ADVERTISEMENT

‘ಮಕ್ಕಳಲ್ಲಿ ಅಧ್ಯಯನ ಕೌಶಲ ಬೆಳಸಿ’

ನಿಡಗುಂದಿ: ಬನಶಂಕರಿ ಪಬ್ಲಿಕ್ ಶಾಲೆಯ ವಾರ್ಷಿಕೋತ್ಸವ, ನೂತನ ಕಟ್ಟಡ ಉದ್ಘಾಟನೆ

​ಪ್ರಜಾವಾಣಿ ವಾರ್ತೆ
Published 16 ಫೆಬ್ರುವರಿ 2017, 11:11 IST
Last Updated 16 ಫೆಬ್ರುವರಿ 2017, 11:11 IST
ನಿಡಗುಂದಿ: ‘ಮಕ್ಕಳು ಏಕಾಗ್ರತೆ, ಅಧ್ಯಯನದ ಕೌಶಲ ವೃದ್ಧಿಸಿಕೊಳ್ಳುವು ದರ ಜೊತೆಗೆ ಸೃಜನಾತ್ಮಕ ಚಿಂತನೆ ಮೂಲಕ ತಮ್ಮ ಸಾಮರ್ಥ್ಯವನ್ನು ತೋರ್ಪಡಿಸಲು ಮುಂದಾಗಬೇಕು’ ಎಂದು ಮಾಜಿ ಸಚಿವ ಎಸ್.ಕೆ. ಬೆಳ್ಳುಬ್ಬಿ ಹೇಳಿದರು.
 
ಪಟ್ಟಣದ ಗುರುಕೃಪಾ ಸಂಸ್ಥೆಯ ಬನಶಂಕರಿ ಪಬ್ಲಿಕ್ ಶಾಲೆಯ ಮೊದಲೇ ಮಹಡಿಯ ನೂತನ ಕಟ್ಟಡವನ್ನು ಉದ್ಘಾಟಿಸಿ ಅವರು ಮಾತನಾಡಿದರು.
 
ವಾರ್ಷಿಕೋತ್ಸವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಪಟ್ಟಣ ಪಂಚಾಯ್ತಿ ಅಧ್ಯಕ್ಷ ಸಂಗಮೇಶ ಬಳಿಗಾರ, ಮಕ್ಕಳಿಗೆ ಒಳ್ಳೆಯ ಸಂಸ್ಕಾರ ನೀಡುವಲ್ಲಿ ಪಾಲಕರ ಪಾತ್ರವೂ ಮುಖ್ಯ. ನಿರಂತರ ವ್ಯಾಪಕ ಮೌಲ್ಯಮಾಪನ ಜಾರಿ ಇರುವುದರಿಂದ ಮಾನಸಿಕವಾಗಿ ವಿದ್ಯಾರ್ಥಿಗಳು ಸಿದ್ಧಗೊಳ್ಳಬೇಕಾಗಿದೆ ಎಂದರು.
 
ಸಂಸ್ಥೆಯ ಚೇರಮನ್ ಸತೀಶ ಪಾಟೀಲ ಮಾತನಾಡಿ, ಪಾಲಕ- ಪೋಷಕರು ಸದಾ ಕ್ರಿಯಾಶೀಲತೆಯ ಪ್ರಶಾಂತ ಮನಸ್ಸಿರಿಸಿಕೊಳ್ಳಬೇಕಲ್ಲದೆ ಶಿಕ್ಷಕ ವೃಂದದವರು ಕೂಡಾ ಪ್ರಸನ್ನತೆಯ ಭಾವ ಹೊಂದಿರುವಂತಾಗಬೇಕು. ಹೀಗಾದಾಗ ಮಾತ್ರ ಮಕ್ಕಳ ಶೈಕ್ಷಣಿಕ ಪ್ರಗತಿ ಕಾಣಲು ಸಾಧ್ಯ ಎಂದರು. 
 
ಅರವಿಂದ ಕೊಪ್ಪ, ಮುಖಂಡ ರಾಮನಗೌಡ ಪಾಟೀಲ (ಹೆಬ್ಬಾಳ), ಸಂಗಣ್ಣ ಕೋತಿನ, ಬಸವರಾಜ ಪಟ್ಟಣ ಶೆಟ್ಟಿ, ಬಸವರಾಜ ರೇವಡಿ ಹಾಗೂ ಇತರರು ಇದ್ದರು. ನಿಡಗುಂದಿಯ ರುದ್ರಮುನಿ ಸ್ವಾಮೀಜಿ, ಜೀರಲ ಭಾವಿಯ ಆನಂದಯ್ಯಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. 
ಚಂದ್ರಶೇಖರ ಹೊಸಮನಿ ಸ್ವಾಗತಿಸಿ, ಎಂ.ಎಚ್. ಮಕಾನದಾರ ನಿರೂಪಿಸಿದರು. 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.