ಕಾರವಾರ: ಸೀಬರ್ಡ್ ಯೋಜನೆಯಿಂದ ನಿರಾಶ್ರಿತರಾದ ಫಲಾನುಭವಿಗಳು ಸರ್ಕಾರದಿಂದ ವಿತರಿಸುವ ಪರಿಹಾರ ಧನವನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಪ್ರದಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶ ವಿಠ್ಠಲ ಧಾರವಾಡಕಾರ ಹೇಳಿದರು.
ಜಿಲ್ಲಾ ಸೆಷನ್ಸ್ ನ್ಯಾಯಾಲಯದ ಆವರಣದಲ್ಲಿ ಶನಿವಾರ ಆಯೋಜಿಸಲಾಗಿದ್ದ ಕಾನೂನು ಅರಿವು ಮತ್ತು ಸೀಬರ್ಡ್ ನಿರಾಶ್ರಿತರಿಗೆ ವಿಶೇಷ ಲೋಕ ಅದಾಲತ್ ಮೂಲಕ ಪರಿಹಾರದ ಚೆಕ್ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಎರಡನೇ ಹಂತದ ಪರಿಹಾರ ಚೆಕ್ ವಿತರಣೆ ಕಾರ್ಯಕ್ರಮ ಇದಾಗಿದೆ. ಅರ್ಹ ಫಲಾನುಭವಿಗಳು ದೊರೆಯುತ್ತಿರುವ ಪರಿಹಾರ ಹಣವನ್ನು ಸರಿಯಾಗಿ ವಿನಿಯೋಗಿಸಿಕೊಂಡು ಶ್ರೇಯೋಭಿವೃದ್ಧಿ ಹೊಂದಬೇಕು ಎಂದು ಅವರು ಫಲಾನುಭವಿಗಳಿಗೆ ಸಲಹೆ ನೀಡಿದರು.
ಹಿರಿಯ ಸಿವಿಲ್ ನ್ಯಾಯಾಧೀಶ ಶಿವಕುಮಾರ.ಬಿ ಮಾತನಾಡಿ, ‘ಕೇಂದ್ರ ಸರ್ಕಾರ ಸೀಬರ್ಡ್ ನಿರಾಶ್ರಿತರು ಎನ್ನದೇ ಫಲಾನುಭವಿಗಳು ಎಂದು ಕರೆದಿದೆ. ಪ್ರತಿ ತಿಂಗಳು ಹಂತ ಹಂತವಾಗಿ ಅರ್ಹ ಫಲಾನುಭವಿಗಳಿಗೆ ಪರಿಹಾರದ ಚೆಕ್ ವಿತರಿಸಲಾಗುವುದು’ ಎಂದು ತಿಳಿಸಿದರು.
ಹೆಚ್ಚುವರಿ ಹಿರಿಯ ಸಿವಿಲ್ ನ್ಯಾಯಾಧೀಶ ಅಮರನಾಥ ಕೆ.ಕೆ, ಕಾರವಾರ ಜೆ.ಎಂ.ಎಫ್.ಸಿ. ನ್ಯಾಯಾಲಯದ ಸಿವಿಲ್ ನ್ಯಾಯಾಧೀಶ ಮಹೇಶ ಚಂದ್ರಕಾಂತ, ಹೆಚ್ಚುವರಿ ನ್ಯಾಯಾಧೀಶ ವಿವೇಕ ಗ್ರಾಮೋಪಾಧ್ಯೆ, ಹಿರಿಯ ಸಿವಿಲ್ ನ್ಯಾಯಾಧೀಶ ಟಿ.ಗೋವಿಂದಯ್ಯ, ನಗರಸಭೆ ಪೌರಾಯುಕ್ತ ಎಸ್.ಯೋಗೇಶ್ವರ, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎಸ್.ಕೆ.ಪವಾರ ಮತ್ತು ಕಾರ್ಯದರ್ಶಿ ಮಹೇಶ ಹರಿಕಾಂತ ಇದ್ದರು.
ಜಿಲ್ಲಾಡಳಿತ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಹಾಗೂ ಜಿಲ್ಲಾ ನ್ಯಾಯವಾದಿಗಳ ಸಂಘದ ಸಂಯುಕ್ತ ಆಶ್ರಯದಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಪರಿಹಾರ: ಅಂಕಿ–ಅಂಶ
258 ಕಾರವಾರ ತಾಲ್ಲೂಕಿನ ಫಲಾನುಭವಿಗಳು
₨ 10 ಕೋಟಿ 18 ಲಕ್ಷದ 5,900 ವಿತರಿಸಿದ ಪರಿಹಾರ
₨ 11.38 ಕೋಟಿ ಅಂಕೋಲಾ ತಾಲ್ಲೂಕಿನ ಫಲಾನುಭವಿಗಳಿಗೆ ಪರಿಹಾರ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.