ADVERTISEMENT

ಬಸವೇಶ್ವರ ಪ್ರತಿಮೆ ಸ್ಥಾಪನೆಗೆ ಸಿದ್ಧತೆ

​ಪ್ರಜಾವಾಣಿ ವಾರ್ತೆ
Published 3 ಸೆಪ್ಟೆಂಬರ್ 2017, 10:37 IST
Last Updated 3 ಸೆಪ್ಟೆಂಬರ್ 2017, 10:37 IST

ಶಹಾಪುರ: ಇಲ್ಲಿನ ಮೊಚಿಗಡ್ಡೆ ರಸ್ತೆಯ ಮಧ್ಯದಲ್ಲಿ ಬಸವೇಶ್ವರ ವೃತ್ತದ ಹತ್ತಿರ ವಿಶ್ವಗುರು ಬಸವಣ್ಣನವರ ಅಶ್ವರೂಢ ಪ್ರತಿಮೆ ಸ್ಥಾಪನೆಗೆ ಕಟ್ಟೆಯ ಕೆಲಸ ಭರದಿಂದ ಸಾಗಿದೆ.
ಪ್ರತಿಮೆ ಸ್ಥಾಪನೆಗೆ ವೀರಶೈವ ಲಿಂಗಾಯತ ಸಮುದಾಯದ ಮುಖಂಡರು ಹಾಗೂ ಮಠಾಧೀಶರು ನಿರಂತರವಾಗಿ ಅಧಿಕಾರಿ ಹಾಗೂ ಜನಪ್ರತಿನಿಧಿಗಳ ಮೇಲೆ ಒತ್ತಡ ತಂದಾಗ ಜನಪ್ರತಿನಿಧಿಗಳು ಬಸವ ಜಯಂತಿಯ ದಿನ ಅಡಿಗಲ್ಲು ಹಾಕಿದ್ದರು.

‘ಎರಡು ವರ್ಷಗಳ ಹಿಂದೆಯೇ ಪ್ರತಿಮೆಯನ್ನು ತಂದು ಚರಬಸವೇಶ್ವರ ದೇವಸ್ಥಾನದ ಬಳಿ ಇರಿಸಲಾಗಿದೆ. ಯಾವ ಜಾಗದಲ್ಲಿ ಸ್ಥಾಪಿಸಬೇಕು ಎಂಬ ಗೊಂದಲದಿಂದ ಸಮಸ್ಯೆ ಉಂಟಾಗಿತ್ತು. ಬೀದರ್–ಶ್ರೀರಂಗಪಟ್ಟಣ ರಾಜ್ಯ ಹೆದ್ದಾರಿಯ ಮೇಲೆ ಸ್ಥಾಪಿಸಿದರೆ ಕಾನೂನು ತೊಡಕುಂಟಾಗಬಹುದು ಎಂಬ ಆಲೋಚನೆಯಿಂದ ಹೆದ್ದಾರಿ ವ್ಯಾಪ್ತಿಯನ್ನು ಬಿಡಲಾಗಿದೆ. ನಗರಸಭೆಯ ರಸ್ತೆಯ ಮೇಲೆ ಎಂಟು ಅಡಿ ಎತ್ತರದ ಕಟ್ಟೆಯನ್ನು ನಿರ್ಮಿಸಿದ ಮೇಲೆ ಪ್ರತಿಮೆಯನ್ನು ಸ್ಥಾಪಿಸಲಾಗುತ್ತದೆ’ ಎಂದು ನಗರಸಭೆಯ ಅಧಿಕಾರಿಯೊಬ್ಬರು ತಿಳಿಸಿದರು.

‘ಈಗಾಗಲೇ ನಗರಸಭೆಯ ಸಾಮಾನ್ಯ ಸಭೆಯಲ್ಲಿ ಪ್ರತಿಮೆ ಸ್ಥಾಪನೆಗೆ ನಿರ್ಣಯವನ್ನು ಅಂಗಿಕರಿಸಲಾಗಿದೆ’ ಎಂದು ಅವರು ತಿಳಿಸಿದ್ದಾರೆ. ‘ಕಾಮಗಾರಿ ತ್ವರಿತವಾಗಿ ಮುಕ್ತಾಯಗೊಳಿಸಿ ಶೀಘ್ರವಾಗಿ ಪ್ರತಿಮೆ ಅನಾವರಣ ಕಾರ್ಯ ಸಾಗಲಿ’ ಎಂದು ಬಸವಾಭಿಮಾನಿಗಳು ಮನವಿ ಮಾಡಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.