ನಟ ಚಿರಂಜೀವಿ ಸರ್ಜಾ ಎರಡು ವಿಭಿನ್ನ ಶೇಡ್ಗಳಲ್ಲಿ ನಟಿಸಿರುವ ‘ಸಂಹಾರ’ ಚಿತ್ರ ಈ ವಾರ ತೆರೆ ಕಾಣುತ್ತಿದೆ.
ಥ್ರಿಲ್ಲರ್ ಅಂಶ ಒಳಗೊಂಡಿರುವ ಇದರಲ್ಲಿ ಚಿರಂಜೀವಿ ಸರ್ಜಾ ಅಂಧನಾಗಿಯೂ ಕಾಣಿಸಿಕೊಂಡಿದ್ದಾರೆ. ಕಣ್ಣು ಕಾಣದಿದ್ದರೂ ಅಡುಗೆ ಮಾಡುವ ಕಲೆ ನಾಯಕನಿಗೆ ಕರಗತವಂತೆ. ಜತೆಗೆ, ಆತ ರೆಸ್ಟೋರೆಂಟ್ವೊಂದರ ಮಾಲೀಕನೂ ಹೌದು. ಪ್ರೀತಿಗಾಗಿ ಆತ ಎಂಥದ್ದೇ ಅಪಾಯವನ್ನೂ ಎದುರಿಸಲು ಸಿದ್ಧವಂತೆ. ಹರಿಪ್ರಿಯಾ ಮತ್ತು ಕಾವ್ಯಾ ಶೆಟ್ಟಿ ನಾಯಕಿಯರು. ಈ ಇಬ್ಬರಲ್ಲಿ ಯಾರನ್ನು ಪ್ರೀತಿಸುತ್ತಾನೆ ಎನ್ನುವುದು ಮಾತ್ರ ಗುಟ್ಟು.
ಹರಿಪ್ರಿಯಾ ಮೊದಲ ಬಾರಿಗೆ ನೆಗೆಟಿವ್ ಶೇಡ್ ಇರುವ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಹಾಸ್ಯನಟ ಚಿಕ್ಕಣ್ಣ ಪ್ರಥಮ ಬಾರಿಗೆ ಪೊಲೀಸ್ ಇನ್ಸ್ಪೆಕ್ಟರ್ ಆಗಿ ಕಾಣಿಸಿಕೊಂಡಿರುವುದು ಚಿತ್ರದ ವಿಶೇಷ. ಅವರು ನಾಯಕನೊಂದಿಗೆ ಮುಕ್ಕಾಲು ಭಾಗದಷ್ಟು ತೆರೆ ಹಂಚಿಕೊಂಡಿದ್ದಾರಂತೆ. ಪ್ರತಿ 10ರಿಂದ 15 ನಿಮಿಷಕ್ಕೆ ಒಂದರಂತೆ ಚಿತ್ರದಲ್ಲಿ ಟ್ವಿಸ್ಟುಗಳಿದ್ದು, ಪ್ರೇಕ್ಷಕರು ಕುತೂಹಲದ ಮಡುವಿನಲ್ಲಿ ಬೀಳಲಿದ್ದಾರೆ ಎಂಬುದು ಚಿತ್ರತಂಡದ ಹೇಳಿಕೆ.
ರವಿ ಬಸ್ರೂರು ಸಂಗೀತ ಸಂಯೋಜಿಸಿದ್ದಾರೆ. ‘ರಾಜಾ ಹುಲಿ’ ಚಿತ್ರದ ಖ್ಯಾತಿಯ ಗುರು ದೇಶಪಾಂಡೆ ಈ ಚಿತ್ರದ ನಿರ್ದೇಶಕ. ಎ. ವೆಂಕಟೇಶ್ ಮತ್ತು ಆರ್. ಸುಂದರ ಕಾಮರಾಜು ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.
-ಗುರು ದೇಶಪಾಂಡೆ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.