ಶಿರಸಿ: ಉತ್ತರ ಕನ್ನಡ ಜಿಲ್ಲೆಯ ಹಿಂದೂ ದೇವಾಲಯಗಳನ್ನು ಧಾರ್ಮಿಕ ಪರಿಷತ್ತಿನ ಮೂಲಕ ನಿಯಂತ್ರಿಸುವ ಹಾಗೂ ಅನ್ಯ ಧರ್ಮದವರನ್ನು ಸದಸ್ಯರನ್ನಾಗಿ ನೇಮಿಸಿ ಧಾರ್ಮಿಕ ಭಾವನೆಗೆ ಧಕ್ಕೆ ತರಲು ಸರ್ಕಾರ ದೇವಸ್ಥಾನಗಳಿಗೆ ವ್ಯವಸ್ಥಾಪನಾ ಸಮಿತಿಗಳನ್ನು ರಚಿಸಲು ಮುಂದಾಗಿದೆ.
ಈ ಪ್ರಕ್ರಿಯೆ ಹಿಂದಕ್ಕೆ ಪಡೆಯಬೇಕು ಎಂದು ಆಗ್ರಹಿಸಿ ಜಿಲ್ಲಾ ಹಿಂದೂ ಧಾರ್ಮಿಕ ದೇವಾಲಯಗಳ ಮಹಾ ಮಂಡಳವು ರಾಜ್ಯದ ಮುಖ್ಯಮಂತ್ರಿ, ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಮುಜರಾಯಿ ಸಚಿವರಿಗೆ ಪತ್ರ ಬರೆದಿದೆ. ಈ ಸಂಬಂಧ ಕಾನೂನು ಹೋರಾಟ ಇನ್ನಷ್ಟು ಗಟ್ಟಿಗೊಳಿಸುವ ಸಲುವಾಗಿ ಚರ್ಚಿಸಲು ಇದೇ 13ರಂದು ಶಿರಸಿಯಲ್ಲಿ ಜಿಲ್ಲೆಯ ಎಲ್ಲಾ ದೇವಾಲಯಗಳ ಪ್ರಮುಖರ ಸಭೆ ಕರೆದಿದೆ.
ಈ ಕುರಿತು ಮಹಾಮಂಡಳದ ಗೌರವ ಅಧ್ಯಕ್ಷ, ಸೋಂದಾ ಸ್ವರ್ಣವಲ್ಲಿ ಮಠಾಧೀಶ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿ ಸೋಮವಾರ ಸುದ್ದಿಗೋಷ್ಠಿ ಯಲ್ಲಿ ಮಾಹಿತಿ ನೀಡಿದರು. ಸರ್ಕಾರದ ಕ್ರಮಕ್ಕೆ ಹೈಕೋರ್ಟ್ನಲ್ಲಿ ಎರಡು ಬಾರಿ ಹಿನ್ನಡೆಯಾಗಿದೆ. ಆದರೂ ಸಹ ಸರ್ಕಾರ ತನ್ನ ಹಠ ಬಿಡದೇ ಸುಪ್ರೀಂ ಕೋರ್ಟಿಗೆ ಮೇಲ್ಮನವಿ ಸಲ್ಲಿಸಿದೆ. ಮಾಡಿದ ತಪ್ಪನ್ನೇ ಮತ್ತೆ ಮಾಡುವುದಕ್ಕಿಂತ ಕಾನೂನು ಪರಿಷ್ಕರಣೆ ಮಾಡಲು ಮುಂದಾಗಬೇಕು. ಸರ್ಕಾರ ಪುನಃ ನ್ಯಾಯಾಲಯದ ಎದುರು ಮುಖಭಂಗ ಅನುಭವಿ ಸುವುದಕ್ಕಿಂತ ಈ ಪ್ರಕ್ರಿಯೆಯಿಂದ ಹಿಂದೆ ಸರಿಯುವುದು ಒಳ್ಳೆಯದು. ಜಿಲ್ಲೆಯ ಧಾರ್ಮಿಕ ಪರಿಷತ್ತಿನ ಪ್ರಕರಣ ಬಾಕಿ ಇರುವಾಗಲೇ ಒತ್ತಾಯಪೂರ್ವಕವಾಗಿ ದೇವಸ್ಥಾನ ಗಳಿಗೆ ಅವುಗಳ ಸಂಪ್ರದಾ ಯಕ್ಕೆ ವಿರುದ್ಧವಾಗಿ ವ್ಯವಸ್ಥಾಪನಾ ಸಮಿತಿ ರಚಿಸುವ ಉದ್ದೇಶದಿಂದ 2017 ರ ಮಾರ್ಚ್ 6ಕ್ಕೆ ಅಧಿಸೂಚನೆ ಹೊರಡಿ ಸಿದೆ. ಸರ್ಕಾರದ ಈ ಕ್ರಮ ಧಾರ್ಮಿಕ ಸಂಸ್ಥೆಗಳ ಮೇಲೆ ಮಾಡುತ್ತಿರುವ ಗದಾಪ್ರಹಾರವಾಗಿದ್ದು, ಕಾನೂನು ಬಾಹಿರ ಕ್ರಮವಾಗಿದೆ ಎಂದರು.
ಮಹಾಮಂಡಳದ ಕಾರ್ಯಾಧ್ಯಕ್ಷ, ಮಾರಿಕಾಂಬಾ ದೇವಾಲಯದ ಅಧ್ಯಕ್ಷ ವೆಂಕಟೇಶ ನಾಯ್ಕ ಮಾತನಾಡಿ, ಸರ್ಕಾರ ದೇವಸ್ಥಾನಗಳನ್ನು ಎ,ಬಿ,ಸಿ ಎಂದು ಪ್ರತ್ಯೇಕ ವಿಂಗಡಣೆ ಮಾಡಿ ಕೊಂಡು ಪ್ರತಿಯೊಂದು ದೇವಸ್ಥಾನಕ್ಕೂ ವ್ಯವಸ್ಥಾಪನಾ ಸಮಿತಿ ರಚಿಸಲು ಮುಂದಾಗಿದೆ. ಈಗಾಗಲೇ ಜಿಲ್ಲೆಯ ಒಂಬತ್ತು ದೇವಾಲಯಗಳಿಗೆ ಈ ಸಮಿತಿ ರಚಿಸಲು ಅರ್ಜಿ ಕರೆದಿದೆ. ಮುಂದಿನ ದಿನಗಳಲ್ಲಿ ಜಿಲ್ಲೆಯ ಎಲ್ಲ ದೇವಾಲಯ ಗಳಿಗೂ ಇದು ಅನ್ವಯಿಸಲಿರುವುದ ರಿಂದ ಕಾನೂನು ಹೋರಾಟವನ್ನು ಮತ್ತಷ್ಟು ಗಟ್ಟಿಗೊಳಿಸಬೇಕಾಗಿದೆ ಎಂದರು.
ಮಾರಿಕಾಂಬಾ ದೇವಾಲಯದ ಕಲ್ಯಾಣ ಮಂಟಪದಲ್ಲಿ ನಡೆಯಲಿರುವ ಸಭೆಗೆ ಜಿಲ್ಲೆಯ ನೋಟಿಫಿಕೇಷನ್ ಆದ ಹಾಗೂ ಆಗದೇ ಇರುವ ಎಲ್ಲ ದೇವಸ್ಥಾನಗಳ ಪ್ರಮುಖರು ಭಾಗವಹಿಸ ಬೇಕು ಎಂದರು. ಮಹಾಮಂಡಳದ ಉಪಾಧ್ಯಕ್ಷರಾದ ಟಿ.ಜಿ.ನಾಡಿಗೇರ, ಎನ್.ಬಿ.ಶಾನಭಾಗ ಹಾಗೂ ಕಾರ್ಯ ದರ್ಶಿ ಐ.ಎಸ್.ಭಟ್ಟ ಉಪಸ್ಥಿತರಿದ್ದರು.
**
ದೇವಾಲಯಕ್ಕೆ ವ್ಯವಸ್ಥಾಪನಾ ಸಮಿತಿ ರಚಿಸುವ ಕ್ರಮ ಖಂಡಿಸಿ 13ರಂದು ಮಾರಿಕಾಂಬಾ ಕಲ್ಯಾಣ ಮಂಟಪದಲ್ಲಿ ಜಿಲ್ಲೆಯ ಎಲ್ಲ ದೇವಾಲಯಗಳ ಪ್ರಮುಖರ ಸಭೆ ಕರೆಯಲಾಗಿದೆ
-ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿ
ಸ್ವರ್ಣವಲ್ಲಿ ಮಠಾಧೀಶ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.