ಸುರಪುರ: ತಾಲ್ಲೂಕಿನ ಗೊಗಡಿಹಾಳ ಗ್ರಾಮದ ರೈತರು ಸಮರ್ಪಕ ವಿದ್ಯುತ್ ಪೂರೈಸುವಂತೆ ಆಗ್ರಹಿಸಿ ಗುರುವಾರ ನಗರದ ಜೆಸ್ಕಾಂ ಕಚೇರಿ ಎದುರು ಪ್ರತಿಭಟನೆ ನಡೆಸಿದರು. ಮುಖಂಡ ಶೃನಗೌಡ ಗೂಗಲ್ ಮಾತನಾಡಿ, ‘ತಾಲ್ಲೂಕಿನಲ್ಲಿ ಸರಿಯಾದ ವಿದ್ಯುತ್ ಸರಬರಾಜಿಲ್ಲದೆ ರೈತರು ನೀರಿಗಾಗಿ ಸಂಕಷ್ಟ ಎದರಿಸುವಂತಾಗಿದೆ. ಬೆಳೆ ಹಾನಿಯಾಗುವ ಭೀತಿ ಎದು ರಾಗಿದೆ’ ಎಂದು ದೂರಿದರು.
ಗುರುನಾಥರೆಡ್ಡಿ ವಣಕಿಹಾಳ ಮಾತನಾಡಿ, ‘ಗೊಗಡಿಹಾಳ ಸುತ್ತಮುತ್ತಲ ಗ್ರಾಮಗಳ ರೈತರು ಬೆಳೆಗಳಿಗೆ ವಿದ್ಯುತ್ ನಂಬಿದ್ದಾರೆ.ರಾತ್ರಿ 4ಕ್ಕೆ ತ್ರಿಫೇಸ್ ವಿದ್ಯುತ್ ನೀಡುತ್ತಿರುವುದು ಸರಿಯಲ್ಲ. ಆ ಸಂದರ್ಭದಲ್ಲಿ ರೈತರಿಗೆ ಜಮೀನುಗಳಿಗೆ ನೀರು ಹಾಯಿಸುವುದು ತೀವ್ರ ತೊಂದರೆಯಾಗುತ್ತದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.
‘ರಾತ್ರಿ ವೇಳೆ ನೀರು ಬಿಡಲು ಹೋಗಿ ಹಾವು ಕಡಿತದಿಂದ ಒಬ್ಬ ವ್ಯಕ್ತಿ ಮೃತ ಪಟ್ಟಿದ್ದಾರೆ. ಅಲ್ಲದೆ ನಗನೂರ ಗ್ರಾಮದ ರೈತರೊಬ್ಬರು ಬೆಳಗಿನ ಜಾವ ವಿದ್ಯುತ್ ತಗುಲಿ ಮೃತಪಟ್ಟಿದ್ದಾರೆ. ಇಂತಹ ಹಲವು ಸಮಸ್ಯೆಗಳು ತಲೆದೋರಿವೆ’ ಎಂದು ತಿಳಿಸಿದರು.
ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಈರಣ್ಣ ಆಳ್ಳಿಚಂಡಿ ಅವರಿಗೆ ಮನವಿ ಸಲ್ಲಿಸಲಾಯಿತು. ಶಿವರಾಜ ಹೆಳವರ, ರಮೇಶ ಗೊಗಡಿಹಾಳ, ದೇವೆಂದ್ರಪ್ಪ, ಬಸವರಾಜ ಹಾಗು ಶ್ರೀನಿವಾಸ ಮೇಲಿನಮನಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.