ADVERTISEMENT

ಪ್ರೇಮಲೋಕದ ತುದಿ ಅಂಜು ಮಂಜು

​ಪ್ರಜಾವಾಣಿ ವಾರ್ತೆ
Published 1 ಏಪ್ರಿಲ್ 2015, 19:30 IST
Last Updated 1 ಏಪ್ರಿಲ್ 2015, 19:30 IST

‘‘ಕ್ರೇಜಿಸ್ಟಾರ್ ರವಿಚಂದ್ರನ್ ಅವರು ‘ಪ್ರೇಮಲೋಕ’ ಚಿತ್ರದ ಮೂಲಕ ಪ್ರೀತಿಗೆ ನಾಂದಿ ಹಾಕಿದರು. ನಾನು ಈ ಚಿತ್ರದ ಮೂಲಕ ಶುಭಂ ಹಾಡ್ತೀನಿ’’– ಇದು ನಿರ್ದೇಶಕ ಸುನೀಲ್ ಹುಬ್ಬಳ್ಳಿ ಅವರ ಆತ್ಮವಿಶ್ವಾಸದ ಮಾತು. ಅವರು ಪ್ರೀತಿಗೆ ‘ಎಂಡ್’ ಹೇಳುತ್ತಿರುವುದು ತಮ್ಮ ಹೊಸ ಚಿತ್ರ ‘ಅಂಜು ಮಂಜು ಲವ್ ಸ್ಟೋರಿ’ ಮೂಲಕ. ಇತ್ತೀಚೆಗೆ ಚಿತ್ರಕ್ಕೆ ಮುಹೂರ್ತ ನೆರವೇರಿಸಿ ಪತ್ರಕರ್ತರನ್ನು ಎದುರಾದಾಗ ಸುನೀಲ್ ಹೇಳಿದ ಮಾತುಗಳಿವು.

ಸುನೀಲ್‌ ಅವರ ಮಾತುಗಳನ್ನು ಕೇಳಿ ಇನ್ನು ಮುಂದೆ ಕನ್ನಡ ಚಿತ್ರಗಳಲ್ಲಿ ಪ್ರೀತಿ ಪ್ರೇಮವೇ ಇರುವುದಿಲ್ಲ ಎಂದು ನಿರಾಶರಾಗುವ ಪ್ರಮೇಯವಿಲ್ಲ. ಸುನೀಲ್ ಪ್ರಕಾರ ಇಂದಿನ ಪ್ರೀತಿ ಫೇಸ್‌ಬುಕ್, ವಾಟ್ಸ್‌ಆ್ಯಪ್ ಹೀಗೆ ಸಾಮಾಜಿಕ ಜಾಲತಾಣಗಳಿಗೆ ಸೀಮಿತವಾಗಿ ‘ಟೈಮ್ ಪಾಸ್’ ವಿಚಾರವಾಗಿದೆ. ಇದರಿಂದಾಗಿ ಅದೆಷ್ಟೋ ಯುವ ಮನಗಳು ಹಾದಿ ತಪ್ಪುತ್ತಿವೆ.

ಇಂಥ ಅಂಶಗಳನ್ನೆಲ್ಲ ಕೂಡಿಸಿಕೊಂಡು ಪ್ರೀತಿಯ ನಿಜವಾದ ಅರ್ಥವನ್ನು ಯುವಜನತೆಗೆ ತಿಳಿಸುವ ಪ್ರಯತ್ನ ಈ ‘...ಲವ್ ಸ್ಟೋರಿ’. ಆ ಅರ್ಥದಲ್ಲಿ ಅವರು ‘ಶುಭಂ’ ಹೇಳಲಿದ್ದಾರಂತೆ. ಅವರ ನಿರ್ದೇಶನದ ‘ಪಾರು ಈ ಲವ್ ಯೂ’ ಇನ್ನೂ ಬಿಡುಗಡೆ ಕಂಡಿಲ್ಲ. ಅಷ್ಟರಲ್ಲೇ ಎರಡನೇ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಲು ಸಿದ್ಧರಾಗಿದ್ದಾರೆ. ದಿಲೀಪ್ ಪೈ ಚಿತ್ರದ ನಾಯಕ. ಅವರಿಗೆ ಜೊತೆಯಾಗಿದ್ದಾರೆ ಕೇರಳದ ಕೀರ್ತನಾ ಪೋಡವಾಲ್. ಪೋಲಿ ಹುಡುಗ ಮತ್ತು ಸಂಗೀತದ ವಿದ್ಯಾರ್ಥಿನಿ ನಡುವೆ ನಡೆವ ಪ್ರೇಮ ಕಥೆಗೆ ಇವರಿಬ್ಬರು ಜೀವ ತುಂಬಲಿದ್ದಾರೆ.

ವಿಚಿತ್ರ ಎಂದರೆ ನಿರ್ದೇಶಕರು ಇವರಿಗಿನ್ನೂ ಕ್ಲೈಮ್ಯಾಕ್ಸ್ ಬಗ್ಗೆ ಏನೂ ಹೇಳಿಲ್ಲವಂತೆ.‌ ‘ನಿರ್ದೇಶಕರಿಗೆ ಕ್ಲೈಮ್ಯಾಕ್ಸ್ ಗೊತ್ತಿದ್ದರೆ ಸಾಕು’ ಎಂದು ದಿಲೀಪ್ ತಮಾಷೆ ಮಾಡುತ್ತಾರೆ. ಸಾಧು ಕೋಕಿಲ, ಸುಧಾರಾಣಿ, ರಾಜುತಾಳಿಕೋಟೆ ಮುಂತಾದವರು ತಾರಾಗಣದಲ್ಲಿದ್ದಾರೆ. ಹೋಟೆಲ್ ಉದ್ಯಮಿ ಕೆ. ಬಾಲಕೃಷ್ಣ ‘ಅಂಜು ಮಂಜು...’ ಚಿತ್ರಕ್ಕೆ ಹಣ ಒದಗಿಸಿ, ಚಿತ್ರದಲ್ಲೂ ಕಾಣಿಸಿಕೊಳ್ಳಲಿದ್ದಾರೆ. ಉಡುಪಿ, ಮಣಿಪಾಲ, ದುಬೈಗಳಲ್ಲಿ ಎರಡು ತಿಂಗಳ ಕಾಲ ಚಿತ್ರೀಕರಣ ನಡೆಸಲಾಗುವುದು ಎಂದು ಅವರು ಹೇಳಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.