ಸಿದ್ದಾಪುರ : ‘ಬಸವೇಶ್ವರರು, ಮಾಚಿದೇವರು ಸೇರಿದಂತೆ ಶರಣರ ವ್ಯಕ್ತಿತ್ವ ಎಲ್ಲರಿಗೂ ಮಾದರಿ’ ಎಂದು ಚಿತ್ರದುರ್ಗದ ಮಡಿವಾಳ ಮಾಚಿದೇವ ಮಹಾ ಸಂಸ್ಥಾನದ ಬಸವ ಮಾಚಿದೇವ ಸ್ವಾಮೀಜಿ ಅಭಿಪ್ರಾಯಪಟ್ಟರು.
ತಾಲ್ಲೂಕಿನ ಹೆರವಳ್ಳಿಯಲ್ಲಿ ಮಡಿವಾಳ ಮಾಚಿದೇವರ 4ನೇ ವರ್ಷದ ವಾರ್ಷಿಕೋತ್ಸವ ಹಾಗೂ ದೇವರಿಗೆ ರಜತ ಕವಚ ಸಮರ್ಪಣೆಯ ಕಾರ್ಯಕ್ರಮದಲ್ಲಿ ಅವರು ಆಶೀರ್ವಚನ ನೀಡಿದರು.‘ಶರಣದ ವಿಚಾರ, ಭಕ್ತಿ, ಜ್ಞಾನ, ಅನುಭಾವ, ಕಾಯಕ ತತ್ವ, ದಯೆ, ಪರೋಪಕಾರ, ಪರಸ್ಪರ ಗೌರವ ಮೊದಲಾದ ಸಂಗತಿ ಸಮಾಜದಲ್ಲಿರುವ ಧಾರ್ಮಿಕ ದೋಷ ದೂರಮಾಡಲು ಸಹಕಾರಿ’ ಎಂದರು.
‘ಮಾತನ್ನೇ ಬಂಡವಾಳ ಮಾಡಿಕೊಂಡು ತಮ್ಮ ಸ್ವಾರ್ಥ ಸಾಧನೆ ಮಾಡುವವರು ಏನನ್ನೂ ಸಾಧಿಸಲಾರರು. ಮಾತು ಮೌನವಾದಾಗ ಸಾಧನೆಯೇ ಸಂದೇಶ. ನಾವು ಬರುವಾಗ ಏನನ್ನೂ ತಂದಿಲ್ಲ. ಹೋಗುವಾಗ ಏನನ್ನೂ ಒಯ್ಯುವುದಿಲ್ಲ. ನಮ್ಮ ಬದುಕಿನ ಸಾಧನೆ ಇತರರಿಗೆ ಸಂದೇಶವಾಗಬೇಕು’ ಎಂದರು.
ಉದ್ಯಮಿ ದಯಾನಂದ ಮಡಿವಾಳ ಮಾತನಾಡಿ, ‘ಪ್ರಯತ್ನವಿದ್ದರೆ ಗುರಿ ಮುಟ್ಟಲು ಸಾಧ್ಯ. ಬದುಕಿನಲ್ಲಿ ಮುನ್ನುಗ್ಗಿ ನಡೆದರೆ ವಿಪುಲ ಅವಕಾಶಗಳಿವೆ’ ಎಂದರು. ಉದ್ಯಮಿ ಶಿವಾಜಿ ಕೆ.ಎಂ, ರಜತ ಶಿಲ್ಪಿ ಪ್ರಶಾಂತ ಶೇಟ್, ವಕೀಲ ಪಿ.ಬಿ.ಹೊಸೂರ, ಪತ್ರಕರ್ತ ಸುರೇಶ ಮಡಿವಾಳ ಮಾತನಾಡಿದರು. ಜಗದೀಶ ಹೊಸೂರ, ರಾಮು,ಅಣ್ಣಪ್ಪ, ಕೃಷ್ಣ ಮಡಿವಾಳ ಉಪಸ್ಥಿತರಿದ್ದರು.
ಧರ್ಮಪ್ಪ ಮಡಿವಾಳ ಸ್ವಾಗತಿಸಿದರು. ಸದಾನಂದ ಗೌಡ ಪ್ರಾಸ್ತಾವಿಕ ಮಾತನಾಡಿದರು. ಮಧ್ಯಾಹ್ನ ಅನ್ನಸಂತರ್ಪಣೆ ಹಾಗೂ ರಾತ್ರಿ ‘ದಕ್ಷಯಜ್ಞ’ ಯಕ್ಷಗಾನ ಪ್ರದರ್ಶನ ನಡೆಯಿತು.
**
ಬಸವಣ್ಣನವರಲ್ಲಿ ಮಾಚಿ ದೇವರಿದ್ದಾರೆ. ಮಾಚಿದೇವರಲ್ಲಿ ಬಸವಣ್ಣನವರಿದ್ದಾರೆ. ಬಸವಾದಿ ಶರಣರು ತೋರಿಸಿದ ಹಾದಿಯಲ್ಲಿ ನಡೆದರೆ ಜೀವನ ಸಾರ್ಥಕವಾಗುತ್ತದೆ – ಬಸವ ಮಾಚಿದೇವ ಸ್ವಾಮೀಜಿ, ಮಡಿವಾಳ ಮಾಚಿ ದೇವ ಮಹಾಸಂಸ್ಥಾನ.
**
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.