ADVERTISEMENT

ಡಾಲಿ ಭವನಕ್ಕೆ ಶತಾಬ್ದಿ ಸಂಭ್ರಮ

​ಪ್ರಜಾವಾಣಿ ವಾರ್ತೆ
Published 15 ಡಿಸೆಂಬರ್ 2017, 19:30 IST
Last Updated 15 ಡಿಸೆಂಬರ್ 2017, 19:30 IST
1960ರಲ್ಲಿ ಮಿಥಿಕ್ ಸೊಸೈಟಿಯ ಡಾಲಿ ಸ್ಮಾರಕ ಸಭಾಂಗಣ (ಚಿತ್ರ: ಟಿ.ಎಲ್. ರಾಮಸ್ವಾಮಿ)
1960ರಲ್ಲಿ ಮಿಥಿಕ್ ಸೊಸೈಟಿಯ ಡಾಲಿ ಸ್ಮಾರಕ ಸಭಾಂಗಣ (ಚಿತ್ರ: ಟಿ.ಎಲ್. ರಾಮಸ್ವಾಮಿ)   

ನೃಪತುಂಗ ರಸ್ತೆಯ ಮಿಥಿಕ್‌ ಸೊಸೈಟಿ ಆವರಣದಲ್ಲಿರುವ ಡಾಲಿ ಸ್ಮಾರಕ ಸಭಾಂಗಣಕ್ಕೆ ಈಗ ಶತಮಾನೋತ್ಸವ ಸಂಭ್ರಮ. ಮಹಾತ್ಮ ಗಾಂಧಿ, ರವೀಂದ್ರನಾಥ ಟ್ಯಾಗೋರ್‌, ಸಿ.ವಿ. ರಾಮನ್‌ ಸೇರಿದಂತೆ ಹಲವು ದಿಗ್ಗಜರು ಇಲ್ಲಿ ಉಪನ್ಯಾಸ ನೀಡಿದ್ದಾರೆ. ಸಂಶೋಧಕರಾದ ಡಾ.ಬಿ.ಎಲ್‌. ರೈಸ್‌, ಜಾನ್‌ ಮಾರ್ಷಲ್‌, ಫ್ರೆಡ್‌ ಗುಡ್‌ವಿಲ್‌, ಡಾ.ವೆಂಕಟಸುಬ್ಬಯ್ಯ, ಎಂ.ವಿ.ಕೃಷ್ಣರಾವ್‌ ಸೇರಿದಂತೆ ಹಲವರು ಮುಂತಾದವರು ಮಿಥಿಕ್‌ ಸೊಸೈಟಿ ಜೊತೆಗೆ ಕೆಲಸ ಮಾಡಿದ್ದಾರೆ.

ಸಾಹಿತ್ಯ, ಸಂಶೋಧನೆ, ಅಧ್ಯಯನ, ಉಪನ್ಯಾಸಗಳ ನಿರಂತರ ಚಟುವಟಿಕೆಯಲ್ಲಿ ತೊಡಗಿಕೊಂಡಿದ್ದ ಈ ಸಂಸ್ಥೆ ಇದೀಗ ಡಾಲಿ
ಸ್ಮಾರಕ ಸಭಾಂಗಣದ ಶತಮಾನೋತ್ಸವದ ಸಂಭ್ರಮದಲ್ಲಿ ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸಿದೆ.

ಈ ಭವನದ ಶಂಕುಸ್ಥಾಪನೆಯನ್ನು 1917ರಲ್ಲಿ ಮೈಸೂರು ಸಂಸ್ಥಾನದ ಮಹಾರಾಜರಾಗಿದ್ದ ನಾಲ್ವಡಿ ಕೃಷ್ಣರಾಜ ಒಡೆಯರ್, ಭವನದ ಉದ್ಘಾಟನೆಯನ್ನು ಯುವರಾಜ ಕಂಠೀರವ ನರಸಿಂಹರಾಜ ಒಡೆಯರು ಮಾಡಿದ್ದರು. ಭಾನುವಾರ (ಡಿ.17) ಬೆಳಿಗ್ಗೆ 10.30ಕ್ಕೆ ನಡೆಯಲಿರುವ ಶತಮಾನೋತ್ಸವ ಕಾರ್ಯಕ್ರಮವನ್ನು ಮೈಸೂರು ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಉದ್ಘಾಟಿಸಲಿದ್ದಾರೆ.

ADVERTISEMENT

ಕಾರ್ಯಕ್ರಮದಲ್ಲಿ ಮೈಸೂರು ಸಂಸ್ಥಾನದ ಗೀತೆಯಾಗಿದ್ದ ‘ಕಾಯೌ ಶ್ರೀಗೌರಿ, ಕರುಣಾಲಹರಿ’ ಗಾಯನವಿರುತ್ತದೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರೊ.ಕೃ. ನರಹರಿ ವಹಿಸಲಿದ್ದಾರೆ. ಶತಮಾನೋತ್ಸವ ನಿಮಿತ್ತ ಬೆಳಿಗ್ಗೆ 11.30ಕ್ಕೆ ‘ಮೈಸೂರು ರಾಜ್ಯದ ಅಭಿವೃದ್ಧಿಗೆ ಮೈಸೂರು ಅರಸರ
ಕೊಡುಗೆಗಳು’ ಕುರಿತು ವಿಚಾರ ಸಂಕಿರಣ ನಡೆಯಲಿದೆ. ಮೈಸೂರು ಸಂಸ್ಥಾನದ ಆಸ್ಥಾನ ವಿದ್ವಾಂಸರಾಗಿದ್ದ ನಂಜನಗೂಡು ಶ್ರೀಕಂಠಶಾಸ್ತ್ರಿಗಳ ಮೊಮ್ಮಗ ಪ್ರೊ. ಎನ್.ಎಸ್. ತಾರಾನಾಥ್ ಅಧ್ಯಕ್ಷತೆ ವಹಿಸಲಿದ್ದಾರೆ. ‘ಅರಸರ ಸಾಮಾಜಿಕ, ಸಾಂಸ್ಕೃತಿಕ ಕೊಡುಗೆ’ಗಳ ಬಗ್ಗೆ ಡಾ. ಜಿ.ವಿ. ಗಾಯತ್ರಿ ಮಾತನಾಡಲಿದ್ದಾರೆ.

ಡಾ. ಎಸ್.ಕೆ. ಅರುಣಿ ‘ಕಲೆ ಮತ್ತು ವಾಸ್ತುಶಿಲ್ಪ’ಗಳ ಬಗ್ಗೆ ಮಾತನಾಡುವರು. ಅಂಕಣಕಾರ ಪ್ರೊ. ಸುಧೀಂದ್ರ ಹಾಲ್ದೊಡ್ಡೇರಿ ‘ವಿಜ್ಞಾನ, ತಂತ್ರಜ್ಞಾನ ಮತ್ತು ಉದ್ಯಮಗಳ ಬೆಳವಣಿಗೆಗೆ ಮೈಸೂರು ಅರಸರ ಕೊಡುಗೆ’ಗಳ ಬಗ್ಗೆ ಉಪನ್ಯಾಸ ನೀಡಲಿದ್ದಾರೆ. ಸ್ಥಳ– ಡ್ಯಾಲಿ ಸ್ಮಾರಕ ಸಭಾಂಗಣ, ನೃಪತುಂಗ ರಸ್ತೆ. ಭಾನುವಾರ ಬೆಳಿಗ್ಗೆ 10.30

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.