ADVERTISEMENT

ತಿಮ್ಮನ ಹೊಸ ‘ಪರಸಂಗ’

​ಪ್ರಜಾವಾಣಿ ವಾರ್ತೆ
Published 27 ಮಾರ್ಚ್ 2018, 19:30 IST
Last Updated 27 ಮಾರ್ಚ್ 2018, 19:30 IST

‘ಮೊದಲನೇ ಗೆರೆಯನ್ನು ಸುಲಭವಾಗಿ ಎಳೆದುಬಿಡಬಹುದು. ಆದರೆ ಅದೇ ಗೆರೆಯ ಮೇಲೆ ಇನ್ನೊಂದು ಗೆರೆಯನ್ನು ಎದ್ದುಕಾಣುವಂತೆ ಎಳೆಯುವುದು ತೀರಾ ಕಷ್ಟ’ ನಿರ್ದೇಶಕ ಎ.ಪಿ. ಅರ್ಜುನ್ ಅವರು ಕೆ.ಎಂ.ರಘು ನಿರ್ದೇಶನದ ‘ಪರಸಂಗ’ಚಿತ್ರದ ಪ್ರಯತ್ನವನ್ನು ವ್ಯಾಖ್ಯಾನಿಸಿದ್ದು ಹೀಗೆ.

40 ವರ್ಷಗಳ ಹಿಂದೆ ಆಲನಹಳ್ಳಿ ಕೃಷ್ಣ ಅವರ ಕಾದಂಬರಿ ಆಧರಿತ ಚಿತ್ರ ‘ಪರಸಂಗದ ಗೆಂಡೆತಿಮ್ಮ’ ಬಿಡುಗಡೆಯಾಗಿತ್ತು. ಇಂದಿಗೂ ಆ ಚಿತ್ರದ ನೆನಪು, ಹಾಡುಗಳು ಜನರ ಮನಸ್ಸಿನಲ್ಲಿ ಉಳಿದಿವೆ. ಅದೇ ಗೆಂಡೆತಿಮ್ಮನ ನೆನಪುಗಳ ಸೊಗಡನ್ನು ಇಟ್ಟುಕೊಂಡು ಇನ್ನೊಂದು ‘ಪರಸಂಗ’ ಚಿತ್ರವನ್ನು ಮಾಡಿ ಮುಗಿಸಿದ್ದಾರೆ ರಘು. ಈ ಚಿತ್ರಕ್ಕೆ ‘ತಿಮ್ಮನ ಕಥೆ’ ಎಂಬ ಅಡಿಶೀರ್ಷಿಕೆ ಇದೆ.

ಮುಂದಿನ ತಿಂಗಳು ಬಿಡುಗಡೆ ಮಾಡಲು ಸಿದ್ಧವಾಗಿರುವ ತಂಡ, ಇತ್ತೀಚೆಗೆ ಹಾಡುಗಳ ಬಿಡುಗಡೆ ಕಾರ್ಯಕ್ರಮ ಹಮ್ಮಿಕೊಂಡಿತ್ತು. ಎ.ಪಿ. ಅರ್ಜುನ್, ಚೇತನ್ ಕುಮಾರ್ ಮತ್ತು ಸಂತೋಷ್ ಆನಂದ್ ರಾಮ್ ಸೇರಿ ಹಾಡುಗಳನ್ನು ಬಿಡುಗಡೆ ಮಾಡಿ ಚಿತ್ರಕ್ಕೆ ಶುಭ ಹಾರೈಸಿದರು.

ADVERTISEMENT

‘ಇದೊಂದು ಸತ್ಯಘಟನೆ ಆಧರಿತ ಚಿತ್ರ’ ಎಂದು ಮಾತು ಆರಂಭಿಸಿದರು ರಘು. ‘ನಂಬಿಕೆ, ವಂಚನೆ, ಅನುಮಾನ ಈ ಮೂರು ಸಂಗತಿಗಳ ಸುತ್ತ ಕಥೆ ಹೆಣೆಯಲಾಗಿದೆ. ಗಂಡ ಹೆಂಡತಿ ಇರಲಿ, ಪ್ರೇಮಿಗಳೇ ಇರಲಿ ನಂಬಿಕೆ ಅನ್ನುವುದು ತುಂಬ ಮುಖ್ಯ. ಅದಿಲ್ಲದೇ ಹೋದರೆ ತುಂಬಾ ಕಷ್ಟಪಡಬೇಕಾಗುತ್ತದೆ. ಇದನ್ನೇ ನಾವು ಸಿನಿಮಾ ಮೂಲಕ ಹೇಳಹೊರಟಿದ್ದೇವೆ’ ಎಂದರು.

ಹರ್ಷವರ್ಧನ್ ರಾಜ್ ಈ ಚಿತ್ರದ ನಾಲ್ಕು ಹಾಡುಗಳಿಗೆ ಸಂಗೀತ ಸಂಯೋಜಿಸಿದ್ದಾರೆ.  ಮಿತ್ರ ಈ ಚಿತ್ರದ ನಾಯಕ. ನಾಯಕಿ ಅಕ್ಷತಾ ಮಂಗಳೂರಿನವರು. ಹೈದರಾಬಾದ್‌ನಲ್ಲಿ ವಾಸವಾಗಿರುವ ಅವರು ಒಂದು ತೆಲುಗು ಸಿನಿಮಾದ ನಿರ್ದೇಶನವನ್ನೂ ಮಾಡಿದ್ದಾರೆ. ಕನ್ನಡಕ್ಕೆ ಬರುವುದಾದರೆ ಯಾವುದಾದರೂ ಭಿನ್ನ ಕಥೆಯ ಮೂಲಕವೇ ಬರಬೇಕು ಎಂದು ಅಂದುಕೊಂಡಿದ್ದರಂತೆ. ಸುಜಯ್ ಕುಮಾರ್ ಛಾಯಾಗ್ರಹಣವಿದೆ. ಮನೋಜ್, ತರುಣ್ ಕಿಶೋರ್, ಚಂದ್ರಪ್ರಭ, ಗೋವಿಂದೇಗೌಡ ಮುಂತಾದವರು ತಾರಾಗಣದಲ್ಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.