ಶಹಾಪುರ: ‘ರೈತ ಸಂಪರ್ಕ ಕೇಂದ್ರಗಳಲ್ಲಿ ರೈತರಿಗೆ ಅಗತ್ಯ ಸಲಕರಣೆಗಳು ಸಿಗುತ್ತಿಲ್ಲ. ಕ್ರಿಮಿನಾಶಕ ನಾಪತ್ತೆಯಾಗಿದೆ. ಕೃಷಿ ಸಾಮಗ್ರಿಗಳು ಉಳ್ಳವರ ಪಾಲು ಆಗುತ್ತಿವೆ’ ಎಂದು ಆರೋಪಿಸಿ ಬುಧವಾರ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಮುಖಂಡರು ಸಹಾಯಕ ಕೃಷಿ ನಿರ್ದೇಶಕ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.
‘ ಗ್ರಾಮೀಣ ಪ್ರದೇಶದ ರಸಗೊಬ್ಬರ ಅಂಗಡಿಯಲ್ಲಿ ದುಬಾರಿ ಬೆಲೆಗೆ ರಸಗೊಬ್ಬರ ಹಾಗೂ ಕ್ರಿಮಿನಾಶಕ ಮಾರಾಟ ಮಾಡುತ್ತಿದ್ದಾರೆ. ರೈತರನ್ನು ಶೋಷಣೆ ಮಾಡುತ್ತಿದ್ದರೂ ಕೃಷಿ ಇಲಾಖೆ ಗಮನಹರಿಸುತ್ತಿಲ್ಲ. ಕೃಷಿ ಹೊಂಡ ನಿರ್ಮಾಣದಲ್ಲಿ ತಾರತಮ್ಯ ನೀತಿ ಅನುಸರಿಸುತ್ತಿದ್ದಾರೆ. ಸಬ್ಸಿಡಿ ದರದಲ್ಲಿ ಸಿಗುವ ಕೃಷಿ ಯಂತ್ರೋಪಕರಣಗಳನ್ನು ಖಾಸಗಿ ವ್ಯಕ್ತಿಗಳಿಗೆ ಮಾರಾಟ ಮಾಡುತ್ತಿದ್ದಾರೆ. ರೈತರು ಕೇಳಿದರೆ ನಾಳೆ ಬಾ ಎಂಬ ಉತ್ತರ ನೀಡುತ್ತಾರೆ’ ಎಂದು ಪ್ರತಿಭಟನಾನಿರತರು ಆರೋಪಿಸಿದರು.
‘ರೈತ ಸಂಪರ್ಕ ಕೇಂದ್ರದಲ್ಲಿ ಸರ್ಕಾರದ ಮಾರ್ಗಸೂಚಿಯ ನಿಯಮದಂತೆ ರಸಗೊಬ್ಬರ ವಿತರಿಸಬೇಕು. ಎಲ್ಲಾ ರೈತರಿಗೂ ಸಬ್ಸಿಡಿ ದರದಲ್ಲಿ ಕೃಷಿ ಯಂತ್ರಗಳನ್ನು ನೀಡಬೇಕು. ಕೃಷಿ ಇಲಾಖೆಯಲ್ಲಿರುವ ದಲ್ಲಾಳಿಗಳ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು’ ಎಂದು ಆಗ್ರಹಿಸಿದರು.
ರೈತ ಮುಖಂಡರಾದ ಹಣಮಂತ ಕೊಂಗಂಡಿ, ಶರಣಪ್ಪ ರುದ್ರವಾಡ, ದೇವಿಂದ್ರಪ್ಪ ಪೊಲೀಸ ಪಾಟೀಲ್, ಸಾಯಿಬಣ್ಣ ಪೂಜಾರಿ, ಹಣಮಂತ ಮಡಿವಾಳ, ಶಾರದಾ ಕನ್ನಾಕೊಳ್ಳೂರ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.