ಆ ರೆಸ್ಟೊರೆಂಟ್ನ ಹಾಲ್ನಲ್ಲಿಯೇ ಓಪನ್ ಲೈವ್ ಕಿಚನ್. ಅಲ್ಲಿ ಮೂವರು ಬಾಣಸಿಗರು ಒಂದಿಲ್ಲೊಂದು ಕೆಲಸದಲ್ಲಿ ತೊಡಗಿಕೊಂಡಿದ್ದರು. ಒಬ್ಬ ಬಾಣಸಿಗ ದೊಡ್ಡ ಸಿಗಡಿಯನ್ನು (ಸ್ಕ್ಯಾಂಪಿ) ಎರಡು ಭಾಗ ಮಾಡಿ ಅವುಗಳಿಗೆ ಮಸಾಲೆ ಸವರಿ ಗ್ರಿಲ್ ಮೇಲಿಟ್ಟು ಬೇಯಿಸುತ್ತಿದರೆ, ಮತ್ತೊಬ್ಬ ಬಾಷಾ ಮೀನಿನ ತುಂಡಿಗೆ ಹಸಿರು ಮೆಣಸಿನಕಾಯಿ, ಬೆಳ್ಳುಳ್ಳಿ, ಕರಿಬೇವು ಮಸಾಲೆ ಹಚ್ಚಿ ಬಾಳೆ ಎಲೆಯಲ್ಲಿ ಇಟ್ಟು ಸ್ಟೀಮ್ ಮಾಡುತ್ತಿದ್ದರು. ಇದರ ಹೆಸರು ಆಂಧ್ರ ಸ್ಟೀಮ್ಡ್ ಫಿಶ್.
ಕೋರಮಂಗಲ ಐದನೇ ಬ್ಲಾಕ್ನಲ್ಲಿರುವ ಬಾನ್ಸೌತ್ ರೆಸ್ಟೋರೆಂಟ್ನಲ್ಲಿ ನಡೆಯುತ್ತಿರುವ ಗೇಮ್ ಆಫ್ ಪ್ರಾನ್ಸ್ ಆಹಾರೋತ್ಸವದಲ್ಲಿ ಬಾಣಸಿಗರು ಬಗೆಬಗೆ ಸೀಫುಡ್ಗಳನ್ನು ಸಿದ್ಧಪಡಿಸುತ್ತಿದ್ದರು.
ಮದುರೆಯ ವಿಶೇಷ ತಿನಿಸು ಕಾರ್ನ್ ಚೀಸ್ ಬೋಂಡ, ಚಿಲ್ಲಿ ಕರ್ಡ್ ಬಾಲ್ಸ್, ಸಣ್ಣ ಸಣ್ಣ ತುಣುಕಿನ ಡೋಕ್ಲ ಸ್ಯಾಂಡ್ವಿಚ್, ಖಾರದ ರುಚಿ ನೀಡುವ ಗೋಬಿ 65 ಸೇರಿದಂತೆ 10 ಬಗೆಯ ವೆಜ್ ಸ್ಟಾರ್ಟರ್ಗಳು ಆಯ್ಕೆಗಿದ್ದವು.
ಮಲ್ಲೇಶ್ವರ, ಹಲಸೂರು ಹಾಗೂ ಟೌನ್ಹಾಲ್ನಿಂದ ಬಂದಿದ್ದ ನಾಲ್ವರು ಸ್ನೇಹಿತರು ಆಂಧ್ರ ಸ್ಟೀಮ್ಡ್ ಫಿಶ್ ಸವಿಯುತ್ತಿದ್ದರು. ‘ಬಾಳೆ ಎಲೆಯ ಫ್ಲೇವರ್ನಲ್ಲಿ ಬೆಂದ ಮೀನು ಹೆಚ್ಚು ರುಚಿಯಾಗಿದೆ. ಜೊತೆಗೆ ಸಿಗಡಿಯಲ್ಲೂ ಬಹಳಷ್ಟು ತಿನಿಸುಗಳನ್ನು ಮಾಡಿದ್ದಾರೆ.
ಅದರಲ್ಲೂ ಮೆಣಸು ಮತ್ತು ಕರಿಬೇವು ಮಸಾಲೆಯ ಚೆಮ್ಮೀನ್ ಚುಟ್ಟಡು ಬಹಳ ಇಷ್ಟವಾಯಿತು. ಸ್ನೇಹಿತರೆಲ್ಲ ಒಟ್ಟಾಗಿ ನಗರದ ರೆಸ್ಟೋರೆಂಟ್ಗಳಿಗೆ ಹೋಗುತ್ತೇವೆ. ಅಲ್ಲಿನ ವಿಶೇಷ ತಿನಿಸುಗಳ ರುಚಿ ನೋಡುತ್ತೇವೆ’ ಎಂದರು ಮಲ್ಲೇಶ್ವರದ ವಿನೋದ್.
ಗೋವನ್ ಕ್ರಿಸ್ಪಿ ಸ್ಕ್ವಿಡ್, ಚಿಕನ್ ಘೀ ರೋಸ್ಟ್ ಸೇರಿದಂತೆ 10 ಬಗೆಯ ನಾನ್ವೆಜ್ ಸ್ಟಾರ್ಟರ್ಗಳಿವೆ. ಮೇನ್ಕೋರ್ಸ್ನಲ್ಲಿ ಸಿಗಡಿ ಬಿರಿಯಾನಿ, ಬಾನ್ಸೌತ್ ವಿಶೇಷ ಪಂಚ ಧಾನ್ಯ ಕೂರ, ವೆಜ್ ಪಲಾವ್, ಮೊಟ್ಟೆ ಖೀಮಾ ಮಸಾಲ, ನೀಲಗಿರಿ ಚಿಕನ್, ಅಲೆಪ್ಪಿ ಮೀನು ಸಾರು, ಚೆಟ್ಟಿನಾಡು ಚಿಕನ್ ಆಯ್ಕೆಗಿವೆ.
‘ನಾಲ್ಕು ವರ್ಷಗಳಿಂದ ಬಾನ್ಸೌತ್ನಲ್ಲಿ ಅಡುಗೆ ಮಾಡುತ್ತಿದ್ದೇನೆ. ಕರ್ನಾಟಕ ಸೇರಿದಂತೆ ತಮಿಳುನಾಡು, ಕೇರಳ, ಆಂಧ್ರ ಹಾಗೂ ಗೋವಾ ರಾಜ್ಯಗಳ ಸಸ್ಯಾಹಾರಿ ಹಾಗೂ ಮಾಂಸಾಹಾರಿ ತಿನಿಸುಗಳನ್ನು ಮಾಡುತ್ತೇನೆ. ದಕ್ಷಿಣ ಭಾರತೀಯ ತಿನಿಸುಗಳನ್ನು ಹಿರಿಯ ಬಾಣಸಿಗರಿಂದ ಕಲಿತದ್ದು. ನಮ್ಮಲ್ಲಿ ಸಣ್ಣ ಇಡ್ಲಿ, ಕಾಯಿ ಚಟ್ನಿ ಬಹಳ ವಿಶೇಷ ತಿನಿಸಾಗಿದೆ. ಇಡ್ಲಿಯ ಮೇಲೆ ಚಟ್ನಿಪುಡಿಯನ್ನು ಹಾಕಿರುವುದರಿಂದ ರುಚಿಯೂ ಚೆನ್ನಾಗಿರುತ್ತದೆ.
ನಮ್ಮಲ್ಲಿ ಮಾಡುವ ಗೋಬಿ 65 ಸೆಮಿ ಗ್ರೇವಿಯಾಗಿರುತ್ತದೆ. ಬೇರೆ ಕಡೆ ಡ್ರೈ ಮಾಡಿಕೊಡುತ್ತಾರೆ. ಇದು ಭಿನ್ನ ರುಚಿ ನೀಡುತ್ತದೆ’ ಎನ್ನುತ್ತಾರೆ ಬಾಣಸಿಗ ವಿಜಯ್.ಸಿಪ್ಪೆ ತೆಗೆದ ಪೂರ್ಣ ಪ್ರಮಾಣದ ಪೈನಾಪಲ್ಗೆ ಜೇನುತುಪ್ಪ, ಖಾರದಪುಡಿ, ಉಪ್ಪು ಹಾಕಿ ಗ್ರಿಲ್ಮಾಡಿ, ನಂತರ ಅದರ ಹೋಳುಗಳನ್ನು ತಟ್ಟೆಗೆ ಬಡಿಸುತ್ತಾರೆ. ಇದು ಇಲ್ಲಿನ ಮತ್ತೊಂದು ವಿಶೇಷ ತಿನಿಸು.
‘ಮಧ್ಯಾಹ್ನ ಹಾಗೂ ರಾತ್ರಿ ಎರಡು ವೇಳೆ ಬಫೆ ವ್ಯವಸ್ಥೆಯಿದೆ. ‘ಮತ್ತೆ ಮತ್ತೇ ತಿನ್ನಿ!’ ಎಂಬುದು ಬಾನ್ಸೌತ್ನ ಟ್ಯಾಗ್ಲೈನ್. ಇದು ನಮ್ಮ ಎರಡನೇ ಸೀಫುಡ್ ಆಹಾರೋತ್ಸವ. ಸೀಫುಡ್ನಲ್ಲಿ ಹೆಚ್ಚು ಜನ ಸಿಗಡಿಯನ್ನೇ ಇಷ್ಟಪಡುತ್ತಾರೆ. ಆದ್ದರಿಂದ ಹೆಚ್ಚಿನ ತಿನಿಸುಗಳನ್ನು ಸಿಗಡಿಯಲ್ಲೇ ಮಾಡಿದ್ದೇವೆ’ ಎನ್ನುತ್ತಾರೆ ರೆಸ್ಟೋರೆಂಟ್ ವ್ಯವಸ್ಥಾಪಕ ಶ್ರೀನಿವಾಸ್ ಬಿ.
ಶ್ರೀನಿವಾಸ್ ಬಿ.
ರೆಸ್ಟೊರೆಂಟ್ ವ್ಯವಸ್ಥಾಪಕ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.