ಸಿಂದಗಿ: ಇಲ್ಲಿಯ ಸಾರಂಗಮಠ–ಗಚ್ಚಿನಮಠದ ಪೀಠಾಧ್ಯಕ್ಷರಾದ ಪ್ರಭು ಸಾರಂಗದೇವ ಶಿವಾಚಾರ್ಯರ ಪಟ್ಟಾಧಿಕಾರ ರಜತ ಮಹೋತ್ಸವ ಸಹಸ್ರಾರು ಸಂಖ್ಯೆಯಲ್ಲಿ ಸಮಾವೇಶಗೊಂಡ ಭಕ್ತಾದಿಗಳ ಸಮ್ಮುಖದಲ್ಲಿ ಅರ್ಥಪೂರ್ಣವಾಗಿ ಜರುಗಿತು.
ಪಂಚಪೀಠದ ಉಜ್ಜಯಿನಿ ಸದ್ಧರ್ಮ ಸಿಂಹಾಸನಾಧೀಶ್ವರ ಸಿದ್ಧಲಿಂಗ ಶಿವಾಚಾರ್ಯ ಭಗವತ್ಪಾಂಗಳವರು, ಕಾಶಿ ಜ್ಞಾನ ಸಿಂಹಾಸನಾಧೀಶ್ವರ ಡಾ.ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದಂಗಳವರು ಸಮಾರಂಭದ ಸಾನ್ನಿಧ್ಯ ವಹಿಸಿ ವೀರಶೈವ ವಿಶ್ವಮಾನ್ಯ ಧರ್ಮವಾಗಿದ್ದು, ವಿಶಿಷ್ಟ, ವಿಶಾಲ ಪರಂಪರೆಯನ್ನು ಹೊಂದಿದೆ. ಪಂಚಾಚಾರ್ಯರು ಸ್ಥಾಪಿಸಿದ ಈ ಧರ್ಮವನ್ನು ಬಸವಾದಿ ಶರಣರು ಮುಂದುವರಿಸಿಕೊಂಡು ಬಂದಿದ್ದಾರೆ ಎಂದು ಹೇಳಿದರು.
ವೀರಶೈವ ಧರ್ಮದ ಗ್ರಂಥ ಸಿದ್ಧಾಂತ ಶಿಖಾಮಣಿಯನ್ನು ಅಡ್ಡಪಲ್ಲಕ್ಕಿಯಲ್ಲಿಟ್ಟು ತಾವು ಪಾದಯಾತ್ರೆ ಮಾಡುವ ಹೊಸ ಪರಂಪರೆಯನ್ನು ಪ್ರಾರಂಭಿಸಿರುವುದು ಇದೇ ಸಿಂದಗಿಯಿಂದ ಎಂದು ಕಾಶೀ ಶ್ರೀಗಳು ನುಡಿದರು.
ಇದೇ ಸಂದರ್ಭದಲ್ಲಿ 1250 ಮಹಿಳೆಯರು ಕೇರಳ ಶೈಲಿಯ ಸೀರೆಯನ್ನುಟ್ಟು ತಲೆಗೆ ದಂಡಿ ಕಟ್ಟಿಸಿಕೊಂಡು ಸಾಲಾಗಿ ಶಿಸ್ತುಬದ್ಧವಾಗಿ ಕುಳಿತುಕೊಂಡು ಉಡಿ ತುಂಬಿಸಿ ಕೊಳ್ಳುವ ಸನ್ನಿವೇಶ ಆಕರ್ಷಿಣೀಯವಾಗಿತ್ತು.
ಡಾ.ಸಂಗಮೇಶ ಸವದತ್ತಿಮಠ ವಿರಚಿತ ‘ವಿಲೋಕನ’ ಅಭಿನಂದನಾ ಗ್ರಂಥವನ್ನು ಪಂಚಪೀಠದ ಶ್ರೀಗಳು ಬಿಡುಗಡೆಗೊಳಿಸಿ ಪ್ರಭು ಸಾರಂಗದೇವ ಶಿವಾಚಾರ್ಯರಿಗೆ ಸಮರ್ಪಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.