ADVERTISEMENT

‘ಶಾಂತಿ ಕಾಪಾಡುವುದು ಕಾನೂನಿನ ಉದ್ದೇಶ’

​ಪ್ರಜಾವಾಣಿ ವಾರ್ತೆ
Published 27 ನವೆಂಬರ್ 2017, 9:35 IST
Last Updated 27 ನವೆಂಬರ್ 2017, 9:35 IST
ಯಾದಗಿರಿಯಲ್ಲಿ ಭಾನುವಾರ ನಡೆದ ಸರ್ವಧರ್ಮಗಳ ಶಾಂತಿ ವಿಚಾರಗೋಷ್ಠಿಯಲ್ಲಿ ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್ ನ್ಯಾಯಾಧೀಶ ಸದಾನಂದ ನಾಯಕ ಮಾತನಾಡಿದರು
ಯಾದಗಿರಿಯಲ್ಲಿ ಭಾನುವಾರ ನಡೆದ ಸರ್ವಧರ್ಮಗಳ ಶಾಂತಿ ವಿಚಾರಗೋಷ್ಠಿಯಲ್ಲಿ ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್ ನ್ಯಾಯಾಧೀಶ ಸದಾನಂದ ನಾಯಕ ಮಾತನಾಡಿದರು   

ಯಾದಗಿರಿ:‘ಕಾನೂನು ಸಮಾಜದಲ್ಲಿ ನಿರಂತರವಾಗಿ ಶಾಂತಿ ಸುವ್ಯವಸ್ಥೆ ನೆಲೆಸಿರಬೇಕು ಎಂಬುದನ್ನು ಪ್ರತಿಪಾದಿಸುತ್ತದೆ’ ಎಂದು ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್ ನ್ಯಾಯಾಧೀಶ ಸದಾನಂದ ನಾಯಕ ಹೇಳಿದರು.

ನಗರದ ಇಂಪೀರಿಯಲ್‌ ಗಾರ್ಡನ್‌ನಲ್ಲಿ ಭಾನುವಾರ ಅಹಮದೀಯ ಮುಸ್ಲಿಂ ಕಮ್ಯುನಿಟಿ ಹಮ್ಮಿಕೊಂಡಿದ್ದ ಸರ್ವಧರ್ಮಗಳ ಶಾಂತಿ ವಿಚಾರಗೋಷ್ಠಿ ಉದ್ಘಾಟಿಸಿ ಅವರು ಮಾತನಾಡಿದರು.

‘ಸಮಾಜ ಹುಟ್ಟಿನಿಂದಲೂ ವ್ಯಾಜ್ಯಗಳು ಇವೆ. ಈಚೆಗೆ ನಾಗರಿಕತೆ ಬೆಳೆದಂತೆಲ್ಲ, ಮಾನವ ತಾಂತ್ರಿಕತೆಗೆ ಒಗ್ಗಿಕೊಂಡಂತೆಲ್ಲ ವ್ಯಾಜ್ಯಗಳು ಕೂಡ ಹೆಚ್ಚಿದೆ. ಹೆಚ್ಚುತ್ತಿರುವ ವ್ಯಾಜ್ಯಗಳಿಂದ ಸಮಾಜದಲ್ಲಿ ಶಾಂತಿ ಕದಡುತ್ತಿದೆ. ಪ್ರಮುಖವಾಗಿ, ಜಾತಿ, ಅಸಹಿಷ್ಣುತೆ, ಧಾರ್ಮಿಕತೆ ಹಿನ್ನೆಲೆಯಲ್ಲಿ ಶಾಂತಿ ಕದಡುವಂತಹ ಕೃತ್ಯಗಳು ಹೆಚ್ಚುತ್ತಿವೆ’ ಎಂದರು.

ADVERTISEMENT

ಬಿಜೆಪಿ ಎಸ್‌ಟಿ ಮೋರ್ಚಾ ರಾಜ್ಯ ಘಟಕ ಅಧ್ಯಕ್ಷ ರಾಜೂಗೌಡ ಮಾತನಾಡಿ,‘ಕೇವಲ ಹೆಣ್ಣು ಕೊಟ್ಟು –ತಂದುಕೊಳ್ಳುವ ಸಂದರ್ಭಕ್ಕಷ್ಟೇ ಮೀಸಲಾಗಿದ್ದ ಜಾತಿ ವ್ಯವಸ್ಥೆ ಇಂದು ಸಮಾಜದಲ್ಲಿ ಪೆಡಂಭೂತದಂತೆ ವ್ಯಾಪಿಸಿದೆ. ರಾಜಕೀಯದಲ್ಲಿ ಇಂದು ಮುಖಂಡರನ್ನು ಜಾತಿ ಆಧಾರದ ಮೇಲೆ ಗುರುತಿಸಿಸುವ, ಪ್ರಾಧಾನ್ಯತೆ ನೀಡುವ ಪ್ರವೃತ್ತಿ ಹೆಚ್ಚಿದೆ’ ಎಂದು ಬೇಸರ ವ್ಯಕ್ತಪಡಿಸಿದರು.

‘ತಿಂಥಿಣಿ ಮೌನೇಶ್ವರ, ಕೊಡೇಕಲ್ ಬಸವಣ್ಣ ದೇವರುಗಳ ಜಾತ್ರೆಗಳನ್ನು ಹಿಂದೂ ಮುಸ್ಲಿಮರ ಸೌಹಾರ್ದ ಆಚರಣೆಗಳ ಮೇಲೆ ನಡೆದುಕೊಂಡು ಬಂದಿವೆ. ಹಿಂದೆ ಇಲ್ಲದ ಜಾತಿವ್ಯವಸ್ಥೆ ಬಲಿಷ್ಠಗೊಂಡಿರುವುದರಿಂದ ಇಂದು ಅಸಹಿಷ್ಣುತೆ ಉದ್ಭವಿಸುತ್ತಿದೆ. ಜಾತ್ಯತೀತ ಮನೋಭಾವದಿಂದ ಬದುಕಿದ್ದ ನಮ್ಮ ಹಿರಿಯರ ಮನೋಧರ್ಮ ನಮಗೇಕಿಲ್ಲ’ ಎಂದು ಪ್ರಶ್ನಿಸಿದರು.

‘ಅಧರ್ಮಿಯರು ಸಮಾಜದಲ್ಲಿ ಸೃಷ್ಟಿಸುವ ಕೃತ್ಯಗಳಿಂದಾಗಿ ಸೌಹಾರ್ದಯುತವಾಗಿ ಬದುಕುವವರು ಕಿವಿಗೊಡಬಾರದು. ಘಟನೆಗಳಿಗೆ ಏಕವ್ಯಕ್ತಿ, ಸಂಘಟನೆ ಮಾತ್ರ ಕಾರಣವಾಗಿರುತ್ತದೆ. ಆದರೆ, ಇಡೀ ಸಮುದಾದ್ಲಲಿನ ಜನರು ನೆಮ್ಮದಿ ಕಳೆದುಕೊಳ್ಳುತ್ತಾರೆ. ಅದು ಆಗಬಾರದು ಎಂದರೆ ಇಂತಹ ಸರ್ವಧರ್ಮಗಳ ವಿಚಾರಗೋಷ್ಠಿಗಳ ಅವಶ್ಯತೆ ಇದೆ’ ಎಂದರು.

ಬ್ರಹ್ಮಕುಮಾರಿ ಸ್ವಾತಿ ಅಕ್ಕ ಮಾತನಾಡಿ,‘ಸ್ವಾತಂತ್ರ್ಯ ಪೂರ್ವದಲ್ಲಿ ಬಾಂಗ್ಲಾ, ಪಾಕಿಸ್ತಾನ ಭಾರತದಲ್ಲೇ ಇದ್ದವು. ಆಗ ಬಹುಶಕ್ತಿಯ ಭಾರತದಲ್ಲಿ ಎಂದೂ ತಲೆದೋರದ ಜಾತಿ, ಧರ್ಮದ ಸಮಸ್ಯೆಗಳು ಈಗ ಸೃಷ್ಟಿಗೊಂಡಿವೆ. ಇದು ಪಟ್ಟಭದ್ರರ ಸಂಚು. ಅದಕ್ಕೆ ಮಣೆಹಾಕದೆ ಸರ್ದಧರ್ಮಗಳನ್ನು ಪ್ರೀತಿಸುವ ಮನೋಭಾವ ರೂಢಿಸಿಕೊಳ್ಳಬೇಕು’ ಎಂದು ಹೇಳಿದರು.

ಬಿಜೆಪಿ ಮುಖಂಡರಾದ ಡಾ.ವೀರಬಸಂತ ರೆಡ್ಡಿ, ನಾಗರತ್ನಾ ಕುಪ್ಪಿ ಮಾತನಾಡಿದರು. ಜಮಾತೆ ಅಹ್ಮದೀಯಾ ಸಂಘಟನೆಯ ಜಿಲ್ಲಾಧ್ಯಕ್ಷ ಮಹಮ್ಮದ್ ಅಸದ್ ಸುಲ್ತಾನ ಘೋರಿ ವಿಚಾರಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದರು. ಅಹ್ಮದೀಯಾ ಸಂಘಟನೆಯ ಜಿಲ್ಲಾ ಮಿಷನರಿ ಉಸ್ತುವಾರಿ ಶೇಖ್ ಬುರಾನ್ ಸಾಹೇಬ, ನಗರ ಅಧ್ಯಕ್ಷ ಅಬ್ದುಲ್ ಮನ್ನಾನ್ ಸಾಲಿಕ್, ಯುವ ಘಟಕದ ಜಿಲ್ಲಾ ಅಧ್ಯಕ್ಷ ತಾಹೇರ ಅಹ್ಮದ್ ಸೌದಾಗರ ಇದ್ದರು.

ದೂರ ಉಳಿದ ಸ್ವಾಮೀಜಿ
ವಿಚಾರಗೋಷ್ಠಿಯ ಸಾನ್ನಿಧ್ಯ ವಹಿಸಬೇಕಿದ್ದ ಅಬ್ಬೇತುಮಕೂರಿನ ಸಿದ್ದಸಂಸ್ಥಾನ ಮಠದ ಪೀಠಾಧಿಪತಿ ಗಂಗಾಧರ ಸ್ವಾಮೀಜಿ ಸರ್ಮಧರ್ಮ ವಿಚಾರಗೋಷ್ಠಿಯಿಂದ ದೂರು ಉಳಿದಿದ್ದರು.

* * 

ಪ್ರೀತಿ ಎಲ್ಲರಲ್ಲೂ, ದ್ವೇಷವಿಲ್ಲ ಯಾರಲ್ಲೂ ಎಂಬ ನೀತಿ ಸರ್ವಧರ್ಮಗಳ ಮೂಲ ತತ್ವವಾಗಬೇಕು. ಈ ನೀತಿಯನ್ನು ಮಸೂದೆಯನ್ನಾಗಿಸಿದರೂ ಉತ್ತಮ
ಮಹಮ್ಮದ್ ಅಸದ್ ಸುಲ್ತಾನ ಘೋರಿ
ಅಧ್ಯಕ್ಷ, ಜಮಾತೆ ಅಹ್ಮದೀಯಾ ಸಂಘಟನೆ ಜಿಲ್ಲಾ ಘಟಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.