ADVERTISEMENT

‘ಸಂಯುಕ್ತ–2’ ಹಾಡು ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 10 ನವೆಂಬರ್ 2017, 7:35 IST
Last Updated 10 ನವೆಂಬರ್ 2017, 7:35 IST
ಐಶ್ವರ್ಯಾ
ಐಶ್ವರ್ಯಾ   

ಅದು ‘ಸಂಯುಕ್ತ - 2’ ಸಿನಿಮಾದ ಹಾಡುಗಳ ಬಿಡುಗಡೆ ಕಾರ್ಯಕ್ರಮ. ಅದು ಆಯೋಜನೆ ಆಗಿದ್ದು ಬೆಂಗಳೂರಿನ ಪ್ರತಿಷ್ಠಿತ ಕ್ಲಬ್‌ವೊಂದರಲ್ಲಿ. ಕಾರ್ಯಕ್ರಮದ ಮುಖ್ಯ ಅತಿಥಿ ಯಶ್.

ಯಶ್ ಅವರು ಮುಖ್ಯ ಅತಿಥಿ ಅಂದರೆ ಕೇಳಬೇಕೇ? ಇಡೀ ಸಭಾಂಗಣ ಕಿಕ್ಕಿರಿದು ತುಂಬಿತ್ತು. ಆಸನಗಳೆಲ್ಲವೂ ಭರ್ತಿಯಾಗಿದ್ದವು. ವೇದಿಕೆಯ ಎದುರು ಯಶ್ ಅಭಿಮಾನಿಗಳು ಜಮಾಯಿಸಿದ್ದರು. ಈ ಕಾರ್ಯಕ್ರಮವು ಸಿನಿಮಾದ ಹಾಡುಗಳ ಬಿಡುಗಡೆ ಜೊತೆಯಲ್ಲೇ ಇನ್ನೊಂದು ಮುಖ್ಯ ಸಂಗತಿಯನ್ನು ತಿಳಿಸಿಕೊಟ್ಟಿತು. ಆ ಸಂಗತಿ ಯಶ್ ಕುರಿತಾದದ್ದು.

ಯಶ್ ಅವರು ಹೊಸಬರ ಸಿನಿಮಾ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುತ್ತಾರೆ, ಹೊಸಬರನ್ನು ಹುರಿದುಂಬಿಸುತ್ತಾರೆ ಎಂದು ‘ಸಂಯುಕ್ತ - 2’ ಸಿನಿತಂಡ ಅದಾಗಲೇ ಹೇಳಿಯಾಗಿತ್ತು. ಈ ಮಾತನ್ನು ಯಶ್ ಅವರೂ ಕೇಳಿಸಿಕೊಂಡಿದ್ದರು.

ADVERTISEMENT

ಕಾರ್ಯಕ್ರಮದ ಅಂತಿಮ ಘಟ್ಟದಲ್ಲಿ ಮಾತನಾಡಿದ ಯಶ್, ತಾವು ಹೊಸಬರ ಸಿನಿಮಾ ಕಾರ್ಯಕ್ರಮಗಳಿಗೆ ಬರುವುದು ಏಕೆ ಎಂಬುದನ್ನು ತಿಳಿಸಿದರು. ಹಾಗೆ ಬರುವುದಕ್ಕೆ ತಮಗೆ ಪ್ರೇರಣೆ ಹಿರಿಯ ನಟ ಅಂಬರೀಷ್ ಎಂದರು.

‘ನನ್ನ ಸಿನಿಮಾಗಳ ಟ್ರೇಲರ್‌ ಬಿಡುಗಡೆ, ಹಾಡುಗಳ ಬಿಡುಗಡೆಯಂತಹ ಕಾರ್ಯಕ್ರಮಗಳಲ್ಲಿ ಅಂಬರೀಷ್‌ ಪಾಲ್ಗೊಳ್ಳುತ್ತಿದ್ದರು. ತಮ್ಮ ಸಮಯವನ್ನು ಕೊಡುವುದರಿಂದ ಇನ್ನೊಬ್ಬರಿಗೆ ಸಹಾಯ ಆಗುತ್ತದೆ ಎಂದಾದರೆ, ಸಮಯ ಕೊಡುವುದಕ್ಕೆ ಹಿಂದೇಟು ಏಕೆ ಎಂದು ಅಂಬರೀಷ್ ಹೇಳುತ್ತಿದ್ದರು. ಅದೇ ಮಾತು ನನಗೆ ಪ್ರೇರಣೆ. ಈ ಕಾರಣದಿಂದಾಗಿಯೇ ನಾನು ಹೊಸಬರ ಸಿನಿಮಾಕ್ಕೆ ಸಂಬಂಧಿಸಿದ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುತ್ತೇನೆ’ ಎಂದರು ಯಶ್.

ಈ ಮಾತಿಗೆ ಅವರ ಅಭಿಮಾನಿಗಳಿಂದ ಜೋರಾದ ಶಿಳ್ಳೆ, ಚಪ್ಪಾಳೆ ಬಂತು ಎಂಬುದನ್ನು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ.

‘ಕನ್ನಡದ ಪ್ರತಿಭೆಗಳು ಬೇರೆ ಬೇರೆ ಭಾಷೆಗಳ ಸಿನಿಮಾಗಳಲ್ಲಿ ಅಭಿನಯಿಸಿ, ಅಲ್ಲಿಯೂ ಜಯ ಸಾಧಿಸಬೇಕು. ಅದೇ ನನ್ನ ಆಸೆ’ ಎಂದೂ ಯಶ್ ಹೇಳಿದರು. ಅಲ್ಲದೆ, ‘ಕನ್ನಡದ ವೀಕ್ಷಕರು ಉತ್ತಮ ಸಿನಿಮಾಗಳನ್ನು ಯಾವತ್ತಿಗೂ ಬೆಂಬಲಿಸಿದ್ದಾರೆ’ ಎಂದ ರಾಕಿಂಗ್ ಸ್ಟಾರ್, ‘ಸಂಯಕ್ತ-2’ ತಂಡಕ್ಕೆ ಶುಭ ಕೋರಿದರು.

ಈ ಸಿನಿಮಾದ ಪ್ರಚಾರ ಅಭಿಯಾನವನ್ನು ಎಲ್‌ಇಡಿ ಟ್ಯಾಬ್ಲೊ ಮೂಲಕ ಕೈಗೊಳ್ಳಲು ಚಿತ್ರತಂಡ ಮುಂದಾಗಿದೆ. ಕನ್ನಡ ಸಿನಿಮಾ ಉದ್ಯಮದಲ್ಲಿ ಈ ರೀತಿಯಲ್ಲಿ ಪ್ರಚಾರ ಅಭಿಯಾನ ಕೈಗೊಳ್ಳುವುದು ಇದೇ ಮೊದಲು ಎಂದೂ ತಂಡ ಹೇಳಿಕೊಂಡಿದೆ. ‘ಸಂಯುಕ್ತ-2’ ನಿರ್ಮಾಪಕ ಮಂಜುನಾಥ ಡಿ.ಎಸ್, ನಿರ್ದೇಶಕ ಅಭಿರಾಮ್, ಯಶವಂತಪುರ ಶಾಸಕ ಎಸ್.ಟಿ. ಸೋಮಶೇಖರ್ ಸೇರಿದಂತೆ ಹಲವರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.