ADVERTISEMENT

ಆಲ್ಬಂ ಸಂಸ್ಕೃತಿಗೆ ಇನ್ನೂ ಒಂದು

​ಪ್ರಜಾವಾಣಿ ವಾರ್ತೆ
Published 7 ಅಕ್ಟೋಬರ್ 2015, 19:54 IST
Last Updated 7 ಅಕ್ಟೋಬರ್ 2015, 19:54 IST

ಕನ್ನಡದಲ್ಲಿ ವಿಡಿಯೊ ಆಲ್ಬಂ ಸಂಸ್ಕೃತಿಗೆ ಹೊಸ ಸೇರ್ಪಡೆ ‘ಹಾಳಾಗೋದೆ’. ಗ್ರಾಮೀಣ ಭಾಗದ ಭಾಷೆಯನ್ನು ಬಳಸಿಕೊಂಡಿರುವ ಈ ಆಲ್ಬಂ ಅಂತರ್ಜಾಲದಲ್ಲಿ ಪ್ರಶಂಸೆಯ ಸುರಿಮಳೆ ಗಿಟ್ಟಿಸಿದೆ.

ಬಿಡುಗಡೆಯಾದ ಹದಿನೈದೇ ದಿನಗಳಲ್ಲಿ ಜಾಲತಾಣಗಳಲ್ಲಿ ಒಂದೂಕಾಲು ಲಕ್ಷಕ್ಕೂ ಹೆಚ್ಚು ಜನ ಹಾಡುಗಳನ್ನು ನೋಡಿ–ಕೇಳಿ ಇಷ್ಟಪಟ್ಟಿದ್ದಾರೆಂಬ ಸಂತಸವನ್ನು ತಂಡ ಪತ್ರಕರ್ತರೊಂದಿಗೆ ಹಂಚಿಕೊಂಡಿತು.

ಮುಗ್ಧ ಹುಡುಗನೊಬ್ಬ ದುಷ್ಟರ ಸಹವಾಸ ಮಾಡಿದಾಗ ಪರಿಣಾಮ ಏನಾಗುತ್ತದೆ ಎನ್ನುವುದನ್ನು ಹಾಡುಗಳಲ್ಲಿ ಹೇಳಿದ್ದಾರೆ ಚಂದನ್ ಶೆಟ್ಟಿ. ಅದು ನೈಜ ಘಟನೆಯೊಂದರಿಂದ ಪ್ರೇರಿತವಾಗಿದೆ. ಈಗಷ್ಟೇ ಒಂದಷ್ಟು ಸಿನಿಮಾಗಳಿಗೆ ಹಾಡಿ, ಗೀತರಚನೆ ಮಾಡಿರುವ ಚಂದನ್ ತಮ್ಮ ಪ್ರತಿಭೆ, ಸಾಮರ್ಥ್ಯ ಪ್ರದರ್ಶನಕ್ಕೆಂದೇ ‘ಹಾಳಾಗೋದೆ’ ಆಲ್ಬಂ ಹೊರತಂದಿದ್ದಾರೆ.

ಅರ್ಜುನ್ ಜನ್ಯ ಶಿಷ್ಯನಾದ ಚಂದನ್ ಅವರೇ ಆಲ್ಬಂನ ಎಲ್ಲ ಹಾಡುಗಳಿಗೆ ಸಾಹಿತ್ಯ ರಚಿಸಿ, ಸಂಗೀತ ಮತ್ತು ನೃತ್ಯ ಸಂಯೋಜಿಸಿ ಹಾಡಿದ್ದಾರೆ. ಒಂದು ರೀತಿಯಲ್ಲಿ ಆಲ್‌ರೌಂಡರ್ ಆಟಗಾರ ಅವರು. ಇವರ ಪ್ರಯತ್ನಕ್ಕೆ ಬೆಂಬಲವಾಗಿ ಬಂಡವಾಳ ಹೂಡಿದವರು ದಿನೇಶ್, ಆರ್.ಎಸ್.ಎನ್. ಗೌಡ ಮತ್ತು ವಿನೋದ್ ಅಂಬಿಗರ್. ಈ ಆಲ್ಬಂಗೆ ಮೂರೂವರೆ ಲಕ್ಷ ರೂಪಾಯಿ ಖರ್ಚು ಮಾಡಿರುವ ಅವರು ಮುಂದೆಯೂ ಇಂಥ ಪ್ರಯತ್ನಗಳನ್ನು ಪ್ರೋತ್ಸಾಹಿಸುವ ಉತ್ಸಾಹದಲ್ಲಿದ್ದಾರೆ.

‘ನನ್ನ ಪ್ರಯತ್ನಕ್ಕೆ ಜನ ಮೆಚ್ಚುಗೆಯ ಜೊತೆಗೆ ಪೂರ್ಣಚಂದ್ರ ತೇಜಸ್ವಿ, ಐಂದ್ರಿತಾ ರೇ, ರಘು ದೀಕ್ಷಿತ್, ನೀತು, ರಕ್ಷಿತ್ ಶೆಟ್ಟಿ ಮುಂತಾದವರಿಂದ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿದೆ’ ಎಂದು ಚಂದನ್ ತಮ್ಮ ಸಾರ್ಥಕತೆಯನ್ನು ಹೇಳಿಕೊಂಡರು. ಅವರು ಈಗಾಗಲೇ ‘ಸಂಜೀವ’ ಮತ್ತು ‘ಸೀಜರ್’ ಚಿತ್ರಗಳಿಗೆ ಸಂಗೀತ ನಿರ್ದೇಶನ ಮಾಡುವ ಅವಕಾಶವನ್ನೂ ಗಿಟ್ಟಿಸಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT