ADVERTISEMENT

ದಲಿತರ ಮೇಲಿನ ದೌರ್ಜನ್ಯ ತಡೆಗಟ್ಟಿ

​ಪ್ರಜಾವಾಣಿ ವಾರ್ತೆ
Published 18 ಜುಲೈ 2017, 6:29 IST
Last Updated 18 ಜುಲೈ 2017, 6:29 IST

ತಾಳಿಕೋಟೆ: ರಾಜ್ಯದಲ್ಲಿ ದಲಿತರ ಮೇಲೆ ಹೆಚ್ಚುತ್ತಿರುವ ದೌರ್ಜನ್ಯ ತಡೆಗಟ್ಟುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರು ಪಟ್ಟಣದಲ್ಲಿ ಸೋಮವಾರ ಪ್ರತಿಭಟಿಸಿದರು. ಪಟ್ಟಣದ ಅಂಬೇಡ್ಕರ್‌ ಭವನದಿಂದ ಮೆರವಣಿಗೆ ಹೊರಟ ಪ್ರತಿಭಟನಾಕಾರರು, ಪ್ರಮುಖ ಬೀದಿಗಳ ಮೂಲಕ ಹಾಯ್ದು ವಿಜಯಪುರ ವೃತ್ತದಲ್ಲಿ ಸಮಾವೇಶಗೊಂಡರು. ನಂತರ ಮಾನವ ಸರಪಳಿ ನಿರ್ಮಿಸಿ, ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಸಂಘಟನೆಯ ಜಿಲ್ಲಾ ಸಂಚಾಲಕ ಸುರೇಶ ಮಣೂರ, ‘ದಲಿತರ ಮೇಲಾಗುತ್ತಿರುವ ದೌರ್ಜನ್ಯ ತಡೆಗಟ್ಟುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ’ ಎಂದು ಟೀಕಿಸಿದರು.

ಸಿಂದಗಿ ತಾಲ್ಲೂಕಿನ ಹಾಳ ಗುಂಡಕನಾಳ ಹಾಗೂ ಮುದ್ದೇಬಿಹಾಳ ತಾಲ್ಲೂಕಿನ ಗುಂಡಕನಾಳ, ಮಡಿಕೇಶ್ವರ, ಅಡವಿ ಹುಲಗಬಾಳ ಪ್ರಕರಣಗಳಲ್ಲಿ ದಲಿತರ ಮೇಲೆ ದೌರ್ಜನ್ಯ ನಡೆದರೂ ಕ್ರಮ ಕೈಗೊಂಡಿಲ್ಲ. ಈ ಪ್ರಕರಣಗಳಲ್ಲಿ ಕ್ರಮ ಜರುಗಿಸದಿದ್ದರೆ ಉಗ್ರ ಹೋರಾಟ ಅನಿವಾರ್ಯಎಂದು ಎಚ್ಚರಿಸಿದರು.

ADVERTISEMENT

ಜಿಲ್ಲಾ ಸಂಘಟನಾ ಸಂಚಾಲಕ ದೇವೇಂದ್ರ ಹಾದಿಮನಿ ಹಾಗೂ ಹೋಬಳಿ ಸಂಚಾಲಕ ಮಹೇಶ ಚಲವಾದಿ ಮಾತನಾಡಿದರು. ಮನವಿಯನ್ನು ವಿಶೇಷ ತಹಶೀಲ್ದಾರ್ ಎಚ್‌.ಎಸ್‌.ಅರಕೇರಿ ಅವರಿಗೆ  ಸಲ್ಲಿಸಲಾಯಿತು. ನಿವೃತ್ತ ಎಸ್ಪಿ ಎಸ್.ಬಿ.ಕಟ್ಟಿಮನಿ, ಮುಖಂಡರಾದ ಮುತ್ತಪ್ಪ ಚಮಲಾಪುರ, ಶಾಂತಪ್ಪ ತಮದಡ್ಡಿ, ಮಾಳಪ್ಪ ಬಿಳೆಭಾವಿ, ರಮೇಶ ಹೊನ್ನಳ್ಳಿ, ಜೈಭೀಮ ಮುತ್ತಗಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.