ADVERTISEMENT

ಜನಸ್ನೇಹಿ ಆವಿಷ್ಕಾರದಲ್ಲಿ ಗೆದ್ದ ವಿದ್ಯಾರ್ಥಿಗಳು!

​ಪ್ರಜಾವಾಣಿ ವಾರ್ತೆ
Published 19 ಏಪ್ರಿಲ್ 2017, 19:30 IST
Last Updated 19 ಏಪ್ರಿಲ್ 2017, 19:30 IST
ಜನಸ್ನೇಹಿ ಆವಿಷ್ಕಾರದಲ್ಲಿ  ಗೆದ್ದ ವಿದ್ಯಾರ್ಥಿಗಳು!
ಜನಸ್ನೇಹಿ ಆವಿಷ್ಕಾರದಲ್ಲಿ ಗೆದ್ದ ವಿದ್ಯಾರ್ಥಿಗಳು!   

ನಗರದ ಪಿಇಎಸ್ ಪಾಲಿಟೆಕ್ನಿಕ್ ಕಾಲೇಜಿನ ಮೆಕ್ಯಾನಿಕಲ್ ವಿಭಾಗದ ಅಂತಿಮ ವರ್ಷದ ವಿದ್ಯಾರ್ಥಿಗಳು ಹೊಸ ಆವಿಷ್ಕಾರಗಳನ್ನು ಮಾಡಿದ್ದಾರೆ. ಭಾರತೀಯ ರೈಲ್ವೆ ವ್ಯವಸ್ಥೆಯನ್ನು ಇನ್ನಷ್ಟು ತಂತ್ರಜ್ಞಾನಸ್ನೇಹಿಯನ್ನಾಗಿಸಲು ತಮ್ಮ ಆರು  ಹೊಸ ಆವಿಷ್ಕಾರಗಳನ್ನು ಅನುಷ್ಠಾನಗೊಳಿಸಬಹುದು ಎಂದು ಈ ವಿದ್ಯಾರ್ಥಿಗಳು  ಪ್ರತಿಪಾದಿಸಿದ್ದಾರೆ.

ಮೂರು ಕಿಲೋಮೀಟರ್ ದೂರದಲ್ಲಿ ರೈಲು ಸಂಚರಿಸುತ್ತಿರುವುದನ್ನು ಸಿಗ್ನಲ್ ಮೂಲಕ ಗ್ರಹಿಸಿಕೊಂಡ ಲೆವೆಲ್ ಕ್ರಾಸಿಂಗ್‌ನ ಗೇಟ್ ತಂತಾನೆ ಮುಚ್ಚಿಕೊಳ್ಳುತ್ತದೆ; ರೈಲು ಮುಂದೆ ಹೋದ ನಂತರ ತೆರೆದುಕೊಳ್ಳುತ್ತದೆ. ಇದರಿಂದ ಸಂಭವಿಸಬಹುದಾದ ಅನಾಹುತಗಳನ್ನು ತಪ್ಪಿಸಬಹುದು.  ಅಲ್ಲದೆ ಬೆಂಕಿ ಅವಘಡಗಳ ನಿರ್ವಹಣೆ, ವಿದ್ಯುತ್ ಉತ್ಪಾದನೆಯನ್ನೂ ನಿರ್ವಹಿಸಬಹುದು. 

ಉದ್ಯೋಗಿ ನಿರ್ವಹಣೆ ವ್ಯವಸ್ಥೆ: ಈ ತಂತ್ರಾಂಶದ ಸಹಾಯದಿಂದ ಆಯಾ ಸಂಸ್ಥೆಯಲ್ಲಿ ಕೆಲಸ ನಿರ್ವಹಿಸುವವರ ಪೂರ್ಣ ಮಾಹಿತಿ ಶೇಖರಿಸುತ್ತದೆ. ನೌಕರರ ಹಾಜರಾತಿ, ರಜೆ ತಗೆದುಕೊಂಡ ದಿನಗಳು, ಸಂಬಳ ಹಾಗೂ ಇನ್ನಿತರೆ ವಿಷಯಗಳನ್ನು ಶೇಖರಿಸಲು ಇದು ನೆರವಾಗುತ್ತದೆ.

ರೈತ ಮಾಹಿತಿ: ಕಂಪ್ಯೂಟರ್ ವಿಭಾಗದ ವಿದ್ಯಾರ್ಥಿಗಳು ರೈತರಿಗೆ ಸಹಾಯವಾಗುವ ಹೊಸ ತಂತ್ರಾಂಶ ಸಿದ್ಧಪಡಿಸಿದ್ದಾರೆ. ಈ ತಂತ್ರಾಂಶದ ಬಳಕೆಯಿಂದ ರೈತರಿಗೆ ಬೆಳೆಗಳು, ಸೂಕ್ತ ಬೀಜಗಳು, ವಿವಿಧ ತಳಿಗಳು, ನಿಗದಿತ ಸಮಯದಲ್ಲಿ ಸಿಂಪಡಿಸಬೇಕಾದ ಔಷಧಿ ಸೇರಿದಂತೆ ಹಲವು ಉಪಯುಕ್ತ ಮಾಹಿತಿಗಳು ಸುಲಭ ರೀತಿಯಲ್ಲಿ ಲಭ್ಯವಾಗುತ್ತವೆ. 


ಬೀದಿದೀಪ ನಿರ್ವಹಣೆ: ವಿದ್ಯುತ್ ಉಳಿತಾಯ ಮಾಡಲೆಂದೇ ಹೊಸ ತಂತ್ರಾಂಶವೊಂದನ್ನು ಸಿದ್ಧಪಡಿಸಿದ್ದಾರೆ. ಇದರಿಂದ ಶೇ 60ರಿಂದ 70ರಷ್ಟು  ವಿದ್ಯುತ್‌ ಉಳಿಸಬಹುದು. ಈ ತಂತ್ರಾಂಶದ ಸಹಾಯದಿಂದ ಆಯಾ ಪ್ರದೇಶದಲ್ಲಿನ ಜನಸಂಖ್ಯೆ, ಜನರ ಸಂಚಾರ ಆಧರಿಸಿ ಅವಶ್ಯಕತೆ ಇರುವಷ್ಟು ದೀಪಗಳು ಮಾತ್ರ ಉರಿಯುತ್ತವೆ. ರಸ್ತೆ ಸಂಪೂರ್ಣ ಖಾಲಿ ಇದ್ದಲ್ಲಿ ಒಂದೇ ಒಂದು ದೀಪ ಉರಿಯುತ್ತದೆ!

ಪಡಿತರ ವ್ಯವಸ್ಥೆ: ನ್ಯಾಯಬೆಲೆ ಅಂಗಡಿಯಲ್ಲಿನ ನಕಲಿ ಪಡಿತರ ಚೀಟಿ ಹಾಗು ನೂಕುನುಗ್ಗಲು ತಪ್ಪಿಸುವ ತಂತ್ರಾಂಶವೂ ಇವರಲ್ಲಿದೆ.
ಆಯಾ ಗ್ರಾಹಕರಿಗೆ ಸಿಗಬಹುದಾದ ಆಹಾರ ಸಾಮಗ್ರಿಗಳ ವಿವರಣೆ, ದಿನ ಹಾಗೂ ಸಮಯವನ್ನು ಮೊಬೈಲ್‌ಗೆ ಸಂದೇಶ ರೂಪದಲ್ಲಿ ರವಾನಿಸಲಾಗುತ್ತದೆ. ಅದರಂತೆ ಗ್ರಾಹಕರು ಬಂದು ಸಾಮಗ್ರಿಗಳನ್ನು ಯಂತ್ರದ ಸಹಾಯದಿಂದ ಸ್ವೀಕರಿಸಬಹುದು.

ಸಾಮಗ್ರಿಗಳನ್ನು ಯಂತ್ರವೇ ಕೊಡುವುದರಿಂದ ವಿತರಣೆಯ ಸಂದರ್ಭದಲ್ಲಿ ಆಗುವ ಯಾವುದೇ ರೀತಿಯ ಸಮಸ್ಯೆಗಳು ನಿವಾರಣೆಯಾಗಿ ಗ್ರಾಹಕರಿಗೆ ನ್ಯಾಯ ದೊರಕಿಸಿಕೊಟ್ಟಂತಾಗುತ್ತದೆ. 

ವಾಹನ: ತಮ್ಮ ಮಕ್ಕಳ ವಾಹನ ಬಳಕೆಯ ಮೇಲೆ ಹದ್ದಿನಗಣ್ಣು ಇಡಬಯಸುವ ಪೋಷಕರನ್ನು ಗಮನದಲ್ಲಿಟ್ಟುಕೊಂಡು ಆವಿಷ್ಕರಿಸಿರುವ ತಂತ್ರಾಂಶವಿದು.

ಮಕ್ಕಳು ವಾಹನವನ್ನು ಮನೆಯಿಂದ ಕೊಂಡೊಯ್ದ ಕೂಡಲೇ ತಂದೆ ತಾಯಂದಿರ ಮೊಬೈಲ್‌ಗೆ ಸಂದೇಶ ರವಾನೆಯಾಗುತ್ತದೆ. ವಾಹನ ಚಲಾಯಿಸುವಾಗ ಮೊಬೈಲ್‌ನಲ್ಲಿ ಮಾತನಾಡುವುದು, ಅತಿ ವೇಗದ ಚಾಲನೆಯಂತಹ ಅಶಿಸ್ತುಗಳನ್ನೂ ಸಿಗ್ನಲ್ ಮೂಲಕ ಗ್ರಹಿಸಿ ಪೋಷಕರ ಮೊಬೈಲ್‌ಗೆ ಸಂದೇಶ ರವಾನಿಸುತ್ತದೆ ಈ ತಂತ್ರಾಂಶ. ವಾಹನ ಆ ಕ್ಷಣಕ್ಕೆ ಎಲ್ಲಿದೆ ಎಂಬ ಮಾಹಿತಿಯನ್ನೂ ನೀಡುತ್ತದೆ!

ಈ ಆವಿಷ್ಕಾರದ ಉತ್ಪನ್ನಗಳು ಸಾಮಾನ್ಯ ಜನರಿಗೂ ದೊರೆಯುವಂತೆ ಮಾಡಲು ಕಾಲೇಜಿನ ಆಡಳಿತ ಬದ್ಧವಾಗಿದೆ ಎಂದು ಹೇಳಿದೆ.
ಮಾಹಿತಿಗೆ: www.pes.edu

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT