ADVERTISEMENT

ತಹಶೀಲ್ದಾರ್‌ ಬಾಗವಾನ ವಿರುದ್ಧ ಕ್ರಿಮಿನಲ್‌ ಮೊಕದ್ದಮೆಗೆ ಒತ್ತಾಯ

ವಿಧಾನ ಪರಿಷತ್ ಸದಸ್ಯ ಯತ್ನಾಳ ಪತ್ರಿಕಾಗೋಷ್ಠಿ

​ಪ್ರಜಾವಾಣಿ ವಾರ್ತೆ
Published 23 ಮಾರ್ಚ್ 2018, 13:00 IST
Last Updated 23 ಮಾರ್ಚ್ 2018, 13:00 IST

ವಿಜಯಪುರ: ಆಯುಕ್ತರು ನಗರಾಭಿವೃದ್ಧಿ ಪ್ರಾಧಿಕಾರ ಹೆಸರಿನಲ್ಲಿನದ್ದ ನಗರದ ಕುಲಕರ್ಣಿ ಲೇಔಟ್‌ನಲ್ಲಿನ ಒಂದೂವರೆ ಎಕರೆ ಜಮೀನನ್ನು, ಅಕ್ರಮವಾಗಿ ಚೇರಮನ್‌ ಅಫಜಲ ಖಾನ್ ಮಸ್ಜೀದ್‌ ಕುರೇಶಿ ಹೆಸರಿಗೆ ವರ್ಗಾವಣೆ ಮಾಡಿರುವ ತಹಸೀಲ್ದಾರ್‌ ಭಾಗವಾನ ವಿರುದ್ಧ, ಜಿಲ್ಲಾಧಿಕಾರಿಗಳು ಕ್ರಮಿನಲ್ ಕೇಸ್‌ ಹಾಕಬೇಕು ಎಂದು ವಿಧಾನ ಪರಿಷತ್ ಸದಸ್ಯ ಬಸನಗೌಡ ಪಾಟೀಲ ಯತ್ನಾಳ ಒತ್ತಾಯಿಸಿದರು.

ಇಲ್ಲಿನ ಕುಲಕರ್ಣಿ ಲೇಔಟ್‌ನಲ್ಲಿನ (ಸರ್ವೇ ನಂ. 748 ಬ.ಕ) ಒಂದೂವರೆ ಎಕರೆ ಸರ್ಕಾರಿ ಜಮೀನಲ್ಲಿ 30*40 ರಷ್ಟು ಜಾಗೆ ಮಸೀದಿಗೆ ಬಿಟ್ಟುಕೊಟ್ಟು, ಉಳಿದ ಜಾಗೆಯಲ್ಲಿ ಸಾರ್ವಜನಿಕರ ಅನುಕೂಲಕ್ಕಾಗಿ ಗಾರ್ಡನ್‌ ನಿರ್ಮಿಸಬೇಕು ಎಂದು ಜನರು ಹಲ ಬಾರಿ ಮನವಿ ಸಲ್ಲಿಸಿದರೂ, ಕ್ಯಾರೆ ಎನ್ನದ ತಹಸೀಲ್ದಾರ್‌ ಬಾಗವಾನ, ಅಕ್ರಮವಾಗಿ ಚೇರಮನ್‌ ಅಫಜಲ ಖಾನ್ ಹೆಸರಿಗೆ ವರ್ಗಾಯಿಸಿದ್ದಾರೆ ಎಂದು ಇಲ್ಲಿನ ಗುರುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ದೂರಿದರು.

ನಗರದ ಅಕ್ಕಮಹಾದೇವಿ ರಸ್ತೆಯಲ್ಲಿ ಗಣಪತಿ ದೇವಸ್ಥಾನ ನಿರ್ಮಿಸಲು ಹಿಂದೂಗಳು ಪಾಲಿಕೆಗೆ ಮನವಿ ಸಲ್ಲಿಸಿದ್ದರು. ಸಾಮಾನ್ಯ ಸಭೆಯಲ್ಲಿ ಠರಾವು ಕೂಡ ಪಾಸ್‌ ಆಗಿತ್ತು. ಆದರೆ, ಕೆಲವು ಮತಾಂಧರು ಅದರ ವಿರುದ್ಧ ಹೋರಾಟ ನಡೆಸಿ, ಜಾತಿಯ ವಿಷ ಬೀಜ ಬಿತ್ತಿ ದೇವಸ್ಥಾನ ನಿರ್ಮಾಣಕ್ಕೆ ತಡೆ ಒಡ್ಡಿದ್ದರು. ಅಡಕಿ ಗಲ್ಲಿಯಲ್ಲಿ ನಿರ್ಮಿಸಿದ್ದ ಗಣಪತಿ ದೇವಸ್ಥಾನ ತೆರವುಗೊಳಿಸಲಾಗಿದೆ. ಆದರೆ, ಮನಗೂಳಿ ರಸ್ತೆಯಲ್ಲಿ ಮುಸ್ಲಿಂ ಸಮುದಾಯದ ಹೆಣಗಳನ್ನು ಹೂಳಲು ಮೀಸಲಿಡಲಾದ ಜಾಗೆಯಲ್ಲಿ ಅಕ್ರಮ ಕಟ್ಟಡ ತಲೆ ಎತ್ತಿದ್ದರೂ ಪಾಲಿಕೆ ಆಯುಕ್ತರು ಇದನ್ನು ತಡೆಯಲು ಮುಂದಾಗಿಲ್ಲ ಎಂದು ಕಿಡಿಕಾರಿದರು.

ADVERTISEMENT

‘ತಾಲ್ಲೂಕು ಆಡಳಿತ, ಮಹಾನಗರ ಪಾಲಿಕೆ ಸೇರಿ ನಗರವನ್ನು ಪಾಕಿಸ್ತಾನ ಮಾಡಲು ಹೊರಟಿವೆ. ಕ್ರಮ ಕೈಗೊಳ್ಳಬೇಕಾದ ಜಿಲ್ಲಾಡಳಿತ ಮೌನವಹಿಸಿದೆ. ನಗರದಲ್ಲಿ ಹಿಂದೂಗಳಿಗೊಂದು, ಇತರೆ ಧರ್ಮದವರಿಗೊಂದು ನ್ಯಾಯ. ಹಿಂದೂಗಳು ಏನಾದರೂ ಮಾಡಲು ಹೊರಟರೆ ಅದಕ್ಕೆ ತಡೆಯೊಡ್ಡುತ್ತಾರೆ. ಆದರೆ, ಬೇರೆ ಧರ್ಮದವರು ಏನೆ ಮಾಡಿದರೂ ಯಾರೋಬ್ಬರೂ ಕೇಳುವುದಿಲ್’ ಎಂದು ಕಿಡಿಕಾರಿದರು.

‘ನಗರದಲ್ಲಿ ದೊಡ್ಡ ಮಾಫಿಯಾ ನಡೆದಿದೆ. ಇದರಿಂದ ಮುಂದಿನ ದಿನಗಳಲ್ಲಿ ಹಿಂದೂಗಳು ಇಲ್ಲಿ ಜೀವನ ಮಾಡಲಾಗದಂತಹ ವಾತಾವರಣ ನಿರ್ಮಾಣವಾಗುತ್ತಿದೆ. ತಕ್ಷಣ ಕಾನೂನು ಬಾಹಿರ ಚಟುವಟಿಕೆಗಳು ನಿಲ್ಲಬೇಕು. ನಗರದಲ್ಲಿನ 99 ಐತಿಹಾಸಿಕ ತಾಣಗಳ ಪೈಕಿ ಪ್ರಮುಖವಾದ ಕೆಲ ಕಟ್ಟಡಗಳ ಸುತ್ತ ಮಾತ್ರ 300 ಮೀ. ಮನೆ ನಿರ್ಮಾಣಕ್ಕೆ ಅವಕಾಶ ನೀಡಬಾರದು. ಈಗಾಗಲೇ ಸರ್ಕಾರಿ ಜಾಗೆಯಲ್ಲಿ ನಿರ್ಮಿಸಿರುವ ಕಾಂಪ್ಲೆಕ್ಸ್‌ಗಳನ್ನು ಸರ್ಕಾರ ವಶಕ್ಕೆ ಪಡೆಯಬೇಕು. ಈ ಕುರಿತು ಜಿಲ್ಲಾ ಉಸ್ತುವಾರಿ ಸಚಿವ ಎ ಂ.ಬಿ.ಪಾಟೀಲರು ಜಿಲ್ಲಾಡಳಿತ, ಮಹಾನಗರ ಪಾಲಿಕೆ ಹಾಗೂ ತಾಲ್ಲೂಕು ಆಡಳಿತಕ್ಕೆ ಸೂಚಿಸಬೇಕು. ಇಲ್ಲದಿದ್ದರೇ ಅವರ ವಿರುದ್ಧ ಕೂಡ ಹೋರಾಟ ಮಾಡುತ್ತೇವೆ’ ಎಂದು ಎಚ್ಚರಿಸಿದರು.

ಮುಖಂಡರಾದ ಎಂ.ಎಸ್‌.ರುದ್ರಗೌಡರ, ಎಚ್‌.ಆರ್‌.ಉಟಗಿ, ರಾಘು ಅಣ್ಣಿಗೇರಿ, ಚಂದ್ರು ಚೌಧರಿ, ಸುರೇಶ ಜಾಧವ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.