ADVERTISEMENT

ಬಿಜೆಪಿ ಕಾರ್ಯಕರ್ತರ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 25 ನವೆಂಬರ್ 2017, 9:24 IST
Last Updated 25 ನವೆಂಬರ್ 2017, 9:24 IST

ಮುದ್ದೇಬಿಹಾಳ: ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ಪ್ರಭುಗೌಡ ದೇಸಾಯಿ ಸದಸ್ಯತ್ವ ರದ್ದುಪಡಿಸುವಲ್ಲಿ ಶಾಸಕ ಎ.ಎಸ್‌.ಪಾಟೀಲ ನಡಹಳ್ಳಿ ಕೈವಾಡವಿದೆ ಎಂದು ಆರೋಪಿಸಿ ಹಾಗೂ ಸರ್ಕಾರದ ಧೋರಣೆ ಖಂಡಿಸಿ ಗುರುವಾರ ಪಟ್ಟಣದಲ್ಲಿ ಬಿಜೆಪಿ ಕಾರ್ಯಕರ್ತರು ಪ್ರತಿಭಟಿಸಿದರು.

ಬನಶಂಕರಿ ನಗರದಲ್ಲಿ ಸೇರಿದ ಸಾವಿರಾರು ಬಿಜೆಪಿ ಕಾರ್ಯಕರ್ತರು, ಪಾದಯಾತ್ರೆ ಮೂಲಕ ಬಸವೇಶ್ವರಕ್ಕೆ ಬಂದು ಸದಸ್ಯತ್ವ ರದ್ದತಿಯಲ್ಲಿ ದೇವರ ಹಿಪ್ಪರಗಿ ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಕೈವಾಡವಿದೆಎಂದು ಆರೋಪಿಸಿ ಅವರ ಚಿತ್ರಕ್ಕೆ ಚಪ್ಪಲಿ ಹಾರ ಹಾಕಿ, ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು.

ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಆರ್.ಎಸ್.ಪಾಟೀಲ ಕೂಚಬಾಳ, ಶಿವಶಂಕರಗೌಡ ಹಿರೇಗೌಡರ ಮಾತನಾಡಿ, ‘ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ ಹೈಕೋರ್ಟ್‌ ತಡೆಯಾಜ್ಞೆ ಪರಿಗಣಿಸದೇ ರಾಜಕೀಯ ಒತ್ತಡಕ್ಕೆ ಮಣಿದು ಪ್ರಭುಗೌಡ ಸದಸ್ಯತ್ವ ಅನರ್ಹಗೊಳಿಸಿ ಆದೇಶ ಹೊರಡಿಸಿ ಅನ್ಯಾಯ ಮಾಡಿದ್ದಾರೆ. ದೇವರ ಹಿಪ್ಪರಗಿ ಮತಕ್ಷೇತ್ರದ ಜನರಿಗೆ ಮೋಸ ಮಾಡಿ ಮುದ್ದೇಬಿಹಾಳ ಮತಕ್ಷೇತ್ರಕ್ಕೆ ಬಂದು ಇಲ್ಲಿನ ಜನರಿಗೂ ಮೋಸ ಮಾಡುವ ಹುನ್ನಾರದಲ್ಲಿ ನಡಹಳ್ಳಿ ಇದ್ದಾರೆ. ಜನರಿಗೆ ಸುಳ್ಳು ಆಶ್ವಾಸನೆ ಕೊಡುವುದನ್ನು ಕರಗತ ಮಾಡಿಕೊಂಡಿರುವ ಅವರಿಗೆ 2018ರ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಲಾಗುವುದು’ ಎಂದು ಹೇಳಿದರು.

ADVERTISEMENT

ಮಂಡಲ ಅಧ್ಯಕ್ಷ ವಕೀಲ ಎಂ.ಡಿ.ಕುಂಬಾರ, ಜಿಲ್ಲಾ ಪಂಚಾಯ್ತಿ ಸದಸ್ಯ ಸಂತೋಷ ನಾಯಕ, ಬಿ.ಎಚ್.ಹಾಲಣ್ಣವರ್ ದೊರೆ, ಪದ್ಮಾವತಿ ವಾಲಿಕಾರ, ಪಾರ್ವತಿ ಗುಡಿಮನಿ, ವಾಣಿ ಗೌಡರ, ಬಸವರಾಜ ಕುಂಬಾರ, ಪ್ರಭು ಕಡಿ, ಡಾ.ಬಸವರಾಜ ಅಸ್ಕಿ, ಪರಶುರಾಮ ಪವಾರ, ಬಿ.ಪಿ.ಕುಲಕರ್ಣಿ, ಮಲಕೇಂದ್ರಗೌಡ ಪಾಟೀಲ, ಕಲ್ಲಪ್ಪ ಮೇಟಿ, ಬಸವರಾಜ ನಂದಿಕೇಶ್ವರಮಠ, ಪರಶುರಾಮ ಪವಾರ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.