ಕಾರವಾರ: ‘ಸಮಾಜವನ್ನು ಆವರಿಸಿರುವ ಸ್ವಾರ್ಥವೆಂಬ ಕಗ್ಗತ್ತಲನ್ನು ದೂರ ಮಾಡಬೇಕೆಂದರೆ ಮಾನವೀಯತೆ ಎಂಬ ಬೆಳಕನ್ನು ಎಲ್ಲೆಡೆ ಬೆಳಗಬೇಕು’ ಎಂದು ಸಾಹಿತಿ ಜಯಂತ ಕಾಯ್ಕಿಣಿ ಹೇಳಿದರು.ನಗರದ ಜಿಲ್ಲಾ ರಂಗಮಂದಿರದಲ್ಲಿ ಭಾನುವಾರ ಆಯೋಜಿಸಿದ್ದ ಎನ್.ಕೆ.ಜಿ.ಎಸ್.ಬಿ. ಬ್ಯಾಂಕಿನ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.
‘ಬಾಲ್ಯದ ದಿನಗಳೇ ನಮಗೆ ಅತ್ಯಂತ ಅವಿಸ್ಮರಣೀಯ ದಿನಗಳಾಗಿದ್ದು, ಅಂತಹ ಜೀವನವನ್ನು ಪುನಃ ಪಡೆಯಲು ಅಪೇಕ್ಷಿಸುತ್ತೇವೆ. ರಾಜಕಾರಣದಿಂದಾಗಿ ಇಂದು ಮನುಷ್ಯತ್ವವು ಒಡೆಯುತ್ತಿದ್ದು, ಮಮತೆ ಹಾಗೂ ಸಮಾನತೆಯು ಎಲ್ಲರನ್ನು ಒಂದು ಗೂಡಿಸುವಂತಾಗಬೇಕು’ ಎಂದು ಹೇಳಿದರು.ಸಾಹಿತಿ ಮಹಾಬಲೇಶ್ವರ ಸೈಲ್ ಮಾತನಾಡಿ, ‘ಭಾರತದ ಉಜ್ವಲ ಭವಿಷ್ಯ ನಿರ್ಮಾಣಕ್ಕೆ ಬ್ಯಾಂಕುಗಳ ಪಾತ್ರ ಅತೀ ಮಹತ್ವದ್ದಾಗಿದೆ. ಬ್ಯಾಂಕುಗಳೆಲ್ಲವೂ ಸಮಾಜ ಸೇವಾ ಸಂಸ್ಥೆಗಳಾಗಿ ಕಾರ್ಯ ಮಾಡಬೇಕು.’ ಎಂದು ಹೇಳಿದರು.
‘ಇಂದು ವಿಶ್ವದ ಎಲ್ಲ ರಾಷ್ಟ್ರಗಳಲ್ಲಿರುವ ಶಸ್ತ್ರಾಸ್ತ್ರಗಳನ್ನು ಸೇರಿಸಿದರೆ ಜಗತ್ತನ್ನು 100 ಬಾರಿ ನಾಶ ಮಾಡಬಹುದು. ಈ ಎಲ್ಲ ಶಸ್ತ್ರಾಸ್ತ್ರ ಗಳಿಂದ ಆಗುವ ಪ್ರಯೋಜನವಾದರೂ ಏನು? ಕರುಣೆ, ಅಹಿಂಸೆ, ಸನ್ನಡತೆಯ ಮಾರ್ಗವನ್ನು ಎಲ್ಲ ರಾಷ್ಟ್ರಗಳು ಅನುಸರಿಸಿ ಹೊಂದಾಣಿಕೆಯಿಂದ ಬಾಳ ಬೇಕಾಗಿದೆ’ ಎಂದು ಅಭಿಪ್ರಾಯಪಟ್ಟರು. ಕಾರ್ಯಕ್ರಮದಲ್ಲಿ ಸಾಹಿತಿಗಳಾದ ಜಯಂತ ಕಾಯ್ಕಿಣಿ ಹಾಗೂ ಮಹಾಬಲೇಶ್ವರ ಸೈಲ್ ಅವರನ್ನು ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಶಾಸಕ ಸತೀಶ ಸೈಲ್, ಎಸ್.ಪಿ.ಕಾಮತ, ಶಾಂತಾರಾಮ ಕುಲಕರ್ಣಿ, ಕಿಶೋರ ಕುಲಕರ್ಣಿ ಹಾಜರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.