ಕಕ್ಕೇರಾ: ಸಮೀಪದ ಜುಮ್ಮಾರಕ್ಯಾಂಪಿನ ಹಣಮಂತ ಗುಡೇದ ಅವರ 2 ಎತ್ತುಗಳು 4 ಚಕ್ಕಡಿ ಬಂಡಿಗಳಲ್ಲಿದ್ದ 50 ಕ್ವಿಂಟಲ್ ಭಾರದ 45 ಸಜ್ಜೆ ಚೀಲಗಳನ್ನು ಐದು ಕಿ.ಮೀ ದೂರ ಎಳೆದು ಸಾಹಸ ಪ್ರದರ್ಶಿಸಿದವು.
ಜುಮ್ಮಾರಕ್ಯಾಂಪಿನಿಂದ ಕಕ್ಕೇರಾ ಪಟ್ಟಣದ ದೇವಿಂದ್ರಪ್ಪಗೌಡ ಹಳ್ಳಿ ಮನೆಯವರೆಗೆ ಬಿಳಿ ಬಣ್ಣದ ಎರಡು ಎತ್ತುಗಳು ಒಂದಕ್ಕೊಂದು ಹಗ್ಗದಿಂದ ಕಟ್ಟಲ್ಪಟ್ಟಿದ್ದ ಚಕ್ಕಡಿಗಳನ್ನು ಎಳೆದವು.
ವಾದ್ಯಮೇಳದೊಂದಿಗೆ ಪುರಸಭೆ ಆವರಣ, ಅಂಬೇಡ್ಕರ್ ವೃತ್ತ, ವಾಲ್ಮೀಕಿ ವೃತ್ತ, ಸಂಗಮೇಶ್ವರ ಮಠ ಹಾಗೂ ಕನಕದಾಸ ವೃತ್ತಗಳ ಮೂಲಕ 1 ತಾಸು ಅವಧಿಯಲ್ಲಿಯೇ ಪಟ್ಟಣ ಪ್ರವೇಶಿಸಿದವು. ದಾರಿಯುದ್ದಕ್ಕೂ ರೈತರು ಹಾಗೂ ಸಾರ್ವಜನಿಕರು ಎತ್ತುಗಳಿಗೆ ಹಾರಗಳನ್ನು ಹಾಕಿ, ತೆಂಗಿನಕಾಯಿ ಒಡೆದರು. ಎತ್ತುಗಳ ಮೇಲೆ ಚುರುಮುರಿ ಎಸೆದು ಎತ್ತುಗಳ ಪಾದ ಮುಟ್ಟಿ ನಮಸ್ಕರಿಸಿದರು.
ವೀರಶೈವ ಸಮಾಜದ ವಲಯಾಧ್ಯಕ್ಷ ಕೊಟ್ರಯ್ಯಸ್ವಾಮಿ ಸಾಹಸಿ ಎತ್ತುಗಳಿಗೆ ಹೂವಿನ ಹಾರ ಹಾಕಿ, ಪಟಾಕಿ ಸಿಡಿಸಿದರು. ಸಾಹಸಗೈದ ಎತ್ತುಗಳೊಂದಿಗೆ ಕೆಲವರು ಮೊಬೈಲ್ಗಳಲ್ಲಿ ಫೋಟೊಗಳನ್ನು ತೆಗೆದುಕೊಂಡು ಹರ್ಷವ್ಯಕ್ತಪಡಿಸಿದರು. ಎತ್ತುಗಳ ಮಾಲೀಕ ಹಣಮಂತ ಅವರಿಗೆ ಪುರಸಭೆ ಸದಸ್ಯ ಜೆಟ್ಟೆಪ್ಪ ಕುರಿ ಅವರು 5 ತೊಲಿ ಬೆಳ್ಳಿಕಡಗವನ್ನು ಬಹುಮಾನವಾಗಿ ನೀಡಿದರು.
ಪ್ರಮುಖರಾದ ರಾಜು ಹವಾಲ್ದಾರ್, ಪರಮಣ್ಣ ತೇರಿನ್, ದಶರಥ ಆರೇಶಂಕರ, ಗುಂಡಪ್ಪ ಸೊಲ್ಲಾಪುರ, ಭೀಮನಗೌಡ ಹಳ್ಳಿ ಇದ್ದರು. ದೇವಿಂದ್ರಪ್ಪಗೌಡ ಹಳ್ಳಿ, ಕೊಟ್ರಯ್ಯಸ್ವಾಮಿ, ಹಣಮಂತ್ರಾಯ ದೊರೆ, ಹಣಮಂತರಾಯ ಹಳ್ಳಿ, ಸೋಮಣ್ಣ ಜುಮ್ಮಾರ್, ಸೋಮು ಪೀರಗಾರ, ಶಿವು ಗುಡಿ, ತಿಪ್ಪಣ್ಣ ಜಂಪಾ, ವೆಂಕಟೇಶ ಗುಡಿ, ದ್ಯಾವಪ್ಪ ಕುರಿ, ರಂಗಪ್ಪ ಗುಡಿ, ಸರ್ಜಪ್ಪ ಗುಡಿ ಸೇರಿದಂತೆ ನೂರಾರು ರೈತರು ಪಾಲ್ಗೊಂಡಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.