ಬೆಂಗಳೂರು: ‘ಪತಿ ಬಾಲಾಜಿ ಪೋತರಾಜ್ ಅವರು ನನ್ನ ಮುಖ ಮತ್ತು ಬಾಯಿಯಿಂದ ರಕ್ತ ಬರುವಂತೆ ಹಲ್ಲೆ ನಡೆಸಿದ್ದಾರೆ’ ಎಂದು ನಟಿ ಚೈತ್ರಾ ಪೋತರಾಜ್ ಅವರು ಬಸವನಗುಡಿ ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
‘ಪತಿಯು ಮಾರ್ಚ್ 14ರಂದು ಚಿಕ್ಕ ವಿಷಯಕ್ಕೆ ಜಗಳ ಮಾಡಿ ಮುಖಕ್ಕೆ ಹೊಡೆದಿದ್ದಾರೆ. ಆಗ ಮೂಗು ಮತ್ತು ಬಾಯಿಯಿಂದ ರಕ್ತ ಬಂದಿದೆ. ಎಡಗಣ್ಣಿನ ಕೆಳಗೆ ಗಾಯವಾಗಿದೆ. ನನ್ನನ್ನು ಸಾಯಿಸುವ ಉದ್ದೇಶದಿಂದ ಕುತ್ತಿಗೆ ಹಿಡಿದು ಹೊಟ್ಟೆಗೆ ಹೊಡೆದಿದ್ದಾರೆ. ಆಗ ನನಗೆ ಪ್ರಜ್ಞೆ ತಪ್ಪಿತು. ಆದರೆ ನನಗೆ ಚಿಕಿತ್ಸೆ ಕೊಡಿಸುವ ಬದಲು ಮನೆ ಬಿಟ್ಟು ಹೋಗಿದ್ದಾರೆ’ ಎಂದು ಚೈತ್ರಾ ಅವರು ಪತಿ ವಿರುದ್ಧ ನೀಡಿರುವ ದೂರಿನಲ್ಲಿ ಹೇಳಿದ್ದಾರೆ.
‘2006ರಲ್ಲಿ ಮೈಸೂರಿನಲ್ಲಿ ನಮ್ಮ ಮದುವೆ ನಡೆಯಿತು. ಮದುವೆಯ ನಂತರ ಚಿಕ್ಕಪುಟ್ಟ ವಿಷಯಕ್ಕೂ ಪತಿ ಕಿರುಕುಳ ನೀಡಿದ್ದಾರೆ. ಖರ್ಚಿಗೆ ಹಣ ಕೇಳಿದಾಗ ಹೊಡೆದು ಅಮಾನವೀಯವಾಗಿ ವರ್ತಿಸಿದ್ದಾರೆ. ಸಿನಿಮಾಗಳಲ್ಲಿ ನಟಿಸಬಾರದು ಎಂದು ಹೇಳಿದ್ದಾರೆ. ಆಗ ನನ್ನ ತವರು ಮನೆಯವರ ಸಹಾಯ ಪಡೆದು ಧಾರಾವಾಹಿ ನಿರ್ಮಾಣ ಮಾಡಿದೆ. ಅದರಿಂದ ಬಂದ ಹಣವನ್ನೂ ಪತಿಯೇ ತೆಗೆದುಕೊಂಡಿದ್ದಾರೆ. ಒಮ್ಮೆ ಪತಿಯು ನನ್ನ ತಲೆಯನ್ನು ಕಾರಿನ ಕಿಟಕಿಗೆ ಗುದ್ದಿಸಿದ್ದರು’ ಎಂದೂ ದೂರಿನಲ್ಲಿ ಹೇಳಲಾಗಿದೆ.
ಚೈತ್ರಾ ಅವರು ಈಗ ತವರು ಮನೆಯವರ ಜೊತೆ ಇದ್ದಾರೆ. ದೂರು ಆಧರಿಸಿ ಎಫ್.ಐ.ಆರ್ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.