ADVERTISEMENT

‘ಹೋಳಿ ಆಚರಣೆಯಿಂದ ಸೌಹಾರ್ದ’

ಮುದ್ದೇಬಿಹಾಳದಲ್ಲಿ ಇಂದು ಹಿರಿಯರ ಬಣ್ಣದೋಕುಳಿ

​ಪ್ರಜಾವಾಣಿ ವಾರ್ತೆ
Published 14 ಮಾರ್ಚ್ 2017, 6:28 IST
Last Updated 14 ಮಾರ್ಚ್ 2017, 6:28 IST

ಮುದ್ದೇಬಿಹಾಳ:  ಹೋಳಿ ಎಲ್ಲ ರೀತಿಯ ಬಣ್ಣಗಳ ಸಂಗಮ, ಇದು ವೈವಿಧ್ಯತೆ ಯಲ್ಲಿ ಏಕತೆಯ ಸಂಕೇತ ಎಂದು ಬಿ.ಎಸ್.ಯಡಿಯೂರಪ್ಪ ಅಭಿಮಾನಿ ಬಳಗದ ಜಿಲ್ಲಾಧ್ಯಕ್ಷ ಶಿವಶಂಕರಗೌಡ ಹಿರೇಗೌಡರ ಹೇಳಿದರು.

ಅವರು ಸೋಮವಾರ ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿ ಸಮಾನ ಮನಸ್ಕ ಗೆಳೆಯರ ಬಳಗದ ಆಶ್ರಯದಲ್ಲಿ ಏರ್ಪಡಿಸಿದ್ದ ಹೋಳಿಯ ಸಾಮೂಹಿಕ ಬಣ್ಣದೋಕುಳಿ ಆಟಕ್ಕೆ ಚಾಲನೆ ನೀಡಿ ಮಾತನಾಡಿದರು.

ಬಣ್ಣ ತುಂಬಿದ ಪಿಚಕಾರಿಯನ್ನು ಆಕಾಶಕ್ಕೆ ಸಿಡಿಸುವ ಮೂಲಕ ಹೋಳಿ ಬಣ್ಣದೋಕುಳಿಗೆ ಚಾಲನೆ ನೀಡಿದ ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ಪ್ರಭುಗೌಡ ದೇಸಾಯಿ ಮಾತನಾಡಿ, ‘ ಎಲ್ಲರೂ ಸೇರಿ ಹೋಳಿ ಆಚರಿಸಿದಲ್ಲಿ ವಿಶೇಷ ಮೆರುಗು ಕಂಡುಬರುತ್ತದೆ’ ಎಂದರು.

ಹೋಳಿ ಸಂಭ್ರಮದಲ್ಲಿ ವಿನೋದ ಹಿರೇಗೌಡರ, ಮಾಣಿಕಚಂದ ದಂಡಾವತಿ, ವಿಕ್ರಮ್ ಓಸ್ವಾಲ್, ಅಶೋಕ ಚಟ್ಟೇರ, ರಾಜಶೇಖರ ಹೊಳಿ, ಶೇಖರ ಢವಳಗಿ, ಸಂಜು ಬಾಗೇವಾಡಿ, ಕವಡಿಮಟ್ಟಿ ಪಾಟೀಲ, ಭೀಮನಗೌಡ ಪಾಟೀಲ, ರಾಜು ಪದಕಿ, ಪ್ರಭು ನಂದೆಪ್ಪನವರ ಸೇರಿದಂತೆ  ಬಳಗದ ಸದಸ್ಯರು, ಯುವಕರು, ವ್ಯಾಪಾರಸ್ಥರು ಪಾಲ್ಗೊಂಡಿದ್ದರು.

ಒಂದು ಟ್ರ್ಯಾಕ್ಟರಿನಲ್ಲಿ ಬಣ್ಣ ತುಂಬಿದ ಬ್ಯಾರಲ್, ಇನ್ನೊಂದು ಟ್ರ್ಯಾಕ್ಟರಿನಲ್ಲಿ ಡಿಜೆ ಸೌಂಡ್ ಸ್ಪೀಕರ್ ಇಟ್ಟು ಪ್ರಮುಖ ಬೀದಿ, ಬಡಾವಣೆಗಳಲ್ಲಿ ಸಂಚರಿಸಿ ಬಣ್ಣ ಎರಚುವ, ಹಲಗೆ ಬಾರಿಸುವ, ಸಂಗೀತಕ್ಕೆ ಕುಣಿಯುವ ಮೂಲಕ ವಿಶಿಷ್ಟವಾಗಿ ಆಚರಿಸಲಾಯಿತು.

ಕಾಮದಹನ: ಇದಕ್ಕೂ ಮುನ್ನ ಭಾನುವಾರ ಮಧ್ಯರಾತ್ರಿ ಹಲವು ಬಡಾ ವಣೆಗಳಲ್ಲಿ ಕಾಮದಹನ ನಡೆಸಲಾ ಯಿತು. ಕಾಮದಹನ ಸಂದರ್ಭ ರಿವಾ ಯಿತಿ ಪದಗಳ ಹಾಡುಗಾರಿಕೆ ಕೆಲವೆಡೆ ನಡೆಯಿತು. ಕಾಮಣ್ಣನ ಮಕ್ಕಳು ಕಳ್ಳ ನನ್ನ ಮಕ್ಕಳು ಎಂದು ಕೂಗುತ್ತ ಸಾರ್ವಜನಿಕರು ಮನೆಯ ಹೊರಗೆ ಸಂಗ್ರಹಿಸಿ ಇಟ್ಟಿದ್ದ ಕಟ್ಟಿಗೆ ತುಂಡುಗಳನ್ನು ಕದ್ದುತಂದು ಕಾಮಣ್ಣನ ಅಗ್ನಿಕುಂಡಕ್ಕೆ ಅರ್ಪಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.