ಹುಣಸಗಿ: ಕಳೆದ ಎರಡು ತಿಂಗಳ ಹಿಂದೆ ಕುಸಿದಿದ್ದ ಸ್ಥಳದ ಸಮೀಪದಲ್ಲಿಯೇ ನಾರಾಯಣಪುರ ಎಡದಂಡೆ ಮುಖ್ಯಕಾಲುವೆ ಮತ್ತೆ ಭಾನುವಾರ ಕುಸಿತಗೊಂಡಿದೆ. ಸಮೀಪದ ಅಗ್ನಿ ಗ್ರಾಮದ ಬಳಿ ನಾರಾಯಣಪುರ ಎಡದಂಡೆ ಮುಖ್ಯ ಕಾಲುವೆಯ 61.720ನೇ ಕಿ.ಮೀನಲ್ಲಿ ಅಂದಾಜು 35 ಮೀಟರ್ನಷ್ಟು ಕುಸಿತಗೊಂಡಿದ್ದು, ಕೃಷ್ಣಾ ಅಚ್ಚಕುಟ್ಟು ಪ್ರದೇಶದ ರೈತರ ಆತಂಕಕ್ಕೆ ಕಾರಣವಾಗಿದೆ.
ಕಾಲುವೆಗೆ 12 ದಿನಗಳ ಹಿಂದೆ ನೀರು ಸ್ಥಗಿತಗೊಳಿಸಿದ ಬಳಿಕ ಈ ಸ್ಥಳದಲ್ಲಿ ಆರ್ಸಿಸಿ ಲೈನಿಂಗ್ ಉಬ್ಬಿಕೊಂಡಿತ್ತು. ಈಗ ಇದೇ ಸ್ಥಳದಲ್ಲಿ ಕಾಲುವೆಯ ಆರ್ಸಿಸಿ ಲೈನಿಂಗ್ ಕುಸಿದಿದೆ.
ಸುಮಾರು 3 ಲಕ್ಷ ಎಕರೆ ಪ್ರದೇಶಕ್ಕೆ 10 ಸಾವಿರ ಕ್ಯೂಸೆಕ್ ನೀರು ಒದಗಿಸುವ ಕಾಲುವೆ ಇದಾಗಿದ್ದು, ಈ ಕಾಲುವೆಯ ಮುಖಾಂತರ ಯಾದಗಿರಿ, ಕಲಬುರ್ಗಿ ಮತ್ತು ವಿಜಯಪುರ ಜಿಲ್ಲೆಗಳಿಗೆ ನೀರಾವರಿ ಒದಗಿಸಲಾಗಿದೆ. ಅಚ್ಚುಕಟ್ಟು ಪ್ರದೇಶದಲ್ಲಿ ಬಹುತೇಕ ರೈತರು ಭತ್ತ ನಾಟಿ ಮಾಡಿದ್ದಾರೆ. ಕಾಲುವೆ ಕುಸಿತದ ಸುದ್ದಿ ರೈತರ ನಿದ್ದೆಗೆಡಿಸಿದೆ. ಕಳೆದ ಮೂರು ವರ್ಷಗಳ ಹಿಂದೆ 2014ರಲ್ಲಿ ಈ ನಾರಾಯಣಪುರ ಎಡದಂಡೆ ಮುಖ್ಯಕಾಲುವೆಯನ್ನು ನವೀಕರಣಗೊಳಿಸಲಾಗಿತ್ತು.
ದುರಸ್ತಿಗೆ ಸೂಚನೆ: ಶಾಸಕ
ಅಗ್ನಿ ಗ್ರಾಮದ ಬಳಿ ಎಡದಂಡೆ ಮುಖ್ಯ ಕಾಲುವೆ ಕುಸಿದಿದ್ದು, ಅಧಿಕಾರಿಗಳು ದುರಸ್ತಿಗೆ ಶೀಘ್ರ ಕಾರ್ಯ ಪ್ರವೃತ್ತರಾಗಿದ್ದಾರೆ. ಈ ಕುರಿತು ನಿಗಮದ ಅಧಿಕಾರಿಗಳೊಂದಿಗೆ ಮಾತನಾಡಿದ್ದೇನೆ. ರೈತರು ಆತಂಕಪಡುವ ಅಗತ್ಯವಿಲ್ಲ ಎಂದು ಸುರಪುರ ಶಾಸಕ ರಾಜಾ ವೆಂಕಟಪ್ಪನಾಯಕ ತಿಳಿಸಿದ್ದಾರೆ.
15 ಸಾವಿರಕ್ಕೂ ಹೆಚ್ಚು ಮರಳು ತುಂಬಿದ ಚೀಲಗಳನ್ನು ಈ ಸ್ಥಳದಲ್ಲಿ ಇಟ್ಟು ತುರ್ತು ದುರಸ್ತಿಗಾಗಿ ಕ್ರಮ ಕೈಗೊಳ್ಳಲು ತಿಳಿಸಿದ್ದೇನೆ. ನವೀಕರಣ ಮಾಡಿದ್ದು, ಕಾಲುವೆ ಕುಸಿತದ ಬಗ್ಗೆ ತಜ್ಞರ ತಂಡ ರಚಿಸಿ ತನಿಖೆ ನಡೆಸಲಾಗುವುದು ಎಂದು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.