ವಿಜಯಪುರ: ‘ಜಾತಿ ಗಣತಿ ವರದಿ ಶೀಘ್ರದಲ್ಲೇ ಬಿಡುಗಡೆಯಾಗಲಿದೆ. ಜ. 13ರಂದು ಒಳ ಮೀಸಲಾತಿಗೆ ಸಂಬಂಧಿಸಿದಂತೆ ಪರ–ವಿರೋಧ ಇರುವವರ ಸಭೆಯನ್ನು ಮುಖ್ಯಮಂತ್ರಿ ನಡೆಸಲಿದ್ದಾರೆ’ ಎಂದು ಸಮಾಜ ಕಲ್ಯಾಣ ಸಚಿವ ಎಚ್.ಆಂಜನೇಯ ತಿಳಿಸಿದರು.
‘ಯಾವುದೇ ಪ್ರಮುಖ ನಿರ್ಣಯ ಅಂಗೀಕರಿಸುವ ಸಂದರ್ಭ ಪರ–ವಿರೋಧ ಇದ್ದದ್ದೇ. ಎರಡನ್ನೂ ಪರಿಗಣಿಸಿ ಸಿದ್ದರಾಮಯ್ಯ ನಿರ್ಧಾರ ಪ್ರಕಟಿಸಲಿದ್ದಾರೆ’ ಎಂದು ಶುಕ್ರವಾರ ಇಲ್ಲಿ ತಮ್ಮನ್ನು ಭೇಟಿಯಾದ ಮಾಧ್ಯಮದವರಿಗೆ ಪ್ರತಿಕ್ರಿಯಿಸಿದರು.
ಕಾಂಗ್ರೆಸ್ಗೆ ಜನ ಬೆಂಬಲ ದಿನೇ ದಿನೇ ಹೆಚ್ಚುತ್ತಿರುವುದರಿಂದ ಹತಾಶೆಗೊಂಡು ಬಿಜೆಪಿಯವರು ಮನಸ್ಸಿಗೆ ಬಂದಂತೆ ಮಾತನಾಡುತ್ತಿದ್ದಾರೆ. ಶೋಭಾ ಕರಂದ್ಲಾಜೆ ಸಂಘರ್ಷಕ್ಕೆಡೆ ಮಾಡಿಕೊಡುವ ಹೇಳಿಕೆ ನೀಡುತ್ತಾರೆ. ಅವರಿಗೆ ನಾಲಿಗೆ ಇದೆಯೋ ಇಲ್ಲವೋ ಗೊತ್ತಿಲ್ಲ ಎಂದು ಆಂಜನೇಯ ಕಿಡಿಕಾರಿದರು.
ಬೆಂಬಲ: ‘ಲಿಂಗಾಯತ ಧರ್ಮಕ್ಕೆ ಸ್ವತಂತ್ರ ಮಾನ್ಯತೆ ಸಿಗಬೇಕು ಎಂಬುದಕ್ಕೆ ಎಲ್ಲರ ಬೆಂಬಲವಿದೆ’ ಎಂದು ಸಚಿವ ಎಚ್.ಆಂಜನೇಯ ಹೇಳಿದರು. ‘ಸಮಾಜಕ್ಕೆ ಲಿಂಗಾಯತರ ಕೊಡುಗೆ ಅಪಾರ. ವೀರಶೈವರು ಹೃದಯವಂತರು. ಇಬ್ಬರನ್ನೂ ಅಲ್ಪಸಂಖ್ಯಾತ ವರ್ಗಕ್ಕೆ ಸೇರಿಸಿ, ಮೀಸಲಾತಿ ನೀಡುವ ಮೂಲಕ ಎಲ್ಲ ಸ್ಥಾನಮಾನ ದೊರಕಿಸಬೇಕು ಎಂಬುದು ರಾಜ್ಯ ಸರ್ಕಾರದ ಆಶಯ. ಇದರಲ್ಲಿ ಯಾವುದೇ ರಾಜಕೀಯ ಗಿಮಿಕ್ ಇಲ್ಲ’ ಎಂದು ಸ್ಪಷ್ಟಪಡಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.