ಮುಂಬೈ: ವಿಶ್ವದಾದ್ಯಂತ ಭಾರಿ ಜನಮನ್ನಣೆ ಗಳಿಸಿರುವ ‘ಬಾಹುಬಲಿ’ ಚಿತ್ರದ ನಟನೆಯಿಂದ ಬಾಲಿವುಡ್ ನಟಿ ಶ್ರೀದೇವಿ ಹಿಂದೆ ಸರಿದಿದ್ದರು. ಈ ಬಗ್ಗೆ ಕಾರಣ ಕೇಳಿದ ಪತ್ರಕರ್ತರಿಗೆ ನಟಿ ಶ್ರೀದೇವಿ, ಬಾಹುಬಲಿ ಚಿತ್ರ ಮುಗಿದ ವಿಚಾರ. ಅದರ ಮಾತು ಈಗ ಏತಕ್ಕೆ? ಎಂದು ಪ್ರಶ್ನಿಸಿದ್ದಾರೆ.
ಇತ್ತೀಚೆಗೆ ನಡೆದ ತಮ್ಮ ಮುಂದಿನ ಚಿತ್ರ ‘ಮಾಮ್’ನ ಪ್ರಚಾರ ಕಾರ್ಯಕ್ರಮದ ವೇಳೆ ಮಾತನಾಡಿದ ಅವರು, ‘ಬಾಹುಬಲಿ ಸಿನಿಮಾ ತೆರೆ ಕಂಡಿದೆ. ಯಶಸ್ಸನ್ನೂ ಗಳಿಸಿದೆ. ನಾನು ನಟಿಸಬೇಕಿದ್ದ ಶಿವಗಾಮಿ ಪಾತ್ರದಲ್ಲಿ ಆ ಚಿತ್ರದ ಎರಡೂ ಅವತರಣಿಕೆಗಳಲ್ಲಿ ಮತ್ತೊಬ್ಬರು ನಟಿಸಿದ್ದೂ ಆಗಿದೆ. ಈಗ ಅದರ ಬಗ್ಗೆ ಯಾಕೆ ಮಾತು? ಎಂದು ಶಾಂತವಾಗಿಯೇ ಪ್ರಶ್ನಿಸಿ ಪತ್ರಕರ್ತದ ಬಾಯಿ ಮುಚ್ಚಿಸಿದ್ದಾರೆ.
ತಮಿಳಿನಲ್ಲಿ ವಿಜಯ್ ನಾಯಕನಾಗಿ ನಟಿಸಿದ್ದ ‘ಪುಲಿ’ ಚಿತ್ರದಲ್ಲಿ ನಟಿಸುವ ಸಲುವಾಗಿ ‘ಬಾಹುಬಲಿ’ ಚಿತ್ರದ ನಟನೆಯಿಂದ ಶ್ರೀದೇವಿ ಹಿಂದೆ ಸರಿದಿದ್ದರು. ಇದಾದ ನಂತರ, ‘‘ಶ್ರೀದೇವಿ ಬಾಹುಬಲಿಯಲ್ಲಿ ನಟಿಸಲು ಹೆಚ್ಚಿನ ಮೊತ್ತದ ಬೇಡಿಕೆ ಇಟ್ಟಿದ್ದಾರೆ ಹಾಗಾಗಿ ನಿರ್ದೇಶಕ ರಾಜಮೌಳಿ ತಮ್ಮ ಚಿತ್ರಕ್ಕೆ ರಮ್ಯಕೃಷ್ಣ ಅವರನ್ನು ಕರೆತಂದಿದ್ದಾರೆ’’ ಎನ್ನುವ ಗಾಳಿಸುದ್ದಿ ಹರಿದಾಡಿದ್ದವು.
ತಮಿಳು ಚಿತ್ರ ‘ಪುಲಿ’ಯಲ್ಲಿ ಕನ್ನಡದ ನಟ ಸುದೀಪ್ ಸಹ ನಟಿಸಿ ಗಮನ ಸೆಳೆದಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.