ವಿಜಯಪುರ: ಬಸವೇಶ್ವರರು 12ನೇ ಶತಮಾನದಲ್ಲಿ ಕೈಗೊಂಡ ಸಾಮಾಜಿಕ ಚಿಂತನೆಗಳು, ವಿಚಾರಗಳು ಇಂದಿನ ಆಧುನಿಕ ನಾಗರಿಕ ಸಮಾಜಕ್ಕೆ ಮಾದರಿ ಎಂದು ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್ ನ್ಯಾಯಾಧೀಶರಾದ ಎಚ್.ಬಿ.ಮುಕ್ತಾ ಅಭಿಪ್ರಾಯಪಟ್ಟರು.
ನಗರದ ರುಡ್ಸೆಟ್ ಸಂಸ್ಥೆಯ ಸಭಾಂಗಣದಲ್ಲಿ ಈಚೆಗೆ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘ, ಆಹೇರಿ ಬಸವೇಶ್ವರ ಕರ್ಮವೀರ ಕಲಾ ಸಾಹಿತ್ಯ ಸಂಸ್ಕೃತಿ ವೇದಿಕೆ ವತಿಯಿಂದ ಬಸವ ಜಯಂತಿ ಅಂಗವಾಗಿ ಮಾನವ ಹಕ್ಕುಗಳು, ಮಾನವೀಯ ಮೌಲ್ಯಗಳು ಹಾಗೂ ಮಹಿಳಾ ಸಮಾನತೆ ಕುರಿತು ಏರ್ಪಡಿಸಿದ್ದ ವಿಚಾರ ಸಂಕಿರಣ ಉದ್ಘಾಟಿಸಿದ ಅವರು ಮಾತನಾಡಿದರು.
ಜಗತ್ತಿನ ಅತ್ಯಂತ ಶ್ರೇಷ್ಠ ಸಮಾಜ ಚಿಂತಕರಾದ ಬಸವಣ್ಣನವರು, 12ನೇ ಶತಮಾನದಲ್ಲಿ ಅನುಭವ ಮಂಟಪದಲ್ಲಿ ಮಹಿಳೆಯರಿಗೆ ಸಾಮಾಜಿಕ ಸಮಾನತೆ ನೀಡುವುದರ ಮೂಲಕ ಸಮಾಜದಲ್ಲಿನ ಅಸಮಾನತೆಯನ್ನು ಹೋಗಲಾಡಿಸಿ, ಸಾಮಾಜಿಕ ಸಮಾನತೆ ತರುವಲ್ಲಿ ಶ್ರಮಿಸಿದರು ಎಂದು ಹೇಳಿದರು.
ಅಕ್ಕಮಹಾದೇವಿ ಮಹಿಳಾ ವಿ.ವಿ. ಕುಲಪತಿ ಪ್ರೊ.ಸಬಿಹಾ ಭೂಮಿಗೌಡ ಮಾತನಾಡಿ ಬಸವಣ್ಣನವರು ತಮ್ಮ ವಚನಗಳ ಮೂಲಕ ಸಮಾಜದಲ್ಲಿನ ಕಂದಾಚಾರ, ಜಾತಿ ವ್ಯವಸ್ಥೆ, ಮೂಢ ನಂಬಿಕೆ ಅಸ್ಪೃಶ್ಯತೆಯನ್ನು ಹೋಗಲಾ ಡಿಸಲು ನಿರಂತರವಾಗಿ ಶ್ರಮಿಸಿದರು ಎಂದರು. ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶ ಅಭಯ ಚೌಗಲಾ, ಕೇಂದ್ರ ಕಾರಾಗೃಹಅಧೀಕ್ಷಕ ಡಾ.ಮಲ್ಲಿಕಾರ್ಜುನ ಸ್ವಾಮಿ ಮಾತನಾಡಿದರು.
ರುಡ್ಸೆಟ್ ಸಂಸ್ಥೆ ನಿರ್ದೇಶಕ ಆರ್.ಟಿ.ಉತ್ತರಕರ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಐ.ಎಸ್.ಗಾಳಿ, ಪ್ರಾಚಾರ್ಯ ಡಾ.ಕಾಳಿಂಗ ಗೊಳಸಂಗಿ, ಬನದೇವಿ ಕಡಕೋಳ, ಪೂಜಾ ಬಾಗಿ, ಪ್ರೊ.ಬಿ.ಎಸ್.ಬಿರಾದಾರ, ಪ್ರೀತಿ ಕೋರೆ, ಚಂದ್ರು ತೇಲಿ ಇದ್ದರು. ಬಸವ ಸಾಹಿತ್ಯ ವೇದಿಕೆ ಅಧ್ಯಕ್ಷ ಬಂಡೆಪ್ಪ ತೇಲಿ ಸ್ವಾಗತಿಸಿ, ಉಪನ್ಯಾಸಕ ಮಲ್ಲಿಕಾರ್ಜುನ ಹತ್ತಿ ನಿರೂಪಿಸಿದರು. ಚೇತನ ಪಟ್ಟಣಶೆಟ್ಟಿ ವಂದಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.