ADVERTISEMENT

ಬಿಜೆಪಿಯಿಂದ ರಸ್ತೆ ತಡೆ; ಕಾರ್ಯಕರ್ತರು ವಶಕ್ಕೆ

​ಪ್ರಜಾವಾಣಿ ವಾರ್ತೆ
Published 6 ಸೆಪ್ಟೆಂಬರ್ 2017, 4:38 IST
Last Updated 6 ಸೆಪ್ಟೆಂಬರ್ 2017, 4:38 IST

ವಿಜಯಪುರ: ಮಂಗಳೂರಿಗೆ ತೆರಳಲು ಬೈಕ್‌ ರ್‌್ಯಾಲಿಗೆ ಅನುಮತಿ ನಿರಾಕರಣೆ, ಬೆಂಗಳೂರಿನಿಂದ ಬೈಕ್‌ ರ್‌್್ಯಾಲಿ ಹೊರಟ ಬಿಜೆಪಿ ನಾಯಕರ ಬಂಧನ ಖಂಡಿಸಿ, ವಿಜಯಪುರ ಹೊರ ವಲಯದ ಸೊಲ್ಲಾಪುರ ರಾಷ್ಟ್ರೀಯ ಹೆದ್ದಾರಿಯಲ್ಲಿ ಮಂಗಳವಾರ ರಸ್ತೆ ತಡೆ ನಡೆಸಿದ 29 ಬಿಜೆಪಿ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದು, ಕೆಲ ಹೊತ್ತಿನ ಬಳಿಕ ಬಿಡುಗಡೆಗೊಳಿಸಿದರು.

ರಾಜ್ಯ ಸರ್ಕಾರದ ನಿಲುವಿನ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಬಿಜೆಪಿ ಕಾರ್ಯಕರ್ತರು, ಮುಖಂಡರು ಒಂದೂವರೆ ತಾಸಿಗೂ ಹೆಚ್ಚಿನ ಅವಧಿ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನಗಳ ಸಂಚಾರ ಸ್ಥಗಿತಗೊಳಿಸಿ ರಸ್ತೆ ಮಧ್ಯೆ ಕುಳಿತು ಪ್ರತಿಭಟಿಸಿದರು.

‘ರಾಜ್ಯದಲ್ಲಿರುವ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಸರ್ವಾಧಿ ಕಾರಿ ಧೋರಣೆ ಅನುಸರಿಸುತ್ತಿದೆ. ಅನ್ಯಾಯವಾದಾಗ ಪ್ರತಿಭಟನೆ ನಡೆ ಸುವುದು ನಮ್ಮ ಸಂವಿಧಾನದತ್ತ ಹಕ್ಕು. ಆದರೆ ಈ ಹಕ್ಕನ್ನೇ ಕಸಿದು ಕೊಳ್ಳಲು ಮುಂದಾಗುವ ಮೂಲಕ, ರಾಜ್ಯ ಸರ್ಕಾರ ಪ್ರಜಾಪ್ರಭುತ್ವದ ಆಶಯವನ್ನೇ ಗಾಳಿಗೆ ತೂರಿದೆ’ ಎಂದು ಬಿಜೆಪಿ ಮುಖಂಡರು ಈ ಸಂದರ್ಭ ಆಕ್ರೋಶ ವ್ಯಕ್ತಪಡಿಸಿದರು.

ADVERTISEMENT

‘ಪಿಎಫ್ಐ ಸೇರಿದಂತೆ ಸಮಾಜ ವಿರೋಧಿ ಸಂಘಟನೆಗಳನ್ನು ನಿಷೇಧಿಸು ವಂತೆ ಒತ್ತಾಯಿಸಿ, ಮಂಗಳೂರಿನಲ್ಲಿ ಬೃಹತ್ ರ್‌್ಯಾಲಿ ಸಂಘಟಿಸಲಾಗಿತ್ತು. ಈ ಸಮಾವೇಶದಲ್ಲಿ ಪಾಲ್ಗೊಳ್ಳಲು ವಿವಿಧ ಕಡೆಗಳಿಂದ ಅಪಾರ ಸಂಖ್ಯೆಯ ಯುವ ಕಾರ್ಯಕರ್ತರು ತಮ್ಮ ಬೈಕ್‌ಗಳಲ್ಲಿ ತೆರಳಲು ಸಿದ್ಧರಾಗಿದ್ದರು.

ಆದರೆ ರಾಜ್ಯ ಸರ್ಕಾರ ಈ ಬೈಕ್‌ ರ್‌್ಯಾಲಿಗೆ ಅನುಮತಿ ನಿರಾಕರಿಸುವ ಮೂಲಕ ಹಕ್ಕುಗಳನ್ನು ದಮನ ಗೊಳಿ ಸುವ ಕಾರ್ಯದಲ್ಲಿ ತೊಡಗಿಸಿ ಕೊಂಡಿದೆ. ಬೆಂಗಳೂರಿನಲ್ಲಿ ಶಾಂತಿಯುತವಾಗಿ ಬೈಕ್ ರ್‌್ಯಾಲಿ ನಡೆಸಲು ಅಣಿಯಾಗುತ್ತಿದ್ದ ಬಿಜೆಪಿಯ ನಾಯಕರನ್ನು ಬಂಧಿಸಲಾಗಿದೆ. ಈ ರೀತಿ ಪ್ರತಿಪಕ್ಷಗಳ ಹೋರಾಟವನ್ನು ಹತ್ತಿಕ್ಕುವ ಪ್ರಯತ್ನದಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರ ತೊಡಗಿಸಿಕೊಂಡಿದೆ’ ಎಂದು ಪ್ರತಿಭಟನಾಕಾರರು ದೂರಿದರು.

‘ರಾಜ್ಯ ಸರ್ಕಾರ ತನ್ನ ತಪ್ಪು ನೀತಿಯನ್ನು ಕೈ ಬಿಡಬೇಕು, ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗಿಸಿ ಕೊಂಡಿರುವ ಪಿಎಫ್ಐ ಸೇರಿದಂತೆ ಇನ್ನಿತರೆ ಸಂಘಟನೆಗಳನ್ನು ನಿಷೇಧಿಸಬೇಕು’ ಎಂದು ಆಗ್ರಹಿಸಿದರು.

ಬಿಜೆಪಿ ಮುಖಂಡ ವಿಜುಗೌಡ ಪಾಟೀಲ, ಯುವ ಮೋರ್ಚಾ ಜಿಲ್ಲಾ ಘಟಕದ ಅಧ್ಯಕ್ಷ ರವಿ ಖಾನಾಪುರ, ಯುವ ಮೋರ್ಚಾ ರಾಜ್ಯ ಕಾರ್ಯದರ್ಶಿ ಶರತ್ ಬಿರಾದಾರ, ಡಾ.ಪ್ರಶಾಂತ ಕಟಕೋಳ, ಸೋಮನಗೌಡ ಪಾಟೀಲ ಸಾಸನೂರ, ಭೀಮಾಶಂಕರ ಹದನೂರ, ಆನಂದ ಮುಚ್ಚಂಡಿ, ಈರಣ್ಣ ಪಟ್ಟಣಶೆಟ್ಟಿ ಪ್ರತಿಭಟನೆ ನೇತೃತ್ವ ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.