರುವವರ  ಹೊಣೆ ಗಾರಿಕೆಯಾಗಿದೆ.  ಬಿಜೆಪಿ ಕಾರ್ಯ ಕರ್ತರು ಇಂದು ಕೈಗೊಂಡ ಕಾರ್ಯಕ್ರಮ  ಕೇವಲ ಸಾಂಕೇತಿಕ ಅಷ್ಟೇ’ ಎಂದರು. ಪಂಚಾಯ್ತಿ ಅಧ್ಯಕ್ಷರಾದ ಎಸ್.ಟಿ. ನಾಯ್ಕ, ವಿರೂಪಾಕ್ಷ ನಾಯ್ಕ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.