ಯಾದಗಿರಿ: ‘ರಾಷ್ಟ್ರವಾದವನ್ನು ಪ್ರತಿ ಪಾದಿಸುವ ಬಿಜೆಪಿ ಇತರೇ ರಾಜಕೀಯ ಪಕ್ಷಗಳಿಗಿಂತ ಭಿನ್ನವಾಗಿದೆ. ಇಲ್ಲಿ ದೇಶದ ಸರ್ವಾಂಗೀಣ ಅಭಿವೃದ್ಧಿಯೇ ಮೂಲಮಂತ್ರವಾಗಿದೆ’ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್.ರವಿಕುಮಾರ ಹೇಳಿದರು. ನಗರದ ಬಿಜೆಪಿ ಕಚೇರಿಯಲ್ಲಿ ಶುಕ್ರವಾರ ನಡೆದ ಮೂರನೇ ಜಿಲ್ಲಾ ಮಟ್ಟದ ಕಾರ್ಯಕಾರಿಣಿ ಉದ್ಘಾಟಿಸಿ ಅವರು ಮಾತನಾಡಿದರು.
‘ದೀನ್ ದಯಾಳ ಉಪಾಧ್ಯಾಯ, ಪಂ.ಶ್ಯಾಮಪ್ರಕಾಶ ಮುಖರ್ಜಿ, ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜುಪೇಯಿ ಸೇರಿದಂತೆ ಅನೇಕ ನಾಯಕರು ತಮ್ಮ ತನುಮನದಿಂದ ಪಕ್ಷಕ್ಕಾಗಿ ಸೇವೆ ಸಲ್ಲಿಸಿದ್ದಾರೆ. ದೇಶವನ್ನು ಅಭಿವೃದ್ಧಿಯ ಪಥದತ್ತ ಕೊಂಡೊಯ್ಯಲು ಶ್ರಮಿ ಸಿದ್ದಾರೆ’ ಎಂದರು.
‘ಕೇಂದ್ರದಲ್ಲಿ ಆಡಳಿತ ನಡೆ ಸುತ್ತಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಜನಪರ ಯೋಜ ನೆಗಳನ್ನು ಜಾರಿಗೆ ತರುವ ಮೂಲಕ ಶ್ರೀಸಾ ಮಾನ್ಯನ ಸಮಸ್ಯೆಗಳನ್ನು ಪರಿ ಹರಿಸಲು ಪ್ರಯತ್ನಿಸುತ್ತಿದ್ದಾರೆ. ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಪಕ್ಷ ಜಯಭೇರಿ ಬಾರಿಸುತ್ತಿದ್ದು, ಮತದಾರ ಪಕ್ಷದ ಜೊತೆಗಿದ್ದಾನೆ ಎಂಬುದು ಸಾಬೀತಾಗಿದೆ’ ಎಂದರು.
‘ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಯಾದಗಿರಿ ಜಿಲ್ಲೆಯ 4 ಕ್ಷೇತ್ರಗಳಲ್ಲಿ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸುವುದೇ ನಮ್ಮ ಗುರಿಯಾಗಿದೆ. ಈ ನಿಟ್ಟಿನಲ್ಲಿ ರಾಜ್ಯ ಕಾರ್ಯಕಾರಿಣಿ ಮುಗಿದ ನಂತರ ಜಿಲ್ಲಾ ಮತ್ತು ಮಂಡಲ ಮಟ್ಟದಲ್ಲಿ ಕಾರ್ಯಕಾರಿಣಿ ಸಭೆಗಳನ್ನು ನಡೆಸಲಾಗುತ್ತಿದೆ’ ಎಂದು ಹೇಳಿದರು.
ಸಭೆಯಲ್ಲಿ ಪಕ್ಷದ ಜಿಲ್ಲಾ ಘಟಕ ಅಧ್ಯಕ್ಷ ಚಂದ್ರಶೇಖರಗೌಡ ಮಾಗನೂರ, ಮಾಜಿ ಶಾಸಕ ಡಾ.ವೀರಬಸವಂತರಡ್ಡಿ ಮುದ್ನಾಳ, ರಾಜ್ಯ ಬಿಜೆಪಿ ಕಾರ್ಯಕಾರಿಣಿ ಸದಸ್ಯ ಡಾ.ಶರ ಣಭೂಪಾಲರಡ್ಡಿ ನಾಯ್ಕಲ್, ವೆಂಕಟರಡ್ಡಿ ಮುದ್ನಾಳ, ಖಂಡಪ್ಪ ದಾಸನ್, ಸಾಯಿಬಣ್ಣ ಬೋರಬಂಡಾ, ದೇವಿಂದ್ರ ನಾಥ ನಾದ್, ಡಾ.ಚಂದ್ರ ಶೇಖರ ಸುಬೇದಾರ, ವೇಣುಮಾಧವ ನಾಯಕ, ಗೋಪಾಲ ದಾಸನಕೇರಿ, ಎಸ್.ಪಿ.ನಾಡೇಕಾರ್ ಇದ್ದರು. ಶರಣಗೌಡ ಬಾಡಿಯಾಳ ಸ್ವಾಗತಿಸಿದರು. ವೆಂಕಟರಡ್ಡಿ ಅಬ್ಬೆತುಮಕೂರು ಕಾರ್ಯಕ್ರಮ ನಿರೂಪಿಸಿದರು.
ವಂದೇ ಮಾತರಂ ಗೀತೆ ಅರ್ಧಕ್ಕೆ ಮೊಟಕು: ಕಾರ್ಯಕಾರಿಣಿಗೆ ಚಾಲನೆ ನೀಡುವ ಮುಂಚೆ ಪಕ್ಷದ ಮಹಿಳಾ ಕಾರ್ಯಕರ್ತೆಯರಿಂದ ವಂದೇ ಮಾತರಂ ಗೀತೆ ಹಾಡಿಸಲಾಯಿತು. ಆದರೆ, ಹಾಡು ಹಾಡಲು ಬಾರದೇ ಇದುದ್ದರಿಂದ ಮಹಿಳಾ ಕಾರ್ಯಕರ್ತೆಯರು ವಂದೇಮಾತರಂ ಗೀತೆಯನ್ನು ಅರ್ಧಕ್ಕೆ ಮೊಟಕುಗೊಳಿಸಿದರು. ದೇಶದ ಏಕತೆ ಸಾರುವ ಗೀತೆಯನ್ನು ಅರ್ಧಕ್ಕೆ ಮೊಟಕುಗೊಳಿಸಬಾರದಿತ್ತು ಎಂದು ಕಾರ್ಯಕಾರಿಣಿಯಲ್ಲಿ ನೆರೆದವರು ಮಾತನಾಡಿಕೊಂಡರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.