ADVERTISEMENT

ಆಲಮಟ್ಟಿ ಉದ್ಯಾನಕ್ಕೆ ಪ್ರವಾಸಿಗರ ಲಗ್ಗೆ

​ಪ್ರಜಾವಾಣಿ ವಾರ್ತೆ
Published 16 ಜನವರಿ 2018, 7:31 IST
Last Updated 16 ಜನವರಿ 2018, 7:31 IST
ಆಲಮಟ್ಟಿ ಕೃಷ್ಣಾ ತೀರದಲ್ಲಿ ಸಂಕ್ರಮಣದ ನಿಮಿತ್ತ ರಾಕ್‌ ಉದ್ಯಾನದ ಸೂರ್ಯ ಸೆಕ್ಟರ್‌ ಜನರಿಂದ ತುಂಬಿರುವುದು
ಆಲಮಟ್ಟಿ ಕೃಷ್ಣಾ ತೀರದಲ್ಲಿ ಸಂಕ್ರಮಣದ ನಿಮಿತ್ತ ರಾಕ್‌ ಉದ್ಯಾನದ ಸೂರ್ಯ ಸೆಕ್ಟರ್‌ ಜನರಿಂದ ತುಂಬಿರುವುದು   

ಆಲಮಟ್ಟಿ (ನಿಡಗುಂದಿ): ಸಂಕ್ರಮಣದ ನಿಮಿತ್ತ ಭಾನುವಾರ, ಸೋಮವಾರ ಆಲಮಟ್ಟಿಯ ಎಲ್ಲಾ ಉದ್ಯಾನಗಳಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚಿತ್ತು. ಸಂಕ್ರಮಣ ಎರಡು ದಿನ ಬಂದ ಕಾರಣ, ಎರಡೂ ದಿನ ಕೃಷ್ಣೆ ಯಲ್ಲಿ ಜನರು ಪುಣ್ಯಸ್ನಾನ ಮಾಡಿದರು.

ಆಲಮಟ್ಟಿಯ ರಾಕ್‌, ಕೃಷ್ಣಾ, ಲವಕುಶ ಉದ್ಯಾನದಲ್ಲಿ ಜನ ಜುಂಗಳಿ ಹೆಚ್ಚಿತ್ತು. ಬುತ್ತಿ ಕಟ್ಟಿಕೊಂಡು ಬಂದು ರಾಕ್‌ ಉದ್ಯಾನದಲ್ಲಿ ಕುಳಿತು ಊಟ ಸೇವಿಸುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಸವದತ್ತಿ ಯಲ್ಲಮ್ಮ, ಬದಾಮಿ ಬನಶಂಕರಿ, ಕೂಡಲಸಂಗಮದ ಶರಣಮೇಳದ ಕಡೆ ತೆರಳಿದ್ದ ಭಕ್ತರು, ಆಲಮಟ್ಟಿ ಕಡೆ ಹೆಚ್ಚಿಗೆ ಬಂದಿದ್ದರು.

ಸಂಜೆ ನಂತರ ಮೊಘಲ್‌, ಇಟಾಲಿಯನ್‌, ಫ್ರೆಂಚ್‌, ಎಂಟ್ರನ್ಸ್‌ ಪ್ಲಾಜಾ ಹಾಗೂ ಸಂಗೀತ ಕಾರಂಜಿಯಲ್ಲಿಯೂ ಪ್ರವಾಸಿಗರ ಸಂಖ್ಯೆ ಹೆಚ್ಚಿತ್ತು.  ರಾಕ್‌ ಉದ್ಯಾನದಲ್ಲಿ ಎರಡು ಟಿಕೆಟ್‌ ಕೌಂಟರ್‌ ತೆರೆದು ಎರಡೂ ಕಡೆ ಪ್ರವೇಶ ದ್ವಾರದಿಂದ ಪ್ರವಾಸಿಗರಿಗೆ ಪ್ರವೇಶ ಕಲ್ಪಿಸಲಾಗಿತ್ತು.

ADVERTISEMENT

ಹಣ ಸಂಗ್ರಹ: ನಿತ್ಯ ಒಂದು ಪ್ರದರ್ಶನ ಇರುವ ಸಂಗೀತ ಕಾರಂಜಿ ಭಾನುವಾರ ಸಂಗೀತ ಕಾರಂಜಿಯ ಮೂರು ಪ್ರದರ್ಶನ ಮಾಡಲಾಗಿದ್ದು, ಅದರಿಂದ ₹ 87,000 ಸಂಗ್ರಹವಾಗಿದೆ. ರಾಕ್‌ ಉದ್ಯಾನದಲ್ಲಿ ₹ 1,05,750, ಕೃಷ್ಣಾ ಉದ್ಯಾನದಲ್ಲಿ ₹ 21,025, ಲವಕುಶದಲ್ಲಿ ₹ 13,600 ಸಂಗ್ರಹವಾಗಿದೆ ಎಂದು ಕೆಬಿಜೆಎನ್‌ಎಲ್‌ ಮೂಲಗಳು ತಿಳಿಸಿವೆ.

ಆರ್‌ಎಫ್‌ಒ ಮಹೇಶ ಪಾಟೀಲ, ಜೆಇ ಶಂಕ್ರಯ್ಯ ಮಠಪತಿ ಸೇರಿದಂತೆ ಮೊದಲಾದವರು ಮೂಲಭೂತ ಸೌಲಭ್ಯ ಕಲ್ಪಿಸುವ ಉಸ್ತುವಾರಿ ವಹಿಸಿದ್ದರು. ಬಸವನಬಾಗೇವಾಡಿ ಡಿವೈಎಸ್‌ಪಿ ನೇತೃತ್ವದಲ್ಲಿ ಐವರು ಪಿಎಸ್‌ಐ, ಏಳು ಎಎಸ್‌ಐ, 40 ಕಾನ್‌ಸ್ಟೆಬಲ್, 1 ಡಿಎಎಆರ್ ತುಕಡಿ, 200 ಕ್ಕೂ ಅಧಿಕ ಅರಣ್ಯ ದಿನಗೂಲಿ ಗಳು, ಕೆಎಸ್‌ಐಎಸ್‌ಎಫ್‌ನ 40 ಕ್ಕೂ ಅಧಿಕ ಸಿಬ್ಬಂದಿ ಭದ್ರತೆಗೆ ನಿಯೋಜನೆಗೊಂಡಿದ್ದರು.

* * 

ಕೆಬಿಜೆಎನ್‌ಎಲ್‌ನಿಂದ ಸಂಕ್ರಾಂತಿ ಹಬ್ಬ ಆಚರಿಸಿ, ಈ ಭಾಗದ ಕಲೆ, ಸಂಸ್ಕೃತಿಯನ್ನು ಪರಿಚಯಿಸುವ, ನೀರಿನ ಮಹತ್ವ ತಿಳಿಸುವ ಕಾರ್ಯಕ್ರಮ ಏರ್ಪಡಿಸಿದ್ದರೆ ಚೆನ್ನಾಗಿತ್ತು
ಚಂದ್ರಶೇಖರ ನುಗ್ಲಿ
ಕಾರ್ಯದರ್ಶಿ, ಕ.ರಾ.ಪ್ರಾ.ಶಾ.ಶಿ. ಸಂಘ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.