ತಾಳಿಕೋಟೆ: ನೂತನ ತಾಲ್ಲೂಕು ರಚನೆಯಲ್ಲಿ ತಾಳಿಕೋಟೆ ಪಟ್ಟಣ ವನ್ನು ಕೈಬಿಟ್ಟು ಪರಿಶೀಲನಾ ಹಂತದಲ್ಲಿ ಟ್ಟಿರುವುದನ್ನು ಖಂಡಿಸಿ, ಡಿ.19, 20 ರಂದು ಎರಡು ದಿನ ತಾಳೆಕೋಟ ಬಂದ್ ಆಚರಿಸಲು ತಾಲ್ಲೂಕು ಹೋರಾಟ ಸಮಿತಿ ನಿರ್ಧರಿಸಿತು.
ತಾಳಿಕೋಟೆ ವಿಠ್ಠಲ ಮಂದಿರ ಸಭಾಭವನದಲ್ಲಿ ಭಾನುವಾರ ತಾಲ್ಲೂಕು ಹೋರಾಟ ಸಮಿತಿ ವತಿಯಿಂದ ನಡೆದ ಸಭೆಯಲ್ಲಿ ಎಲ್ಲರ ಅಭಿಪ್ರಾಯಗಳನ್ನು ಪಡೆದು, ಎರಡು ದಿನ ಬಂದ್ ಆಚರಿಸುವ ಮೂಲಕ ಸರ್ಕಾರ ಗಮನಹರಿಸಲು ನಿರ್ಧರಿಸಲಾಯಿತು.
ವಿಠ್ಠಲಸಿಂಗ ಹಜೇರಿ ಮಾತನಾಡಿ, ತಾಳಿಕೋಟೆ ತಾಲ್ಲೂಕು ರಚನೆಗೆ ನಡೆಸಿದ ಹೋರಾಟಕ್ಕೆ ಪ್ರತಿಯಾಗಿ ಇಂದಿನವರೆಗೆ ಸರ್ಕಾರ ನೀಡುತ್ತ ಬಂದ ಭರವಸೆಗಳನ್ನು ನಂಬಿ ಕುಳಿತಿದ್ದೇವೆ. ಆದರೆ, ದಿಢೀರಾಗಿ ತಾಳಿಕೋಟೆ ತಾಲ್ಲೂಕು ಕೇಂದ್ರ ಪ್ರಾರಂಭ ತಡವಾಗುತ್ತಿದೆ ಎನ್ನುವ ಸುದ್ದಿ ಆಘಾತ ತಂದಿದೆ.
ಸರ್ಕಾರ ತನ್ನ ಧೋರಣೆ ಬದಲಿಸಲು ಪಟ್ಟಣದಲ್ಲಿ ಎರಡು ದಿನ ಶಾಲಾ- ಕಾಲೇಜುಗಳು, ಬಸ್ ಮತ್ತು ವಾಹನ ಸಂಚಾರ, ಅಂಗಡಿ ಮುಂಗಟ್ಟುಗಳು ಸಂಪೂರ್ಣ ಬಂದ್ ಮಾಡಬೇಕು. ಡಿ.21 ರಿಂದ ನಡೆಯುವ ಸರದಿ ಸತ್ಯಾಗ್ರಹದಲ್ಲಿ ಭಾಗವಹಿಸುವ ಮೂಲಕ ತಾಲ್ಲೂಕು ಹೋರಾಟಕ್ಕೆ ಸಹಕರಿಸಬೇಕು ಎಂದು ಮನವಿ ಮಾಡಿದರು.
ಹೋರಾಟ ಸಮಿತಿ ಅಧ್ಯಕ್ಷ ದಶರಥಸಿಂಗ್ ಮನಗೂಳಿ ಮಾತನಾಡಿ, ಕಳೆದ 25 ವರ್ಷಗಳಿಂದ ಹೋರಾಟ ಮಾಡಿದರೂ ತಾಳಿಕೋಟೆ ತಾಲ್ಲೂಕು ಆಗುವಲ್ಲಿ ವಿಳಂವಾಗುತ್ತಿದೆ. ಈ ಬಾರಿ ತಾಲ್ಲೂಕು ಆಗುವರೆಗೂ ಹೋರಾಟ ನಿಲ್ಲದು. ಪ್ರಾಣ ತ್ಯಾಗಕ್ಕೂ ಸಿದ್ಧ. ಈ ಹೋರಾಟ ಜಾತ್ಯತೀತ ಮತ್ತು ಪಕ್ಷಾತೀತವಾಗಿದ್ದು, ಎಲ್ಲ ಪಕ್ಷದ ನಾಯಕರೂ ಹೋರಾಟದಲ್ಲಿ ಭಾಗ ವಹಿಸುವಂತೆ ಮನವಿ ಮಾಡಿದರು.
ಸಮಿತಿ ಕಾರ್ಯದರ್ಶಿ ಕಾಶಿನಾಥ ಮುರಾಳ, ಆರ್.ಎಸ್.ಪಾಟೀಲ ಕೂಚಬಾಳ, ಗಂಗಾಧರ ಕಸ್ತೂರಿ, ಖಾಜಾಹುಸೇನ್ ಚೌದ್ರಿ, ವೀರೇಶ ಕೋರಿ, ಇಬ್ರಾಹಿಂ ಮನ್ಸೂರ, ರಾಘು ವಿಜಾಪುರ, ಕಾಶಿರಾಯ ಮೋಹಿತೆ, ವಿಜಯಸಿಂಗ್ ಹಜೇರಿ, ಮಹೇಶ ಚಲವಾದಿ, ಸಿದ್ದು ಬಾರಿಗಿಡದ ಮಾತ ನಾಡಿದರು. ಎಸ್.ಪಿ.ಸರಶೆಟ್ಟಿ, ವಿಶ್ವನಾಥ ಬಬಲೇಶ್ವರ, ಪ್ರಕಾಶ ಹಜೇರಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.