ADVERTISEMENT

ಡವ್ ಡವ್ ಡವ್ ದುನಿಯಾ...

​ಪ್ರಜಾವಾಣಿ ವಾರ್ತೆ
Published 23 ಅಕ್ಟೋಬರ್ 2014, 19:30 IST
Last Updated 23 ಅಕ್ಟೋಬರ್ 2014, 19:30 IST

‘ಕನ್ನಡಿಗರು ವಿಶಾಲ ಹೃದಯಿಗಳು. ನಮ್ಮ ಜನರು ಕನ್ನಡ ಚಿತ್ರಗಳನ್ನು ನೋಡುವುದಿಲ್ಲ. ಕನ್ನಡ ಭಾಷೆಯ ಚಿತ್ರಗಳಿಗಿಂತ ಪರಭಾಷೆಯ ಚಿತ್ರಗಳನ್ನೇ ಹೆಚ್ಚು ನೋಡುತ್ತಾರೆ. ನಮ್ಮ ನೆಲದಲ್ಲಿಯೇ ಕನ್ನಡ ಚಿತ್ರಗಳು ಪರಭಾಷಾ ಚಿತ್ರಗಳಿಂದ ಪೈಪೋಟಿಯನ್ನು ಎದುರಿಸುವಂ ತಾಗಿದೆ’– ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮಾತುಗಳಲ್ಲಿ ವಿಷಾದವಿತ್ತು.

ಸಂದರ್ಭ: ‘ಡವ್’ ಚಿತ್ರದ ಆಡಿಯೊ ಬಿಡುಗಡೆ.
‘ಡವ್’ ಚಿತ್ರದ ಆಡಿಯೊ ಬಿಡುಗಡೆಯಲ್ಲಿ ಲಕಲಕನೆ ಮಿಂಚಿದ್ದು ಬಿಳಿ ಬಟ್ಟೆಯ ರಾಜಕಾರಣಿಗಳು. ಗೃಹ ಸಚಿವ ಜಾರ್ಜ್‌, ವಾರ್ತಾ ಸಚಿವ ರೋಷನ್ ಬೇಗ್‌ ಸಹ ಸಿದ್ದರಾಮಯ್ಯ ಅವರೊಂದಿಗೆ ಕಾರ್ಯಕ್ರಮಕ್ಕೆ ಬಂದಿದ್ದರು. ಹಿರಿಯ ಲೇಖಕ ಪ್ರೊ. ಬರಗೂರು ರಾಮಚಂದ್ರಪ್ಪ, ರಾಘವೇಂದ್ರ ರಾಜಕುಮಾರ್, ನಿರ್ಮಾಪಕ ಬಸಂತಕುಮಾರ್ ಪಾಟೀಲ್, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಎಚ್‌.ಡಿ. ಗಂಗರಾಜು ಸೇರಿದಂತೆ ಹಲವು ಅತಿಥಿಗಳು ‘ಡವ್‌’ ಚಿತ್ರಕ್ಕೆ ಶುಭಕೋರಿದರು.

ಕನ್ನಡ ಸಿನಿಮಾಗಳ ಸ್ಥಿತಿಗತಿಯ ಬಗ್ಗೆ ಚುಟುಕಾಗಿ ಮಾತನಾಡಿದ ಮುಖ್ಯಮಂತ್ರಿಗಳು, ‘ಡವ್ ಚಿತ್ರದ ಬಗ್ಗೆ ನನಗೆ ಹೆಚ್ಚು ಗೊತ್ತಿಲ್ಲ’ ಎಂದು ಮಾತಿಗೆ ವಿರಾಮ ಹೇಳಿದರು. ಚಿತ್ರತಂಡ ನೀಡಿದ ಸಾಂಸ್ಕೃತಿಕ ಕಾರ್ಯಕ್ರಮ ರಸವತ್ತಾಗಿತ್ತು. ನಿರ್ಮಾಪಕ ಸಾರಾ ಗೋವಿಂದು ಅವರ ಪುತ್ರ ಅನೂಪ್ ಸಾರಾ ಗೋವಿಂದು ಚಿತ್ರದ ನಾಯಕ.

‘ಡವ್‌’ ಎರಡು ವರುಷಗಳಿಂದ ಕುಂಟುತ್ತ ತೆವಳುತ್ತ ಸಾಗುತ್ತಿರುವುದಕ್ಕೆ ನಾನೇ ಕಾರಣ ಎಂದರು ನಿರ್ಮಾಪಕ ಬಿ.ಕೆ. ಶ್ರೀನಿವಾಸ್. ಡಿಸೆಂಬರ್‌ ವೇಳೆಗೆ ಸಿನಿಮಾವನ್ನು ತೆರೆ ಕಾಣಿಸುವ ಸೂಚನೆಯನ್ನು ನೀಡಿದರು. ಅನೂಪ್‌ಗೆ ತಾವು ಮತ್ತೊಂದು ಸಿನಿಮಾ ಮಾಡುವ ಸುಳಿವನ್ನೂ ಅವರು ನೀಡಿದರು. ‘ಮೊದಲ ಸಿನಿಮಾದಲ್ಲಿ ನಿರ್ಮಾಪಕ ಶ್ರೀನಿವಾಸ್, ನಿರ್ದೇಶಕ ಸಂತು ನನ್ನ ತಪ್ಪುಗಳನ್ನು ತಿದ್ದಿದರು. ಡ್ಯೂಪ್ ಇಲ್ಲದೆ ನಾನು ನಟಿಸಿದ್ದೇನೆ’ ಎಂದು ಉತ್ಸಾಹದಿಂದ ನುಡಿದರು.

ಪೂರ್ಣ ಪ್ರಮಾಣದಲ್ಲಿ ನಾಯಕಿಯ ಅವಕಾಶ ಒದಗಿಬಂದಿದ್ದಕ್ಕೆ ನಾಯಕಿ ಅದಿತಿ ರಾವ್ ಅವರಿಗೂ ಅಪಾರ ಖುಷಿ! ಅರ್ಜುನ್ ಜನ್ಯ ಸಂಗೀತ ಸಂಯೋಜಿಸಿದ್ದು ಪುನೀತ್ ರಾಜಕುಮಾರ್ ಒಂದು ಹಾಡಿಗೆ ದನಿಯಾಗಿದ್ದಾರೆ. ‘ಡವ್‌’ ಎನ್ನುವ ಪದದ ಬಗ್ಗೆಯೇ ಮಾತನಾಡಲು ಹಿಂಜರಿದರು ‘ಲಹರಿ’ ವೇಲು. ‘ನಾನು ಯಾರಿಗೂ ಡವ್ ಹೊಡೆದಿಲ್ಲ’ ಎನ್ನುವ ಸಮಜಾಯಿಷಿ ಅವರಿಂದ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.