ADVERTISEMENT

ತಿಂಥಣಿ ಜಾತ್ರಾ ಮಹೋತ್ಸವ ಸಂಭ್ರಮ

​ಪ್ರಜಾವಾಣಿ ವಾರ್ತೆ
Published 1 ಫೆಬ್ರುವರಿ 2018, 7:35 IST
Last Updated 1 ಫೆಬ್ರುವರಿ 2018, 7:35 IST

ಕಕ್ಕೇರಾ: ಸುಕ್ಷೇತ್ರ ದಕ್ಷಿಣ ಕಾಶಿ ತಿಂಥಣಿಯ ಜಗದ್ಗುರು ಮೌನೇಶ್ವರ ಜಾತ್ರೆಗೆ ರಾಜ್ಯ ಮತ್ತು ಹೊರರಾಜ್ಯದ ಮೂಲೆ ಮೂಲೆಗಳಿಂದ ಭಾರಿ ಸಂಖ್ಯೆಯಲ್ಲಿ ಭಕ್ತರು ಹರಿದು ಬರುತ್ತಿದ್ದಾರೆ. ಹಿಂದೂ, ಮುಸ್ಲಿಂ ಭಾವೈಕತೆಯ ಸಂಗಮ ಈ ಜಾತ್ರೆಯ ವಿಶೇಷ.

ಬುಧವಾರ ರಥೋತ್ಸವ ಮತ್ತು ಧೂಳಗಾಯಿ ಗುರುವಾರ ನಡೆಯಲಿದೆ. ಭಕ್ತಾಧಿಗಳಿಗೆ ಯಾವುದೇ ರೀತಿಯ ತೊಂದರೆ ಆಗದಿರಲಿಯೆಂದು ತಹಶೀಲ್ದಾರ್ ಸುರೇಶ ಅಂಕಲಿಗಿ ಮುಂಜಾಗ್ರತಾ ಕ್ರಮ ಕೈಗೊಂಡಿದ್ದಾರೆ.

ಸುದ್ದಿಗಾರದೊಂದಿಗೆ ಮಾತನಾಡಿದ ಸುರೇಶ ಅಂಕಲಿಗಿ ಅವರು, ಜಾತ್ರೆಗೆ ಸೂಕ್ತ ವಿದ್ಯುತ್ ಬೆಳಕಿನ ಸೌಲಭ್ಯ ಕೈಗೊಳ್ಳಲಾಗಿದೆ. ಮುಂಜಾಗ್ರತೆಗಾಗಿ ಎರಡು ವಿದ್ಯುತ್ ಪರಿವರ್ತಕ ಸೌಲಭ್ಯ ಪಡೆಯಲಾಗಿದೆ. ಕೆಪಿಟಿಸಿಎಲ್ ಸಿಬ್ಬಂದಿ ಮತ್ತು ಎಂಜಿನಿಯರ್‌ರನ್ನು ನಿಯೋಜಿಸಲಾಗಿದೆ. ಜಾತ್ರೆಗೆ
ಬರುವ ಭಕ್ತರಿಗಾಗಿ ಎರಡು ಲಕ್ಷ ಲೀಟರ್ ನೀರು ಸಂಗ್ರಹಗೊಳ್ಳುವ ನೀರಿನ ಟ್ಯಾಂಕ್ ವ್ಯವಸ್ಥೆ ಮಾಡಲಾಗಿದೆ ಎಂದು ಸುರೇಶ ಅಂಕಲಿಗಿ ಸುದ್ದಿಗಾರರಿಗೆ ತಿಳಿಸಿದರು.

ADVERTISEMENT

ಎಂಟು ನೀರಿನ ಟ್ಯಾಂಕರ್ ವಾಹನಗಳನ್ನು ಜಾತ್ರೆಯ ಆವರಣದ ಜನರು ಬಿಡಾರ ಹೂಡಿದ ಜಾಗದಲ್ಲಿ ನಿಲ್ಲಿಸಲಾಗಿದೆ. ಶುದ್ಧ ಕುಡಿಯುವ ನೀರಿನ ಆರ್‍ಓ ಪ್ಲಾಂಟ್ ತೆರೆಯಲಾಗಿದೆ. ಭಕ್ತರು ತಂಗಲು ಯಾತ್ರಿ ನಿವಾಸ ಕಲ್ಪಿಸಲಾಗಿದೆ. ದೇವಸ್ಥಾನ ಆವರಣದಿಂದ ನದಿಪಾತ್ರದವರೆಗೆ ಸಿಸಿ ರಸ್ತೆ ನಿರ್ಮಿಸಲಾಗಿದೆ. ನದಿ ದಂಡೆಯಲ್ಲಿ ಸ್ನಾನಗೃಹಗಳನ್ನು ಹಟ್ಟಿ ಕಂಪನಿಯವರು ನಿರ್ಮಿಸಿದ್ದಾರೆ. ಶೌಚಾಲಯಗಳನ್ನು ನಿರ್ಮಿಸಲಾಗಿದೆ ಎಂದು ಅವರು ತಿಳಿಸಿದರು.

ಸಮಾಜ ಸುಧಾರಕ, ಗುರು ಮೌನೇಶ್ವರ ಜಾತ್ರೆಗೆ ಹಿಂದೂ, ಮುಸ್ಲಿಂ ಸೇರಿದಂತೆ ವಿವಿಧ ಜಾತಿ, ಧರ್ಮದ ಭಕ್ತರು ಬರುವರು. ಕಾಯಿ ಕರ್ಪೂರ ಅರ್ಪಿಸಿ ಮೌನೇಶ್ವರ ಕೃಪೆಗೆ ಪಾತ್ರರಾಗುವರು. ಮೌನೇಶ್ವರ ದರ್ಶನಕ್ಕೆ ಕೊಪ್ಪಳ, ಬೀದರ್, ಆಂದ್ರಪ್ರದೇಶ, ಹೈದ್ರಾಬಾದ್ ಸೇರಿದಂತೆ ನಾನಾ ಭಾಗದಿಂದ ಭಕ್ತರು ಬಂದಿದ್ದಾರೆ.

‘ದೇವಾಲಯದ ಆವರಣದ 1 ಕಿ.ಮೀ.ವರೆಗೂ ನಾನಾ ಅಂಗಡಿ ಮುಂಗಟ್ಟುಗಳು ಹಾಕಿದ್ದರಿಂದ ಬರುವ ಭಕ್ತಾದಿಗಳಿಗೆ ಖರೀದಿ ಮಾಡಲು ಸೂಕ್ತ ಅವಕಾಶ ಇದೆ. ವಿಶೇಷವಾಗಿ ದೂರದಿಂದ ಅನ್ಯ ರಾಜ್ಯ ಹಾಗೂ ನಾನಾ ಜಿಲ್ಲೆಗಳಿಂದ ಬರುವ ಭಕ್ತರಿಗೆ ಹೋಟೆಲ್‌ ಮತ್ತು ಉಪಾಹಾರ ಮಂದಿರದ ವ್ಯವಸ್ಥೆ ಮಾಡಲಾಗಿದೆ’ ಎಂದು ಅವರು ತಿಳಿಸಿದರು.

‘ಜಾತ್ರೆಗೆ ಸೂಕ್ತ ರಕ್ಷಣೆ ಹಾಗೂ ಅಹಿತಕರ ಘಟನೆ ನಡೆಯದಂತೆ ನೋಡಿಕೊಳ್ಳಲು ಪೊಲೀಸ್ ಸಿಬ್ಬಂದಿ ನೇಮಿಸಲಾಗಿದೆ. ಜನರಿಗೆ ವಾಹನ ಸಂಚಾರ ಸಮಸ್ಯೆಯಾಗದಂತೆ ವಾಹನ ನಿಲುಗಡೆಗೆ ಜಹಗೀರದಾರ ಜಮೀನು ಮತ್ತು ಪ್ರೌಢಶಾಲೆ ಆವರಣದಲ್ಲಿ ಸ್ಥಳಾವಕಾಶ ಕಲ್ಪಿಸಲಾಗಿದೆ. ಜಾತ್ರೆಯಲ್ಲಿ ಹೆಚ್ಚಿನ ಜಾಗೃತಿಗಾಗಿ ತಾಲೂಕಿನ ವಿವಿಧ ಗ್ರಾಮಗಳಿಂದ ಕಂದಾಯ ನಿರೀಕ್ಷಕರು, ಗ್ರಾಮಲೆಕ್ಕಾಧಿಕಾರಿಗಳು, ಗ್ರಾಮಸಹಾಯಕರನ್ನು ನಿಯೋಜಿಸಲಾಗಿದೆ.

ಜಾತ್ರೆಗೆ ಡಿಪೋದಿಂದ ವಿಶೇಷ ಸಾರಿಗೆ ಬಸ್ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಯಾದಗಿರಿ ವಿಭಾಗೀಯ ಸಂಚಾರ ಅಧಿಕಾರಿ ಸಂತೋಷ ಗೋಗೇರಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.