ಬೆಂಗಳೂರು: ಬಹಿರಂಗ ಪ್ರಚಾರದ ಕೊನೆಯ ದಿನವಾದ ಮಂಗಳವಾರ ನಗರದ ಮೂರು ಲೋಕಸಭಾ ಕ್ಷೇತ್ರಗಳ ಕಾಂಗ್ರೆಸ್ ಅಭ್ಯರ್ಥಿಗಳು ಬಿರುಸಿನ ಪ್ರಚಾರ ನಡೆಸಿದರು.
ದಕ್ಷಿಣ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ನಂದನ್ ನಿಲೇಕಣಿ ಅವರು ಬೆಳಿಗ್ಗೆ ಎಚ್.ಎಸ್.ಆರ್. ಬಡಾವಣೆಯಲ್ಲಿ ಗಾರ್ಮೆಂಟ್ ಫ್ಯಾಕ್ಟರಿಗೆ ಭೇಟಿ ನೀಡಿ, ಅಲ್ಲಿಯ ಕಾರ್ಮಿಕರ ಸಮಸ್ಯೆಗಳ ಕುರಿತು ಚರ್ಚಿಸಿದರು. ನಂತರ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರ ಜೊತೆಗೂಡಿ ತಾವರೆಕೆರೆಯಲ್ಲಿ ರೋಡ್ ಷೋ ನಡೆಸಿದರು.
‘ಬೆಂಗಳೂರು ದಕ್ಷಿಣ ಕ್ಷೇತ್ರಕ್ಕೆ ಶುದ್ಧಹಸ್ತದ, ಸಾಮರ್ಥ್ಯವಿರುವ ಹಾಗೂ ಕೊಟ್ಟ ಮಾತನ್ನು ಈಡೇರಿಸುವಂತಹ ವ್ಯಕ್ತಿಯನ್ನು ಆಯ್ಕೆ ಮಾಡಲು ಇದು ಸಕಾಲ’ ಎಂದು ಹೇಳಿದರು.
‘ಇದು ನಮಗೊಂದು ಸದವಕಾಶ. ನಾವು ಬೆಂಗಳೂರಿನ ಹಿಂದಿನ ವೈಭವವನ್ನು ಮರಳಿ ತರಬೇಕಿದೆ. ನಮ್ಮ ನಗರಕ್ಕೆ ಹೆಚ್ಚು ಉದ್ಯೋಗಾವಕಾಶಗಳು, ಉತ್ತಮ ರಸ್ತೆಗಳ ಅಗತ್ಯ ಇದೆ. ಈ ನಿಟ್ಟಿನಲ್ಲಿ ತುರ್ತಾಗಿ ಕೆಲಸ ಮಾಡಬೇಕಿದೆ’ ಎಂದರು.
ಬಳಿಕ ಕೋರಮಂಗಲದ ವಿವಿಧ ಬಡಾವಣೆಗಳಲ್ಲಿ ರೋಡ್ ಷೋ ನಡೆಸಿದರು. ಸಂಜೆ ದೇವೇಗೌಡ ಪೆಟ್ರೋಲ್ ಬಂಕ್ ಹತ್ತಿರದ ಕಾರ್ಮೆಲ್ ಶಾಲೆಯ ಮೈದಾನದಲ್ಲಿ ಕೊನೆಯ ಬಹಿರಂಗ ಪ್ರಚಾರ ನಡೆಸಿದರು. ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಸಿ.ನಾರಾಯಣಸ್ವಾಮಿ ಅವರು ಹೆಬ್ಬಾಳ ಹಾಗೂ ಆಸುಪಾಸಿನ ಪ್ರದೇಶದಲ್ಲಿ ರೋಡ್ ಷೋ ನಡೆಸಿದರು. ಮಾಜಿ ಸಚಿವ ಎಚ್.ಎಂ.ರೇವಣ್ಣ ಜೊತೆಗಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.