ADVERTISEMENT

‘ಗರ’ ಚಿತ್ರದ ಸುತ್ತ...

​ಪ್ರಜಾವಾಣಿ ವಾರ್ತೆ
Published 27 ಜುಲೈ 2017, 19:30 IST
Last Updated 27 ಜುಲೈ 2017, 19:30 IST
‘ಗರ’ ಚಿತ್ರದ ಸುತ್ತ...
‘ಗರ’ ಚಿತ್ರದ ಸುತ್ತ...   

ಅದು ಸಹಕಾರ ನಗರದ ಗಣೇಶ ದೇವಸ್ಥಾನ. ಅಲ್ಲಿನ ದೃಶ್ಯ ನೋಡಿದ ತಕ್ಷಣ ಮದುವೆ ಸಂಭ್ರಮದ ಚಿತ್ರಣ ಮಾಧ್ಯಮದವರ ಮನದಲ್ಲಿ ಅಚ್ಚಾಯಿತು. ಹೂಗಳನ್ನು ತುಂಬಿದ ಬುಟ್ಟಿಯಲ್ಲಿ ವಧುವನ್ನು ಹೊತ್ತು ತರುವ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗುತ್ತಿತ್ತು. ಆವಂತಿಕಾ ಮೋಹನ್ ಮತ್ತು ಆರ್ಯನ್ ವಧು-ವರನ ಗೆಟಪ್‌ನಲ್ಲಿ ಕಂಗೊಳಿಸುತ್ತಿದ್ದರು. ಕೊಂಚ ಬಿಡುವು ಮಾಡಿಕೊಂಡ ‘ಗರ’ ಚಿತ್ರತಂಡವು ಪತ್ರಕರ್ತರೊಂದಿಗೆ ಮಾತಿಗಿಳಿಯಿತು.

‘ಈ ಚಿತ್ರದಲ್ಲಿ ಬಾಲಿವುಡ್ ನಟ ಜಾನಿ ಲಿವರ್ ಮತ್ತು ಸಾಧು ಕೋಕಿಲ ಸಹೋದರರಾಗಿ ಕಾಣಿಸಿಕೊಳ್ಳಲಿದ್ದಾರೆ. ಈ ದೃಶ್ಯ ಸೇರಿದಂತೆ ಸ್ಟಾರ್ ನಟರನ್ನು ಬಳಸಿಕೊಂಡು ಒಂದು ಹಾಡು ಶೂಟ್ ಮಾಡುವ ಕೆಲಸ ಬಾಕಿ ಉಳಿದಿದೆ. ಅಕ್ಟೋಬರ್‌ನಲ್ಲಿ ಚಿತ್ರವನ್ನು ತೆರೆಗೆ ತರಲು ಸಿದ್ಧತೆ ನಡೆಯುತ್ತಿದೆ’ ಎಂದರು ನಿರ್ದೇಶಕ ಮುರಳಿಕೃಷ್ಣ.

ಟಿ.ವಿ ನಿರೂಪಕ ರೆಹಮಾನ್, ‘ಚಿತ್ರದಲ್ಲಿ ನನ್ನ ಪಾತ್ರ ನೋಡಿದರೆ ಎಲ್ಲರೂ ಇಷ್ಟಪಡುವುದಿಲ್ಲ. ಮದುಮಗನ ಗೆಳೆಯನಾಗಿ ಕಾಣಿಸಿಕೊಳ್ಳುತ್ತಿದ್ದೇನೆ’ ಎಂದಷ್ಟೇ ಹೇಳಿದರು.

ADVERTISEMENT

‘ನಿರ್ದೇಶಕರ ಅಣ್ಣ ಶಾಂತರಾಂ ಅವರ ಸಾಕಷ್ಟು ಚಿತ್ರಗಳಲ್ಲಿ ಅಭಿನಯಿಸಿದ್ದೇನೆ. ಈಗ ತಮ್ಮನ ಚಿತ್ರದಲ್ಲಿ ನಟಿಸುತ್ತಿರುವುದು ಖುಷಿ ನೀಡಿದೆ’ ಎಂದ ರೂಪಾದೇವಿ, ಇಬ್ಬರನ್ನು ರಾಮ-ಲಕ್ಷಣರಿಗೆ ಹೋಲಿಸಿದರು.

ನಟ ರಾಮಕೃಷ್ಣ ನಾಯಕನ ತಂದೆಯ ಪಾತ್ರ ನಿಭಾಯಿಸುತ್ತಿದ್ದು, ನಿರ್ದೇಶಕರ ಕಾರ್ಯತತ್ಪರತೆ ಬಗ್ಗೆ ಶ್ಲಾಘಿಸಿದರು.

ನಟಿ ನೇಹಾ ಪಾಟೀಲ್ ತನ್ನ ಪಾತ್ರದ ಗುಟ್ಟುರಟ್ಟು ಮಾಡಲಿಲ್ಲ. ಪದ್ಮಜಾ ರಾವ್, ಮಿಮಿಕ್ರಿ ದಯಾನಂದ್, ರಮೇಶ್‌ ಭಟ್, ಶ್ರೀಕಾಂತ್‌ ಹುಬ್ಳಿಕರ್ ತಾರಾಬಳಗದಲ್ಲಿದ್ದಾರೆ.

ಆರ್.ಕೆ. ನಾರಾಯಣ್ ಅವರು ಕಿರುಕತೆ ಆಧರಿಸಿ ‘ಗರ’ ಸಿನಿಮಾ ಮಾಡಲಾಗುತ್ತಿದೆ. ಕೊಪ್ಪ, ಬೆಂಗಳೂರಿನಲ್ಲಿ ಚಿತ್ರದ ಬಹುಪಾಲು ಚಿತ್ರೀಕರಣ ಪೂರ್ಣಗೊಂಡಿದೆ. ಸಾಗರ ಗುರುರಾಜ್ ಈ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.