ADVERTISEMENT

ಹಾಡಿನ ಮೂಡಲ್ಲಿ ಮೇಲುಕೋಟೆ ಮಂಜ

​ಪ್ರಜಾವಾಣಿ ವಾರ್ತೆ
Published 1 ಫೆಬ್ರುವರಿ 2017, 19:30 IST
Last Updated 1 ಫೆಬ್ರುವರಿ 2017, 19:30 IST
ಹಾಡಿನ ಮೂಡಲ್ಲಿ ಮೇಲುಕೋಟೆ ಮಂಜ
ಹಾಡಿನ ಮೂಡಲ್ಲಿ ಮೇಲುಕೋಟೆ ಮಂಜ   

ನಟ ಜಗ್ಗೇಶ್ ನಿರ್ದೇಶನದ ಎರಡನೇ ಸಿನಿಮಾ ‘ಮೇಲುಕೋಟೆ ಮಂಜ’ ಮುಂದಿನ ಶುಕ್ರವಾರ (ಫೆ. 10) ತೆರೆಗೆ ಬರುತ್ತಿದೆ. ಅದಕ್ಕೆ ಪೂರ್ವಭಾವಿಯಾಗಿ ಪ್ರಚಾರ ಕಾರ್ಯ ಚುರುಕುಗೊಳಿಸಿರುವ ಅವರು ಹಾಡುಗಳ ಸೀಡಿಯನ್ನು ಮಾರುಕಟ್ಟೆಗೆ ತಂದಿದ್ದಾರೆ. ಅವರೇ ಈ ಚಿತ್ರದ ನಾಯಕ ಕೂಡ.

‘ಕಮರ್ಷಿಯಲ್ ಸಿನಿಮಾಗಳಿಗೆ ಇರುವ ಎಲ್ಲ ಸೂತ್ರಗಳನ್ನೂ ಸೇರಿಸಿ, ಅಲ್ಲಲ್ಲಿ ರೋಚಕತೆಯನ್ನು ಬೆರೆಸಿ ಮಾಡಿದ ಸಿನಿಮಾ ಇದು’ ಎಂದು ಅವರು ಹೇಳಿದರು. ತಾನು ನಾಯಕ ಎಂಬುದಕ್ಕಿಂತ ನಿರ್ದೇಶಕನಾಗಿರುವ ಕಾರಣಕ್ಕೆ ಈ ಸಿನಿಮಾ ನೋಡಿ ಎಂಬುದು ಅವರ ಮನವಿ. ಸಾಲ ತೆಗೆದುಕೊಳ್ಳಲು ಒಬ್ಬ ವ್ಯಕ್ತಿ ಏನೆಲ್ಲ ನಾಟಕ ಮಾಡುತ್ತಾನೆ, ಅದರಿಂದ ಆತನ ಕುಟುಂಬ ಹೇಗೆ ಕೊರಗುತ್ತದೆ ಎಂಬುದನ್ನು ಹಾಸ್ಯ ಮತ್ತು ರೋಚಕತೆಯ ಲೇಪದ ಮೂಲಕ ಅವರು ಹೇಳಿದ್ದಾರೆ.

ನಾಯಕನ ತಂದೆ ಪಾತ್ರದಲ್ಲಿ ಶ್ರೀನಿವಾಸ ಪ್ರಭು ನಟಿಸಿದ್ದಾರೆ. ಮೌಲ್ಯ, ಆದರ್ಶಗಳಿಗೆ ಬದ್ಧರಾದ ಶಿಕ್ಷಕನ ಪಾತ್ರ ಅವರದು. ‘ಉಡಾಳ ಮಗನನ್ನು ದಾರಿಗೆ ತರುವ ಅಪ್ಪ ನಾನಿಲ್ಲಿ. ನನ್ನ ಮನಸಿಗೆ ಹತ್ತಿರವಾದ ಪಾತ್ರವಿದು’ ಎಂದರು ಅವರು. ಮನರಂಜನೆಯ ಜೊತೆಗೆ ಹೃದಯಸ್ಪರ್ಶಿ ದೃಶ್ಯಗಳೂ ಚಿತ್ರದಲ್ಲಿವೆಯಂತೆ. ನಾಯಕಿ ಐಂದ್ರಿತಾ ರೇ ಸುದ್ದಿಗೋಷ್ಠಿಯಲ್ಲಿ ಹಾಜರಿರಲಿಲ್ಲ.

ADVERTISEMENT

ಗಿರಿಧರ್ ದಿವಾನ್ ಸಂಗೀತ ಸಂಯೋಜಿಸಿದ್ದಾರೆ. ಯೋಗರಾಜ್ ಭಟ್, ಜಗ್ಗೇಶ್, ರಾಮ್‌ನಾರಾಯಣ್ ಸಾಹಿತ್ಯ ರಚಿಸಿದ್ದಾರೆ. ಟಿಪ್ಪು ನಾರಾಯಣನ್, ಕಾರ್ತಿಕ್, ಅನುರಾಧಾ ಭಟ್, ಪುನೀತ್ ರಾಜಕುಮಾರ್, ಆಸ್ಕರ್, ನಕುಲ್ ಭಯಂಕರ್, ಸುನೀತಾ ಹಾಡಿದ್ದಾರೆ. ಚಿಪ್ಸ್ ಮಾಡಿ ಅಂಗಡಿಗಳಿಗೆ ಮಾರುವ ಉದ್ಯಮಿ ಆರ್. ಕೃಷ್ಣ ಚಿತ್ರದ ನಿರ್ಮಾಪಕ. ಜಗ್ಗೇಶ್ ಮೇಲಿನ ಅಭಿಮಾನಕ್ಕೆ ಅವರು ಸಿನಿಮಾ ನಿರ್ಮಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.