ADVERTISEMENT

ಚನ್ನಪಟ್ಟಣದಿಂದ ಅನಿತಾ ಸ್ಪರ್ಧಿಸುವುದು ಅನಿವಾರ್ಯ: ಎಚ್‌.ಡಿ.ದೇವೇಗೌಡ

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2018, 9:14 IST
Last Updated 8 ಫೆಬ್ರುವರಿ 2018, 9:14 IST
ಎಚ್‌.ಡಿ.ದೇವೇಗೌಡ
ಎಚ್‌.ಡಿ.ದೇವೇಗೌಡ   

ಚಿಕ್ಕಮಗಳೂರು: ‘ಅನಿತಾ ಕುಮಾರಸ್ವಾಮಿ ಕಣಕ್ಕಿಳಿಯಲು ಇಚ್ಛಿಸಿರುವ ಚನ್ನಪಟ್ಟಣ ಕ್ಷೇತ್ರದಲ್ಲಿ ಪಕ್ಷದಿಂದ ಬೇರೆ ಯಾರೂ ಆಕಾಂಕ್ಷಿ ಇಲ್ಲ. ಅಲ್ಲಿ ಯಾರೊಬ್ಬರೂ ಟಿಕೆಟ್‌ಗೆ ಅರ್ಜಿ ಹಾಕಿಲ್ಲ. ಯಾರಾದರೂ ಒಬ್ಬರು ಮುಂದೆ ಬನ್ನಿ ಎಂದು ಬಹಿರಂಗವಾಗಿ ಹೇಳಿದ್ದೇನೆ. ಆದರೂ, ಯಾರೂ ಮನಸ್ಸು ಮಾಡಿಲ್ಲ. ಆ ಕ್ಷೇತ್ರದಲ್ಲಿ ಅನಿತಾ ಅವರನ್ನು ಕಣಕ್ಕಿಳಿಸುವುದು ಅನಿವಾರ್ಯವಾಗಿದೆ’ ಎಂದು ಪ್ರತಿಕ್ರಿಯಿಸಿದರು.

ಬಿಜೆಪಿ ಕಟು ಹಿಂದುತ್ವ ಪ್ರತಿಪಾದಿಸುತ್ತಿದೆ, ಕಾಂಗ್ರೆಸ್‌ ಈಗ ಮೃದು ಹಿಂದುತ್ವ ಪ್ರತಿಪಾದನೆ ಶುರುಮಾಡಿದೆ. ಜೆಡಿಎಸ್‌ ಮಾರ್ಗವೇ ಬೇರೆ, ಕಾಂಗ್ರೆಸ್‌ ಮತ್ತು ಬಿಜೆಪಿ ವಿರುದ್ಧ ಹೋರಾಟ ಮಾಡುತ್ತದೆ ಎಂದು ಜೆಡಿಎಸ್‌ ರಾಷ್ಟ್ರೀಯ ಅಧ್ಯಕ್ಷ ಎಚ್‌.ಡಿ.ದೇವೇಗೌಡ ಹೇಳಿದರು.

‘ಕಟು, ಮೃದು ಇವೆರಡೂ ಜೆಡಿಎಸ್‌ನಲ್ಲಿ ಇಲ್ಲ. ನಾವು ತಪ್ಪುಗಳ ವಿರುದ್ಧ ಗಂಭೀರವಾಗಿ ಹೋರಾಡುತ್ತೇವೆ. ರಾಜ್ಯದಲ್ಲಿ ನೆಮ್ಮದಿ ಕಾಪಾಡುವುದು ಜೆಡಿಎಸ್‌ ಉದ್ದೇಶ’ ಎಂದು ಅವರು ಶುಕ್ರವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ADVERTISEMENT

‘ಕಾಂಗ್ರೆಸ್‌ನವರು ತಮ್ಮ ನೀತಿಯನ್ನು ಸ್ವಲ್ಪ ಸಡಿಲ ಮಾಡಿದ್ದಾರೆ. ಅಲ್ಪಸಂಖ್ಯಾತರನ್ನಷ್ಟೇ ತುಂಬಾ ಓಲೈಕೆ ಮಾಡಬಾರದು, ಎಲ್ಲ ಸಮುದಾಯಗಳನ್ನು ಓಲೈಸಿಕೊಂಡು ಹೋಗಬೇಕು ಎಂದು ರಾಹುಲ್‌ ಗಾಂಧಿ ಪಕ್ಷದವರಿಗೆ ಸೂಚನೆ ನೀಡಿದ್ದಾರೆ. ಗುಜರಾತ್‌ ಚುನಾವಣೆ ಸಂದರ್ಭದಲ್ಲಿ ಅವರು 32 ಪುಣ್ಯಕ್ಷೇತ್ರಗಳ ದರ್ಶನ ಮಾಡಿದ್ದಾರೆ. ಅಮೇಥಿ ಕ್ಷೇತ್ರಕ್ಕೆ ಹೋಗಿದ್ದಾಗ ಆಂಜನೇಯ ದೇಗುಲದಲ್ಲಿ ಪೂಜೆ ನೆರವೇರಿಸಿದ್ದಾರೆ’ ಎಂದರು.

‘ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಸೇರಿದಂತೆ ಕರಾವಳಿ ಭಾಗದಲ್ಲಿ ವ್ಯವಸ್ಥೆ ಹದಗೆಟ್ಟಿದೆ. ಮೂರ್ನಾಲ್ಕು ತಿಂಗಳಲ್ಲಿ ಹಲವಾರು ಅಮಾಯಕರು ಹತ್ಯೆಯಾಗಿದ್ದಾರೆ. ಇದರ ಹೊಣೆಯನ್ನು ಬಿಜೆಪಿ ಮತ್ತು ಕಾಂಗ್ರೆಸ್‌ ಹೊರಬೇಕು. ಈ ಎರಡೂ ರಾಷ್ಟ್ರೀಯ ಪಕ್ಷಗಳ ನಡವಳಿಕೆಯಿಂದ ಅಮಾಯಕರಿಗೆ ತೊಂದರೆಯಾಗುತ್ತಿದೆ. ಕಾಂಗ್ರೆಸ್‌ ಎಂಬುದು ‘ಶಾಪ’, ಬಿಜೆಪಿ ಎಂಬುದು ‘ಕ್ಯಾನ್ಸರ್‌’ ಎಂದು ಜೆ.ಎಚ್‌.ಪಟೇಲ್‌ ಹೇಳಿದ್ದರು’ ಎಂದರು.

‘ಕರಾವಳಿಯಲ್ಲಿನ ಅಶಾಂತಿಗೆ ಸಂಬಂಧಿಸಿದಂತೆ ತಪ್ಪಿತಸ್ಥರು ಯಾರೇ ಆಗಿದ್ದರೂ ಬಂಧಿಸಲು ಸೂಚನೆ ನೀಡಿರುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಅಲ್ಲದೇ, 2–3 ಸಂಘಟನೆಗಳನ್ನು ನಿಷೇಧಿಸಲು ಶಿಫಾರಸು ಮಾಡುತ್ತೇವೆ ಎಂದೂ ಹೇಳಿದ್ದಾರೆ. ಸಂಘಟನೆಗಳ ನಿಷೇಧಕ್ಕೆ ಶಿಫಾರಸು ಮಾಡಲು ಬಲವಾದ ಪುರಾವೆಗಳು ಬೇಕು. ಬಿಜೆಪಿಯ ಶಕ್ತಿ ಕೇಂದ್ರ ಆರ್‌ಎಸ್‌ಎಸ್‌ ಸಂಘಟನೆ. ಇದರ ಜತೆಗೆ 10–12 ಸಂಘಟನೆಗಳು ಇವೆ’ ಎಂದರು.

‘ಹಳಬರನ್ನು ಕಡೆಗಣಿಸುವುದಿಲ್ಲ. ಅಭ್ಯರ್ಥಿ ಯಾರು ಎಂಬುದನ್ನು ಸಮಿತಿ ನಿರ್ಧರಿಸುತ್ತದೆ. ಜಾತಿ ಆಧಾರದಲ್ಲಿ ಅಭ್ಯರ್ಥಿಗಳನ್ನು ಆಯ್ಕೆ ಮಾಡುವುದಿಲ್ಲ. ಯಾವ ಕ್ಷೇತ್ರಗಳಲ್ಲಿ ಗೊಂದಲಗಳಿವೆಯೋ ಅವುಗಳನ್ನು ಈ ತಿಂಗಳ ಅಂತ್ಯದ ಹೊತ್ತಿಗೆ ಪರಿಹರಿಸುತ್ತೇವೆ’ ಎಂದರು.

‘ಜೆಡಿಎಸ್‌ನ ಇಬ್ಬರು ಶಾಸಕರು ಪಕ್ಷಕ್ಕೆ ರಾಜೀನಾಮೆ ನೀಡದೆ, ಬಿಜೆಪಿಗೆ ಸೇರ್ಪಡೆಯಾಗಿರುವುದಕ್ಕೆ ಸಂಬಂಧಿಸಿದಂತೆ ಈಗಾಗಲೇ ಸ್ಪೀಕರ್‌ಗೆ ದೂರು ನೀಡಲಾಗಿದೆ. ಸ್ಪೀಕರ್‌ ಅವರು ಕ್ರಮ ಕೈಗೊಳ್ಳಲಿದ್ದಾರೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.