ವಿಜಯಪುರ: ನಗರ ಶಾಸಕ ಡಾ. ಮಕ್ಬೂಲ್ ಬಾಗವಾನ, ಜಿಲ್ಲಾ ಘಟಕದ ಅಧ್ಯಕ್ಷ ರವಿಗೌಡ ಪಾಟೀಲ ಕಾರ್ಯ ವೈಖರಿ ವಿರುದ್ಧ ಎಐಸಿಸಿ ವೀಕ್ಷಕರಿಗೆ ದೂರು ಸಲ್ಲಿಕೆಯಾಗಿದೆ.
ಎಐಸಿಸಿ ಕಾರ್ಯದರ್ಶಿ, ಮಾಜಿ ಸಂಸದ ಮಾಣಿಕ್ಕಂ ಟ್ಯಾಗೋರ್ ಸೋಮವಾರ ರಾತ್ರಿ ನಗರದ ಜಿಲ್ಲಾ ಕಾಂಗ್ರೆಸ್ ಕಾರ್ಯಾಲಯದಲ್ಲಿ ವಿಧಾನ ಪರಿಷತ್ ಸದಸ್ಯ ಶ್ರೀನಿವಾಸ ಮಾನೆ ಜತೆ ಜಿಲ್ಲೆಯ ಮುಖಂಡರ ವೈಯಕ್ತಿಕ ಅಭಿ ಪ್ರಾಯ ಸಂಗ್ರಹಿಸುವ ಸಂದರ್ಭ ಈ ಇಬ್ಬರ ವಿರುದ್ಧವೂ ದೂರು ಹೇಳಲಾಗಿದೆ ಎಂದು ಕಾಂಗ್ರೆಸ್ ಮೂಲಗಳು ‘ಪ್ರಜಾವಾಣಿ’ಗೆ ಖಚಿತ ಪಡಿಸಿವೆ.
‘ಎಐಸಿಸಿ ವೀಕ್ಷಕರು ಅಭಿಪ್ರಾಯ ಸಂಗ್ರಹಿಸುವ ಸಂದರ್ಭ ತಮ್ಮ ವಿರುದ್ಧ ದೂರು ದಾಖಲಾಗುವುದನ್ನು ಈ ಮುಂಚೆಯೇ ಖಚಿತ ಪಡಿಸಿಕೊಂಡಿದ್ದ ನಗರ ಶಾಸಕರು ತಮ್ಮದೇ ರಾಜಕೀಯ ದಾಳ ಉರುಳಿಸಿದರು.
ತನ್ನ ಬೆಂಬಲಿಗ ಪಡೆಯಿಂದ ಎಐಸಿಸಿ ವೀಕ್ಷಕ ಮಾಣಿಕ್ಕಂ ಟ್ಯಾಗೋರ್ ಅವರನ್ನು ಪ್ರತ್ಯೇಕವಾಗಿ ಭೇಟಿ ಮಾಡಿಸಿ, ಮುಂಬರುವ ಚುನಾವಣೆಯಲ್ಲೂ ಹಾಲಿ ಶಾಸಕರಿಗೆ ಟಿಕೆಟ್ ನೀಡಬೇಕು ಎಂಬ ಹಕ್ಕೊತ್ತಾಯ ಮಂಡಿಸಿದರು’ ಎಂದು ಸಭೆಯಲ್ಲಿ ಹಾಜರಿದ್ದ ಜಿಲ್ಲಾ ಕಾಂಗ್ರೆಸ್ನ ಮುಖಂಡರೊಬ್ಬರು ತಿಳಿಸಿದರು.
‘ಎಲ್ಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು, ಜಿಲ್ಲಾ ಘಟಕದ ಪದಾಧಿಕಾರಿಗಳು, ಅಂಗ ಘಟಕಗಳ ಅಧ್ಯಕ್ಷರು–ಪದಾಧಿ ಕಾರಿಗಳಿಂದ ಮಾಣಿಕಂ ಜಿಲ್ಲಾ ಅಧ್ಯಕ್ಷರ ಕೋಣೆಯಲ್ಲಿ ವೈಯಕ್ತಿಕವಾಗಿ ಅಭಿ ಪ್ರಾಯ ಸಂಗ್ರಹಿಸಿದರು. ಶ್ರೀನಿವಾಸ ಮಾನೆ ಸಾಥ್ ನೀಡಿದರು. ಒಬ್ಬೊಬ್ಬ ರನ್ನೇ ಒಳ ಕರೆದು ಅಭಿಪ್ರಾಯ ದಾಖ ಲಿಸಿಕೊಂಡರು.
ಈ ಸಂದರ್ಭ ಬಹುತೇಕರು ಮುಂಬ ರುವ ವಿಧಾನಸಭಾ ಚುನಾವಣೆಯ ಟಿಕೆಟ್ ಬಯಸಿ ಮನವಿ ಸಲ್ಲಿಸಿದರು. ಇದನ್ನು ದಾಖಲಿಸಿಕೊಂಡ ಮಾಣಿಕ್ಕಂ ಮೊದಲು ಪಕ್ಷ ಸಂಘಟನೆಗೆ, ಬಲವರ್ಧ ನೆಗೆ ಒತ್ತು ನೀಡಿ. ಚುನಾವಣೆ ಸಮೀಪಿ ಸಿದಾಗ ಆ ಕುರಿತು ಚರ್ಚಿಸಿದರಾಯಿತು ಎಂಬ ಸೂಚನೆ ರವಾನಿಸಿದರು ಎನ್ನಲಾಗಿದೆ.
ಶ್ರೀನಿವಾಸ ಮಾನೆ ಮಾಣಿಕ್ಕಂ ಅವರಿಗೆ ಬಹುತೇಕರ ಅಭಿಪ್ರಾಯವನ್ನು ಇಂಗ್ಲಿಷ್ನಲ್ಲಿ ತರ್ಜುಮೆ ಮಾಡಿದರು. ಮಾಣಿಕ್ಕಂ ಸೂಚನೆಯನ್ನು ಮಾನೆ ಪದಾ ಧಿಕಾರಿಗಳಿಗೆ ಯಥಾವತ್ ತಿಳಿಸಿದರು. ಎರಡೂವರೆ ತಾಸಿಗೂ ಅಧಿಕ ಸಮಯ ಅಭಿಪ್ರಾಯ ಸಂಗ್ರಹಣೆ ನಡೆಯಿತು’ ಎಂದು ಜಿಲ್ಲಾ ಕಾಂಗ್ರೆಸ್ ಮೂಲಗಳು ತಿಳಿಸಿವೆ.
ದುಡಿದವರನ್ನು ಕಡೆಗಣಿಸಬೇಡಿ: ‘ನಾಮಪತ್ರ ಸಲ್ಲಿಸುವ ಮುನ್ನಾ ದಿನ ಟಿಕೆಟ್ ಘೋಷಿಸುವುದಕ್ಕೆ ಬದಲು ಮುಂಚಿತವಾಗಿಯೇ ಪ್ರಕಟಿಸಿ. ಗೆಲ್ಲುವ ಕುದುರೆ ಹೆಸರಿನಲ್ಲಿ ದುಡ್ಡಿದ್ದವರಿಗೆ ಮಣೆ ಹಾಕಬೇಡಿ. ಹಿಂದಿನ ಚುನಾವಣೆಯಲ್ಲಿ ನಗರ ವಿಧಾನಸಭಾ ಕ್ಷೇತ್ರದಲ್ಲಿ ಈ ರೀತಿ ಮಣೆ ಹಾಕಿದ್ದರಿಂದ ಪಕ್ಷ ಸೊರಗಿದೆ.
ಹಾಲಿ ಶಾಸಕರಿಂದ ಸಮಾಜಕ್ಕೂ ಒಳಿತಾಗಿಲ್ಲ. ನಗರಕ್ಕೂ ಒಳ್ಳೆಯದಾಗಿಲ್ಲ. ಅಧಿಕಾರ ಕುಟುಂಬಕ್ಕೆ ಸೀಮಿತಗೊಂ ಡಿದೆ. ಎಲ್ಲ ಕ್ಷೇತ್ರಗಳಲ್ಲಿ ವಿಫಲಗೊಂಡಿ ದ್ದಾರೆ. ಬದಲಾವಣೆ ಮಾಡುವುದಿದ್ದರೆ ನಮ್ಮನ್ನು ಪರಿಗಣಿಸಿ’ ಎಂದು ಎಐಸಿಸಿ ವೀಕ್ಷಕರಿಗೆ ಮನವಿ ಸಲ್ಲಿಸಲಾಗಿದೆಂದು ಹೆಸರು ಬಹಿರಂಗ ಪಡಿಸ ಲಿಚ್ಚಿಸದ ಜಿಲ್ಲಾ ಕಾಂಗ್ರೆಸ್ ಘಟಕದ ಉಪಾಧ್ಯಕ್ಷ ಹುದ್ದೆ ಹೊಂದಿರುವ ಮುಖಂಡ ರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.
‘ಹಾಲಿ ಶಾಸಕರಿಗೆ ಟಿಕೆಟ್ ತಪ್ಪಿಸು ವುದಿಲ್ಲ. ಅವರನ್ನೇ ಮುಂದುವರೆಸು ತ್ತೇವೆ ಎನ್ನುವುದಾದರೆ ಈಗಲೇ ಕರೆದು ಜನಪರ ಕೆಲಸ ಮಾಡಲು ಬುದ್ಧಿವಾದ ಹೇಳಿ’ ಎಂದು ಹೇಳಲಾಗಿದೆ ಎಂದರು.
ಕಾಟಾಚಾರ: ‘ಎಐಸಿಸಿ ವೀಕ್ಷಕರ ಭೇಟಿ, ಸಭೆ ಕಾಟಾಚಾರದ್ದಾಗಿದೆ. ಮೂರ್ನಾಲ್ಕು ತಾಸಿನಲ್ಲಿ ಜಿಲ್ಲೆಯ ಯಾವ ವಿದ್ಯಮಾನ ಅರಿಯುತ್ತಾರೆ. ಇದು ನಾಟಕೀಯ. ನೈಜ ಕಾಳಜಿಯಿದ್ದರೆ ವೀಕ್ಷಕರು ಮೂರ್ನಾಲ್ಕು ದಿನ ಜಿಲ್ಲೆಯಲ್ಲಿ ವಾಸ್ತವ್ಯ ಹೂಡಿ, ಎಲ್ಲ ನಿಟ್ಟಿನಿಂದಲೂ ಅಭಿಪ್ರಾಯ ಸಂಗ್ರಹಿ ಸಲು ಮುಂದಾಗಲಿ’ ಎಂದು ಹಿರಿಯ ಮುಖಂಡರೊಬ್ಬರು ಅಸಮಾಧಾನ ವ್ಯಕ್ತಪಡಿಸಿದರು.
‘ಸಂಘಟನೆಗೆ ಒತ್ತು ನೀಡಿ’
ಮುಂಬರುವ ವಿಧಾನಸಭಾ ಚುನಾವಣೆಗೆ ಸ್ಪರ್ಧೆ ಬಯಸಿ ಟಿಕೆಟ್ಗೆ ಹಕ್ಕೊತ್ತಾಯ ಮಂಡಿಸಿ ದವರಿಗೆ, ಹಾಲಿ ಜನಪ್ರತಿನಿಧಿಗಳ ವಿರುದ್ಧ ದೂರುಗಳ ಸುರಿಮಳೆ ಗೈದ ಪಕ್ಷದ ಮುಖಂಡರಿಗೆ ಮಾಣಿಕ್ಕಂ, ‘ಚುನಾವಣಾ ವಿಚಾರ ಬದಿಗಿಡಿ.
ಮೊದಲು ಪಕ್ಷದ ಸಂಘಟನೆಗೆ ಆದ್ಯತೆ ನೀಡಿ. ಕಾರ್ಯಕರ್ತರ ನೋಂದಣಿ ನಡೆಸಿ. ಬೂತ್ ಸಮಿತಿ ರಚಿಸಿ. ಮುಂದಿನ ತಿಂಗಳು ಮತ್ತೆ ಭೇಟಿ ನೀಡುವೆ. ಆ ವೇಳೆಗೆ ಈ ಪ್ರಕ್ರಿಯೆ ಮುಗಿದಿರಲಿ’ ಎಂದು ಸೂಚಿಸಿದರು ಎನ್ನಲಾಗಿದೆ.
*
ದೇವರ ಹಿಪ್ಪರಗಿ–ಸಿಂದಗಿ ಕ್ಷೇತ್ರಗಳಲ್ಲಿ ಪಕ್ಷದ ಶಾಸಕರಿಲ್ಲ. ಈ ಎರಡೂ ಕ್ಷೇತ್ರಗಳಲ್ಲಿ ಮುಂಚಿತ ವಾಗಿಯೇ ಅಭ್ಯರ್ಥಿ ಘೋಷಿಸಿದರೆ, ಪೂರ್ವ ತಯಾರಿಗೆ ಒಳ್ಳೆಯದಾಗಲಿದೆ
ಹಾಸಿಂಪೀರ ವಾಲೀಕಾರ
ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.