ADVERTISEMENT

ಹಿರಿಯ ವಿದ್ವಾಂಸ ಪ್ರೊ.ಎಂ.ಎ. ಹೆಗಡೆಗೆ ಪ್ರಶಸ್ತಿ: ಸಂತಸ

​ಪ್ರಜಾವಾಣಿ ವಾರ್ತೆ
Published 21 ಸೆಪ್ಟೆಂಬರ್ 2015, 8:20 IST
Last Updated 21 ಸೆಪ್ಟೆಂಬರ್ 2015, 8:20 IST

ಶಿರಸಿ: ಹಿರಿಯ ವಿದ್ವಾಂಸ ಪ್ರೊ. ಎಂ.ಎ.ಹೆಗಡೆ ಅವರ ‘ಭಾರತೀಯ ದರ್ಶನ ಮತ್ತು ಭಾಷೆ’ ಕೃತಿಗೆ ರಾಜ್ಯ ಸಾಹಿತ್ಯ ಅಕಾಡೆಮಿಯ ಪುಸ್ತಕ ವಿಭಾಗಕ್ಕೆ ನೀಡುವ ಅತ್ಯುತ್ತಮ ಗ್ರಂಥ ಪುರಸ್ಕಾರ ಪ್ರಶಸ್ತಿ ಲಭಿಸಿದೆ. ಪ್ರಶಸ್ತಿಯು ₹ 5 ಸಾವಿರ ನಗದು ಹಾಗೂ ಪ್ರಶಸ್ತಿ ಪತ್ರ ಒಳಗೊಂಡಿದೆ.

ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ನವೆಂಬರ್ 7ರಂದು ನಡೆಯುವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಆಗಲಿದೆ. ಮೂಲತಃ ಹೆಗ್ಗರಣಿ ಸಮೀಪದ ಜೋಗಿನಮನೆಯ ಅಣ್ಣಪ್ಪ ಹೆಗಡೆ ಹಾಗೂ ಕಾಮಾಕ್ಷಿ ದಂಪತಿ ಪುತ್ರ ಎಂ.ಎ. ಹೆಗಡೆ ಅವರು ಹೆಗ್ಗರಣಿ, ಶಿರಸಿ ಹಾಗೂ ಧಾರವಾಡಗಳಲ್ಲಿ ಶಿಕ್ಷಣ ಪಡೆದು ಸಂಸ್ಕೃತದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಹುಬ್ಬಳ್ಳಿ ಹಾಗೂ ಸಿದ್ದಾಪುರದಲ್ಲಿ ಪ್ರಾಧ್ಯಾಪಕರಾಗಿ, ಪ್ರಾಚಾರ್ಯ ರಾಗಿ ಕೆಲಸ ಮಾಡಿದ್ದಾರೆ.

ಪ್ರಸ್ತುತ ಶಿರಸಿಯಲ್ಲಿ ನೆಲಸಿರುವ ಎಂ.ಎ. ಹೆಗಡೆ ಅವರು ಕನ್ನಡ ಹಾಗೂ ಸಂಸ್ಕೃತ ಸಾಹಿತ್ಯ ಕ್ಷೇತ್ರಕ್ಕೆ ನೀಡಿದ ಕೊಡುಗೆ ಅಪಾರ.

ಭಾರತೀಯ ತತ್ವಶಾಸ್ತ್ರ ಪ್ರವೇಶ, ಅಲಂಕಾರತತ್ವ ಭಾರತೀಯ ದರ್ಶನಗಳು ಮತ್ತು ಭಾಷೆ, ಪ್ರಮಾಣ ಪರಿಚಯ, ಹಿಂದೂ ಸಂಸ್ಕಾರಗಳು ಮೊದಲಾದ ಸ್ವತಂತ್ರ ಕೃತಿಗಳನ್ನು ರಚಿಸಿದ್ದಾರೆ. ಭಗವದ್ಭಕ್ತಿ ರಸಾಯನಂ, ಸಿದ್ಧಾಂತ ಬಿಂದು, ಪರಮಾನಂದ ಸುಧಾ, ಅಭಿನಯ ದರ್ಪಣ, ಶಬ್ದ ಮತ್ತು ಜಗತ್ತು, ಧ್ವನ್ಯಾಲೋಕ ಮತ್ತು ಲೋಚನ ಮುಂತಾದ ಕೃತಿಗಳನ್ನು ಅನುವಾದಿಸಿದ್ದಾರೆ.

ಯಕ್ಷಗಾನದಲ್ಲಿ ಬಾಲ್ಯದಿಂದಲೂ ಆಸಕ್ತಿ ಹೊಂದಿದ್ದ ಅವರು, ಕೆರೆಮನೆ ಶಂಭು ಹೆಗಡೆ ಅವರಲ್ಲಿ ನೃತ್ಯಾಭ್ಯಾಸ ಮಾಡಿದ್ದಾರೆ. ಈಗಲೂ ತಾಳಮದ್ದಲೆ ಅರ್ಥಧಾರಿಕೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಿದ್ದಾರೆ. ಅವರಿಗೆ ಪ್ರಶಸ್ತಿ ಲಭಿಸಿದ್ದಕ್ಕೆ ಸ್ಥಳೀಯ ಸಾಹಿತಿಗಳು ಹರ್ಷ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.