ನಿಡಗುಂದಿ: ಡಾ. ಅಬ್ದುಲ್ ಕಲಾಂ ಕಂಡ ಭಾರತವನ್ನು ನಿರ್ಮಾಣ ಮಾಡುವಲ್ಲಿ ವಿದ್ಯಾರ್ಥಿಗಳ ಪಾತ್ರ ಹಿರಿದಾಗಿದೆ, ಈ ದಿಸೆಯಲ್ಲಿ ಮಕ್ಕಳನ್ನು ಸೃಜನಾತ್ಮಕವಾಗಿ ಬೆಳೆಸಬೇಕಾದ ಜವಾಬ್ದಾರಿ ಶಿಕ್ಷಕ ಮತ್ತು ಪಾಲಕರ ಮೇಲಿದೆ ಎಂದು ಡಿಆರ್ಡಿಓ ದ ಬೆಂಗಳೂರು ಶಾಖೆಯ ವಿಜ್ಞಾನಿ ಡಾ. ಜಾವೀದ್ ಅಭಿಪ್ರಾಯಪಟ್ಟರು.
ಪಟ್ಟಣದ ಸುಜ್ಞಾನ ನ್ಯಾಷನಲ್ ಪಬ್ಲಿಕ್ ಸ್ಕೂಲ್ನ ‘ಉತ್ಸವ-2017’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಇವತ್ತಿನ ವೈಜ್ಞಾನಿಕ ಜಗತ್ತಿನಲ್ಲಿ ಮಕ್ಕಳನ್ನು ಕೇವಲ ಪಠ್ಯಪುಸ್ತಕದ ಹುಳುವನ್ನಾಗಿ ಮಾಡದೇ ಸೃಜನಾತ್ಮಕವಾಗಿ ಬೆಳೆಸಿ ಪ್ರತಿ ವಿಷಯವನ್ನು ಚಿಂತನೆಗೆ ಹಚ್ಚುವ ಕೆಲಸ ಮಾಡಬೇಕಿದೆ. ಆದರೆ ಅದು ಶಾಲೆಯಲ್ಲಿ ಆಗುತ್ತಿಲ್ಲ ಎಂದು ವಿಷಾದಿಸಿದರು.
ಸಾಹಿತಿಗಳಾದ ಡಾ.ಚನ್ನಪ್ಪ ಕಟ್ಟಿ ಹಾಗೂ ಎಂ.ಎಂ. ಪಡಶೆಟ್ಟಿ ಮಾತ ನಾಡಿ, ಶಿಕ್ಷಣ ವ್ಯಾಪಾರೀಕರಣವಾಗುತ್ತಿದ್ದು, ಅದನ್ನು ತಡೆಯ ಬೇಕಾಗಿದೆ, ವೈಚಾರಿಕತೆಯ ಶಿಕ್ಷಣ, ಸಂಸ್ಕೃತಿ ಮಕ್ಕಳಲ್ಲಿ ಹೆಚ್ಚೆಚ್ಚು ಬೆಳೆಸಬೇಕಿದೆ ಎಂದರು.
‘ಮಕ್ಕಳ ಜೊತೆ ಪಾಲಕರು ನಿತ್ಯವೂ ಕೆಲ ಗಂಟೆಗಳ ಸಮಯ, ಕಾಲ ಕಳೆಯುತ್ತಾ, ಅವರನ್ನೇ ಆಸ್ತಿಯನ್ನಾಗಿ ಮಾಡಿದರೆ ಅವರಲ್ಲಿ ಮೌಲ್ಯಯುತ ಸಂಸ್ಕಾರ ಬೆಳೆಯಲು ಸಾಧ್ಯ’ ಎಂದರು.
ಹಂಪಿ ಕನ್ನಡ ವಿಶ್ವವಿದ್ಯಾಲಯ ಪ್ರಾಧ್ಯಾಪಕ ಡಾ. ವೀರೇಶ ಬಡಿಗೇರ, ಡಾ. ಸಿ.ಐ. ಕಾಜಗಾರ, ಚನ್ನಪ್ಪ ಹೂಗಾರ, ಪಿಎಸ್ಐ ರಾಜೇಶ ಲಮಾಣಿ, ಆದಿಮೂರ್ತಿ, ಶಿಕ್ಷಣ ಸಂಯೋಜಕ ಜಿ.ಬಿ. ಹಿರೇಮಠ ಮೊದಲಾದವರು ಇದ್ದರು.
ಸಂಸ್ಥೆಯ ಚೇರಮನ್ ಪ್ರಾಣೇಶ ಜೋಶಿ ಸ್ವಾಗತಿಸಿದರು. ಪ್ರೊ.ಅನಿಲ ಜೋಶಿ ನಿರೂಪಿಸಿದರು. ಚಾಂದಸಾಬ್ ವಾಲೀಕಾರ ವಂದಿಸಿದರು.
ಕಾರ್ಯಕ್ರಮದ ನಂತರ ಹಾಸ್ಯ ಚಲನಚಿತ್ರ ನಟ ರಾಜಗೋಪಾಲ ಅವರಿಂದ ಹಾಸ್ಯಾಭಿನಯ ಹಾಗೂ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.
***
ಪ್ರತಿ ವಿಷಯನ್ನೂ ವೈಜ್ಞಾನಿಕ ಮನೋಭಾವದಿಂದ ವಿಶ್ಲೇಷಿಸುವ ಸಾಮರ್ಥ್ಯವನ್ನು ಮಗುವಿನಲ್ಲಿ ಬೆಳೆಸುವಂತಹ ಶಿಕ್ಷಣ ಇಂದಿನ ಅಗತ್ಯ
- ಡಾ.ಜಾವೀದ್, ವಿಜ್ಞಾನಿ, ಡಿಆರ್ಡಿಓ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.